ನವದೆಹಲಿ, ಜೂ.3-ಆತಂಕಕಾರಿ ಬೆಳವಣಿಗೆಯಲ್ಲಿ ಇದ್ದಕ್ಕಿದ್ದಂತೆ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗಿದ್ದು, 84 ದಿನಗಳ ಬಳಿಕ ದೈನಂದಿನ ಸೋಂಕು 4000 ಗಡಿ ದಾಟಿದೆ. ಕೇಂದ್ರ ಆರೋಗ್ಯ ಇಲಾಖೆ ಇಂದು ಬೆಳಗ್ಗೆ ಬಿಡುಗಡೆ ಮಾಡಲಾದ ಬುಲೆಟಿನ್ನಲ್ಲಿ ಸೋಂಕಿನ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ 4041 ಸೋಂಕಿನ ಪ್ರಕರಣಗಳು ದಾಖಲಾಗಿವೆ. 10 ಮಂದಿ ಸಾವನ್ನಪ್ಪುವ ಮೂಲಕ ಒಟ್ಟು ಸಾವಿನ ಸಂಖ್ಯೆ 5,24,651ರಷ್ಟಾಗಿದೆ. ಸಾವಿನ ಪ್ರಮಾಣ ಶೇ.1.22ರಷ್ಟಿದೆ. ಜೂನ್ನಲ್ಲಿ ಕೋವಿಡ್ 4ನೆ ಅಲೆ ಎದುರಾಗುವ ನಿರೀಕ್ಷೆಗಳಿವೆ ಎಂದು ಐಐಟಿ ಖಾನ್ಪುರ ವರದಿ ನೀಡಿತ್ತು. ಈ ಮೊದಲು ಎರಡು ಮತ್ತು ಮೂರನೆ ಅಲೆ ಬಗ್ಗೆಯೂ ಇದೇ ಸಂಸ್ಥೆ ಮುನ್ಸೂಚನೆ ನೀಡಿದ್ದನ್ನು ಸ್ಮರಿಸಬಹುದಾಗಿದೆ.
ಕೋವಿಡ್ 3ನೆ ಅಲೆ ಹೆಚ್ಚು ಅಪಾಯ ಮಾಡದ ಹಿನ್ನೆಲೆಯಲ್ಲಿ ಈಗಾಗಲೇ ಜನಸಮುದಾಯ ಕೋವಿಡ್ ಶಿಷ್ಟಾಚಾರಗಳನ್ನು ನಿರ್ಲಕ್ಷಿಸುತ್ತಿದೆ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಹಲವಾರು ಮುನ್ನೆಚ್ಚರಿಕೆ ಕ್ರಮಗಳ ಅಭ್ಯಾಸ ತಪ್ಪಿ ಹೋಗಿವೆ. ಆರ್ಥಿಕ ಚಟುವಟಿಕೆಗಳು, ಮಾಲ್, ಸಿನಿಮಾ, ಪ್ರಯಾಣ, ಸಾಂಸ್ಕøತಿಕ ಚಟುವಟಿಕೆಗಳು, ರಾಜಕೀಯ ಸಮಾವೇಶಗಳು ಯಥಾರೀತಿ ಜನಸಂದಣಿಗೆ ಕಾರಣವಾಗಿವೆ.
ಕಳೆದ ತಿಂಗಳು ಸೋಂಕಿನ ಪ್ರಮಾಣ 2000 ಗಡಿ ದಾಟಿತ್ತಾದರೂ ಅದು ಅಷ್ಟಕ್ಕೇ ಸೀಮಿತವಾಗಿ ಕ್ರಮೇಣ ಕ್ಷೀಣಗೊಂಡಿತ್ತು. ಒಂದೆರಡು ದಿನಗಳಲ್ಲಿ ಸಾವಿನ ಪ್ರಕರಣಗಳು ಹೆಚ್ಚಾದವಾದರೂ ಅದು ಗಮನಾರ್ಹವಾಗಿರಲಿಲ್ಲ. ಆದರೆ, ಇಂದು ವರದಿಯಾದ ದೈನಂದಿನ ಸೋಂಕಿನ ಪ್ರಮಾಣ ಕೊಂಚ ಆತಂಕಕಾರಿಯಾಗಿದೆ. ದೇಶದ ಒಟ್ಟು ಸೋಂಕಿನ ಸಂಖ್ಯೆ 4,31,68,585ರಷ್ಟಾಗಿದೆ. ಸಕ್ರಿಯ ಪ್ರಕರಣಗಳು 21,177ರಷ್ಟಿವೆ.
ಸಕ್ರಿಯ ಪ್ರಕರಣಗಳ ಪ್ರಮಾಣ 0.05ರಷ್ಟಿದ್ದರೂ ಕೂಡ ನಿರ್ಲಕ್ಷ್ಯತೆ ಸಲ್ಲ ಎಂಬ ಎಚ್ಚರಿಕೆ ನೀಡಲಾಗಿದೆ. ಚೇತರಿಕೆಯ ಪ್ರಮಾಣ ಶೇ.98.74ರಷ್ಟಿದೆ.
10 ಮಂದಿ ಸಾವಿನ ಪ್ರಕರಣಗಳಲ್ಲಿ ಕೇರಳ 6, ದೆಹಲಿ 2, ಮಹಾರಾಷ್ಟ್ರ ಮತ್ತು ನಾಗಾಲ್ಯಾಂಡ್ನಲ್ಲಿ ತಲಾ ಒಂದು ವರದಿಯಾಗಿವೆ. ಕೋವಿಡ್ ಲಸಿಕೆಯ ಡೋಸ್ಗಳು 193.83 ಕೋಟಿ ದಾಟಿವೆ. ಈಗಾಗಲೇ ಲಸಿಕೆ ಪಡೆದವರನ್ನು ಸೋಂಕು ಬಾಸುವುದಿಲ್ಲ ಎಂಬ ಅಂದಾಜುಗಳಿದ್ದವು. ಓಮಿಕ್ರಾನ್ ಮತ್ತು ಅದರ ಉಪತಳಿಗಳು, ಡೆಲ್ಟಾ ರೂಪಾಂತರಿ ಸೇರಿದಂತೆ ಹಲವಾರು ಸೋಂಕುಗಳು ದೇಶದಲ್ಲಿ ಸಕ್ರಿಯವಾಗಿವೆ.
ಕಾನ್ಪುರ ಐಐಟಿ ವರದಿ ನಂಬುವುದಾದರೆ ಈ ತಿಂಗಳಲ್ಲಿ 4ನೆ ಅಲೆಯ ಪರಿಣಾಮವನ್ನು ದೇಶ ಎದುರಿಸಬೇಕಾಗಬಹುದು. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ರಾಜ್ಯದ ಆರೋಗ್ಯ ಸಚಿವ ಡಾ.ಸುಧಾಕರ್ ಸೇರಿದಂತೆ ಹಲವಾರು ಮಂದಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯೂ ಕೂಡ ಸೋಂಕಿಗೆ ಒಳಗಾಗಿರುವುದಾಗಿ ವರದಿಯಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada