ವಿವಾದಗಳ ಮೂಲಕವೇ ಪ್ರಚಾರ ಗಿಟ್ಟಿಸಿಕೊಂಡ ಮಾಜಿ ಬಿಗ್ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಇದೀಗ ಮತ್ತೊಂದು ವಿವಾದಕ್ಕೆ ಮುನ್ನುಡಿ ಹಾಡುವಂಥಹಾ ಹೇಳಿಕೆಯೊಂದನ್ನು ನೀಡಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಪ್ರಶಾಂತ್ ಸಂಬರ್ಗಿ ತಮ್ಮನ್ನು ತಾವು ಭಯೋತ್ಪಾದಕ ಎಂದು ಹೇಳಿಕೊಂಡಿದ್ದಾರೆ.
ಅಲ್ಪ ಬದಲಾವಣೆ ಎಂದರೆ ಅವರು ಹಿಂದು ಭಯೋತ್ಪಾದಕ ಅಂತೆ!
ಅಝಾನ್ ವಿರುದ್ಧ ಹೋರಾಟ ಮಾಡುವವರು ಹಿಂದೂ ಭಯೋತ್ಪಾಧಕರು ಅಂತಾ ಹೇಳಿರುವ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಮಾತನಾಡಿರುವ ಪ್ರಶಾಂತ್ ಸಂಬರಗಿ ”ಹಿಂದೂಗಳ ರಕ್ಷಣೆಗಾಗಿ, ಹಿಂದೂ ಧರ್ಮ ಜಾಗೃತಿಗಾಗಿ ಮಾಡುವ ಕೆಲಸವನ್ನು ಭಯೋತ್ಪಾದನೆ ಎಂದು ಹೇಳೋದಾದರೆ, ನಾನು ಹಿಂದೂ ಟೆರರಿಸ್ಟ್ ಎಂದು ಹೆಮ್ಮೆಯಿಂದ ಹೇಳುತ್ತೇನೆ” ಎಂದಿದ್ದಾರೆ.
”ಬಿಕೆ ಹರಿಪ್ರಸಾದ್ ಅವರ ಮನಸ್ಥಿತಿಯನ್ನು ಈ ಹೇಳಿಕೆ ತೋರಿಸುತ್ತಿದೆ. ನಾನು ಒಬ್ಬ ಹಿಂದೂ ಟೆರರಿಸ್ಟ್. ಹಿಂದುಗಳ ರಕ್ಷಣೆಗೆ, ಹಿಂದೂಗಳ ಒಗ್ಗಟ್ಟಿಗಾಗಿ, ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ನಾನೊಬ್ಬ ಹಿಂದು ಟೆರರಿಸ್ಟ್ ಆಗುತ್ತೇನೆ. ಒಳ್ಳೆಯ ಕೆಲಸಕ್ಕೆ ಉಗ್ರವಾದಿ ಆದರೇನು? ಸ್ವಾತಂತ್ರ ಹೋರಾಟಗಾರ ಆದರೇನು?” ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ಪಾಲಿಸಿ ಎಂದರೆ ನಾವು ಉಗ್ರವಾದಿಗಳು ಆಗುತ್ತೇವೆ. ಶಬ್ಧ ಮಾಲಿನ್ಯದ ಬಗ್ಗೆ ಹೋರಾಟ ಮಾಡಿದರೆ ನಾವು ಭಯೋತ್ಪಾದಕರಾಗುತ್ತೇವೆ. ಹಾಗಾದರೆ ಸುಪ್ರೀಂಕೋರ್ಟ್ ನ ನ್ಯಾಯಾಧೀಶರು ಕೂಡಾ ಭಯೋತ್ಪಾದಕರಾ? ಎಂದು ಸಂಬರ್ಗಿ ಪ್ರಶ್ನೆ ಮಾಡಿದ್ದಾರೆ.
ಸುಪ್ರೀಂಕೋರ್ಟ್ ಬೆಳಗ್ಗೆ ಆರು ಗಂಟೆಯ ಒಳಗೆ ಯಾವುದೇ ಜೋರಾದ ಶಬ್ಧ ಇಡಬಾರದು ಎಂಬ ಆದೇಶ ಕೊಟ್ಟು 22 ವರ್ಷಗಳು ಆಗಿದೆ. ಆದರೆ ರಾಜ್ಯದಲ್ಲಿ ಇನ್ನೂ ಆದೇಶವನ್ನು ಜಾರಿಗೆ ತರಲಾಗಿಲ್ಲ. ಆದೇಶ ಕೊಟ್ಟ ನ್ಯಾಯಾಧೀಶರನ್ನು ಭಯೋತ್ಪಾದಕರು ಎಂದು ಕರೆಯುತ್ತೀರಾ? ಸುಪ್ರೀಂಕೋರ್ಟನ್ನು ಭಯೋತ್ಪಾದಕ ಸಂಘಟನೆಗೆ ಹೋಲಿಕೆ ಮಾಡುತ್ತಿದ್ದೀರಾ? ಎಂದು ಪ್ರಶಾಂತ್ ಸಂಬರ್ಗಿ ಕೇಳಿದ್ದಾರೆ.
ಈ ಭಾರತದಲ್ಲಿ ಎಲ್ಲರಿಗೂ ಒಂದೇ ಕಾನೂನು ಜಾರಿಯಾಗಬೇಕು. ದೇಶದಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸೈಲೆಂಟ್ ಜೋನ್ ಇರಬೇಕು. ದೇಶದ 12 ಹೈಕೋರ್ಟ್ ಗಳು ಇದನ್ನು ಹೇಳಿದೆ. ಬಿ.ಕೆ ಹರಿಪ್ರಸಾದ್ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಒಂದು ಜಾತಿಯನ್ನು ಭದ್ರವಾಗಿ ಇಟ್ಟುಕೊಳ್ಳಲು ಹೊರಟಿದ್ದಾರೆ ಎಂದಿದ್ದಾರೆ.
”ಉಗ್ರ ಕಸಬ್ ನನ್ನು ಹಿಂದೂ ಉಗ್ರವಾದಿ ಎಂದು ಬಿಂಬಿಸಲು ಕಾಂಗ್ರೆಸ್ ಮುಂದಾಗಿತ್ತು. ಕಸಬ್ ಜೀವಂತ ವಾಗಿ ಸಿಗದಿದ್ದರೆ ಆತನನ್ನು ಹಿಂದೂ ಅಂತಾ ಹೇಳುತ್ತಿದ್ದರು. ಕರ್ನಾಟಕದಲ್ಲಿ ಹಲವು ಬಾರಿ ಹಿಂದೂಗಳನ್ನು ಒಡೆಯಲು ಕಾಂಗ್ರೆಸ್ ಮುಂದಾಗಿದೆ. ಮುಸಲ್ಮಾನ ಧರ್ಮವನ್ನು ಒಡೆಯಲು ಕಾಂಗ್ರೆಸ್ ಯಾಕೆ ಮುಂದಾಗುವುದಿಲ್ಲ. ಶಿಯಾ ಬೇರೆ ಸುನ್ನಿ ಬೇರೆ ಎಂದು ಹೇಳುವ ಗಂಡಸ್ತನ ನಿಮಗಿಲ್ಲ. ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಮಾಡುತ್ತಿದೆ ಅಂತಾ ಉಡುಪಿಯಲ್ಲಿ ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.
ಯಾವುದೇ ಸೈದ್ಧಾಂತಿಕ ಗುರಿಯನ್ನು ತಲುಪಲು ಹಿಂಸೆಯ ದಾರಿ ಹಿಡಿಯುವ ವ್ಯಕ್ತಿಯನ್ನು ಭಯೋತ್ಪಾದ ಎಂದು ಕರೆಯಲಾಗುತ್ತದೆ ಎನ್ನುತ್ತದೆ ವಿಕಿಪೀಡಿಯ. ಇದೇ ಕಾರಣಕ್ಕೆ ಭಯೋತ್ಪಾದನೆಗೆ ಧರ್ಮವಿಲ್ಲ ಎಂಬ ಮಾತು ಮೊದಲಿನಿಂದಲೂ ಚಾಲ್ತಿಯಲ್ಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada