ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಸೇರಬೇಕು ಇಲ್ಲವೇ ಮುಖ್ಯಮಂತ್ರಿಯವರ ಬುಲ್ಡೋಜರ್ ಭೀತಿಯನ್ನು ಎದುರಿಸಬೇಕಾಗುತ್ತದೆ ಎಂದು ಮಧ್ಯಪ್ರದೇಶದ ಸಚಿವರೊಬ್ಬರು ರಾಜ್ಯದಲ್ಲಿನ ಕಾಂಗ್ರೆಸ್ ಪದಾಧಿಕಾರಿಗಳನ್ನು ಬೆದರಿಸುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ.
ಬುಧವಾರ ಇಲ್ಲಿನ ರುಥಿಯೈ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಧ್ಯಪ್ರದೇಶದ ಪಂಚಾಯತ್ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ನೀಡಿರುವ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತರ ಕೆಲವು ಬಿಜೆಪಿ ಆಡಳಿತದ ರಾಜ್ಯಗಳಂತೆ, ವಿವಿಧ ಅಪರಾಧಗಳನ್ನು ಎದುರಿಸುತ್ತಿರುವ ಆರೋಪಿಗಳ ಮನೆಗಳ ಅಕ್ರಮ ಭಾಗಗಳನ್ನು ಅಧಿಕಾರಿಗಳು ಧ್ವಂಸ ಮಾಡುತ್ತಿದ್ದಾರೆ. ಈ ಕ್ರಮವನ್ನು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪ್ರಶಂಸಿಸಿದ್ದು, , ಇದು ನಮ್ಮ ಸರಕಾರದ ಅಪರಾಧ ಹಾಗೂ ಅಪರಾಧಿಗಳ ಕಡೆಗೆ “ಶೂನ್ಯ ಸಹಿಷ್ಣುತೆ”ಯ ಸಂಕೇತವಾಗಿದೆ ಎಂದಿದ್ದಾರೆ.
“ಬಿಜೆಪಿಗೆ ಸೇರಿಕೊಳ್ಳಿ. ನಿಧಾನವಾಗಿ ಈ ಕಡೆ (ಆಡಳಿತ ಪಕ್ಷ) ಬನ್ನಿ. 2023 ರಲ್ಲಿ ಕೂಡ (ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಿಗದಿಯಾದಾಗ) ಬಿಜೆಪಿಯು ಮಧ್ಯಪ್ರದೇಶದಲ್ಲಿ ಸರಕಾರ ರಚಿಸುತ್ತದೆ. ಚೌಹಾಣ್ ಅವರ ಬುಲ್ಡೋಜರ್ ಸಿದ್ಧವಾಗಿದೆ” ಎಂದು ಸಿಸೋಡಿಯಾ ಜನವರಿ 20 ರಂದು ನಡೆಯಲಿರುವ ರಾಘೋಗಢ ನಗರದ ನಗರಸಂಸ್ಥೆ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು ಎಂದು ವರದಿಯಾಗಿದೆ.
ಇದಕ್ಕೆ ತಿರುಗೇಟು ನೀಡಿರುವ ಗುನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರಿಶಂಕರ್ ವಿಜಯವರ್ಗಿಯ ಅವರು, “ಸಚಿವರು ತಮ್ಮ ಭಾಷೆಯಲ್ಲಿ ಸಂಯಮವನ್ನು ರೂಢಿಸಿಕೊಳ್ಳಬೇಕು. ಜನವರಿ 20 ರಂದು ನಡೆಯುವ ಚುನಾವಣೆಯಲ್ಲಿ ರಾಘೋಗಢ ಜನರು ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ” ಎಂದು ಹೇಳಿದರು.
ರಾಘೋಗಢವು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸಂಸದ ದಿಗ್ವಿಜಯ ಸಿಂಗ್ ಅವರ ತವರು ಕ್ಷೇತ್ರವಾಗಿದೆ ಹಾಗೂ ಅವರ ಮಗ ಜೈವರ್ಧನ್ ಸಿಂಗ್ ಸ್ಥಳೀಯ ಶಾಸಕರಾಗಿದ್ದಾರೆ.
https://play.google.com/store/apps/details?id=com.speed.newskannada