ಕೋಟಿ ನಿರ್ಮಾಪಕ ರಾಮು ಅಗಲಿದ ಬಳಿಕ ಇದೇ ಮೊದಲ ಬಾರಿಗೆ ಮಾಲಾಶ್ರೀ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು. ನಿರ್ಮಾಪಕ ರಾಮು ನಿರ್ಮಿಸಿದ್ದ ಕೊನೆಯ ಸಿನಿಮಾ ‘ಅರ್ಜುನ್ ಗೌಡ’ ಚಿತ್ರದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಕನಸಿನ ರಾಣಿ ಮಾಲಾಶ್ರೀ ಭಾಗವಹಿಸಿದ್ದರು.
ರಾಮು ನೆನಪಿಗಾಗಿ, ಅವರ ಬ್ಯಾನರ್ನಲ್ಲಿ ನಟಿಸಿದ ಕನ್ನಡದ ಎಲ್ಲಾ ನಟರೂ ಒಂದೇ ವೇದಿಕೆ ಮೇಲೆ ಸೇರಿದ್ದರು.
ಕ್ರೇಜಿಸ್ಟಾರ್ ರವಿಚಂದ್ರನ್, ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ರಿಯಲ್ಸ್ಟಾರ್ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ಪ್ರಜ್ವಲ್ ದೇವರಾಜ್, ದೇವರಾಜ್, ಸಾಧುಕೋಕಿಲಾ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರು ಒಂದೇ ವೇದಿಕೆ ಮೇಲೆ ಜೊತೆಯಾಗಿದ್ದರು. ಈ ವೇಳೆ ರಾಮು ನಿರ್ಮಿಸಿದ ಆರು ಸಿನಿಮಾಗಳಲ್ಲಿ ನಟಿಸಿರುವ ಶಿವರಾಜ್ಕುಮಾರ್ ಮತ್ತೊಂದು ಸಿನಿಮಾದಲ್ಲಿ ನಟಿಸುವುದಾಗಿ ವೇದಿಕೆ ಮೇಲೆನೇ ಅನೌನ್ಸ್ ಮಾಡಿದರು. ಆ ಸಿನಿಮಾ ಯಾವುದು? ಅದರ ಟೈಟಲ್ ಏನು ಎಂದು ತಿಳಿದುಕೊಳ್ಳಲು ಮುಂದೆ ಓದಿ.
ಸಿಂಹ’ ಸಿನಿಮಾದಲ್ಲಿ ನಟಿಸಲು ಶಿವಣ್ಣ ಗ್ರೀನ್ ಸಿಗ್ನಲ್;ಶಿವಣ್ಣ ನಟಿಸಿದ ಸಿಂಹದ ಮರಿ, ಎಕೆ 47 ಅಂತಹ ಸಿನಿಮಾಗಳನ್ನು ನಿರ್ಮಿಸಿದ್ದು ರಾಮು. ಹೀಗಾಗಿ ಶಿವರಾಜ್ಕುಮಾರ್ಗೆ ರಾಮು ಬ್ಯಾನರ್ ಮೇಲೆ ಎಲ್ಲಿಲ್ಲದ ಅಭಿಮಾನ. ಈಗ ರಾಮು ಸ್ಥಾನದಲ್ಲಿ ಪತ್ನಿ ಮಾಲಾಶ್ರೀ ನಿಂತು ಆ ನಿರ್ಮಾಣ ಸಂಸ್ಥೆಯನ್ನು ಮುಂದೆ ತೆಗೆದುಕೊಂಡು ಹೋಗಲಿದ್ದಾರೆ. ‘ಅರ್ಜುನ್ ಗೌಡ’ ಸಿನಿಮಾವನ್ನೂ ಮಾಲಾಶ್ರೀ ಅವರೇ ಬಿಡುಗಡೆ ಮಾಡುತ್ತಿದ್ದಾರೆ. ಈ ವೇಳೆ ರಾಮು ಬ್ಯಾನರ್ನಲ್ಲಿ ನಟಿಸಿದ ಸ್ಟಾರ್ ನಟರನ್ನು ಮಾಲಾಶ್ರೀ ಒಟ್ಟಿಗೆ ಸೇರಿಸಿದ್ದರು. ಈ ವೇಳೆ ಶಿವಣ್ಣ ರಾಮು ಬ್ಯಾನರ್ನಲ್ಲಿ ನಟಿಸಲಿರುವ 7ನೇ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದರು. “ರಾಮು ಪ್ರೊಡಕ್ಷನ್ನಲ್ಲಿ ನಾನು 6 ಸಿನಿಮಾ ಮಾಡಿದ್ದೀನಿ. ನಿಮ್ಮ ಪ್ರೊಡಕ್ಷನ್ ಅನ್ನು ನಿಲ್ಲಸಬೇಡಿ. ಇದೇ ಕೊನೆಯ ಸಿನಿಮಾ ಅಂತ ಹೇಳಬೇಡಿ. ನೀವು ಮುಂದುವರೆಸಿ, ನಾವೆಲ್ಲರೂ ನಿಮ್ಮ ಜೊತೆಯಲ್ಲಿ ಇದ್ದೀವಿ. ಸಿಂಹ ನಿಮ್ಮ ಬ್ಯಾನರ್ನಲ್ಲಿಯೇ ಮಾಡೋಣ. ನಾನು ಖಂಡಿತಾ ಮಾಡುತ್ತೇನೆ. ಇದು ನಾನು ಮಾಡುತ್ತಿರುವ ಪ್ರಾಮಿಸ್.” ಎಂದು ಮಾಲಾಶ್ರೀಗೆ ಶಿವಣ್ಣ ಮಾತು ಕೊಟ್ಟಿದ್ದಾರೆ.
ಸಿಂಹದ ಮರಿ’ ಶೂಟಿಂಗ್ ನೆನಪಿಸಿಕೊಂಡ ಶಿವಣ್ಣ;
“ರಾಮು ಬಗ್ಗೆ ಎರಡು ಘಟನೆಗಳನ್ನು ಹೇಳುತ್ತೇನೆ. ಸಿಂಹದ ಮರಿ ಶೂಟಿಂಗ್ ಟೈಮ್ನಲ್ಲಿ ಜೈ ಪುರದಲ್ಲಿ 700-800 ಕುದುರೆಗಳ ಜೊತೆ ಚೇಸಿಂಗ್ ಸೀನ್ ಇತ್ತು. ಆಗ ನಮ್ಮ ಕ್ಯಾಮರಾಮ್ಯಾನ್ ಒಬ್ಬರು ಹೋಗಿಬಿಟ್ಟಿದ್ದರು. ಅವತ್ತೇ ನಾನು ಶೂಟಿಂಗ್ಗೆ ಎಂಟ್ರಿ ಕೊಟ್ಟಿದ್ದೆ. ಕ್ಯಾಮರಾಮ್ಯಾನ್ ಹೆದರಿಕೊಂಡು ಎಲ್ಲರೂ ಮಾಡಬೇಕಾ ಬೇಡ್ವಾ ಅಂತಿದ್ರು. ರಾಮು ಅವರು ಅಲ್ಲಿಂದಲೇ ಹೇಳಿದ್ರು. ಶಿವಣ್ಣ ನೀವು ಹೇಳಿ ಬೇಡ ಅಂದರೆ ಕ್ಯಾನ್ಸಲ್ ಮಾಡಿಬಿಡೋಣ ಅಂತ. ಇಲ್ಲಾ ರಾಮು ಬೇಡ, ಆಗಿದ್ದು ಆಗಿ ಹೋಯ್ತು. ಮತ್ತೆ ಕಳಿಸಿ ಕರೆಸಿ ಎಲ್ಲಾ ಖರ್ಚು ಜಾಸ್ತಿ ಆಗುತ್ತೆ ಅಂತ ಹೇಳಿ ಶೂಟಿಂಗ್ ಮುಂದುವರೆಸಿದ್ದೆವು.” ಎಂದು ರಾಮು ನಿರ್ಮಾಣದಲ್ಲಿ ಸಿಂಹದ ಮರಿ ಸಿನಿಮಾ ಚಿತ್ರೀಕರಣದ ಘಟನೆಯನ್ನು ನೆನೆಸಿಕೊಂಡಿದ್ದಾರೆ.
‘AK 47’ ಶಿವಣ್ಣನ 50ನೇ ಸಿನಿಮಾ;
“AK 47, ನನ್ನ 50ನೇ ಸಿನಿಮಾ. ಆ ಸಿನಿಮಾ ಪ್ರಿವಿವ್ಯೂ ಊರ್ವಶಿ ಥಿಯೇಟರ್ನಲ್ಲಿತ್ತು. ಆಗ ಅಪ್ಪಾಜಿ ಬಂದಿದ್ರು. ಅಪ್ಪಾಜಿ ನಾವೆಲ್ಲರೂ ಎಂಟಿಆರ್ಗೆ ಊಟಕ್ಕೆ ಹೋಗಿದ್ದೆವು. ಕನ್ನಡದಲ್ಲಿ ಮೊದಲ ಡಿಟಿಎಸ್ ಸಿನಿಮಾ. ನಾನು ಬರುವಾಗ ಒಂದು ಜವಾಬ್ದಾರಿ ಕೊಟ್ಟಿದ್ದರು. ದುಡ್ಡು ಕೊಡ್ತಾರೆ ತೆಗೆದುಕೊಂಡು ಬನ್ನಿ ಅಂದಿದ್ರು. ಅವತ್ತೇ ಗೊತ್ತಾಗಿದ್ದು, ಹಣದ ಬಾರ ಎಷ್ಟು ಅಂತ. ನಾನು ನಟಿಸಿ ಹೋಗುತ್ತೇನೆ ಅಷ್ಟೇ. ಬ್ಯುಸಿನೆಸ್ ಎಲ್ಲಾ ಗೀತಾನೇ ನೋಡಿಕೊಳ್ಳುತ್ತಾರೆ.” ಎಂದು ಶಿವಣ್ಣ ಹೇಳಿದ್ದಾರೆ.
ಮಾಲಾಶ್ರೀ ಮಾತಾಡಿಸಲು ಭಯ ಆಗಿತ್ತು;
“ರಾಮು ಅವರು ಹೋದಾಗ ನನಗೆ ತುಂಬಾನೇ ದುಃಖ ಆಯ್ತು. ಮೊನ್ನೆನೇ ಮಾತಾಡಿದ್ದು, ಅದೂವರೆಗೂ ನಾನು ಮಾತಾಡೇ ಇರಲಿಲ್ಲ. ಏನು ಮಾತಾಡಬೇಕು ಅಂತಾನೇ ಗೊತ್ತಾಗಲಿಲ್ಲ. ಮಾತಾಡಿಬಿಟ್ಟರೆ ಎಲ್ಲಿ ನಾನು ಅತ್ತು ಬಿಡುತ್ತೇನೋ ಅಂತ ಭಯ ಆಗಿತ್ತು ನನಗೆ. ಅಪ್ಪು ಅಗಲಿದ ಬಳಿಕ ಮಾಲಾಶ್ರೀ ಮನೆಗೆ ಬಂದಾಗಲೇ ನಾನು ಅವರನ್ನು ನೋಡಿದ್ದು.” ಎಂದು ರಾಮು ಅಗಲಿದ ಘಟನೆ ಬಗ್ಗೆ ಮಾತಾಡಿದ್ದಾರೆ. ಇದೇ ವೇಳೆ ‘ಅರ್ಜುನ್ ಗೌಡ’ ಸಿನಿಮಾ ಯಶಸ್ಸು ಕಾಣಲಿ ಅಂತ ಮಾಲಾಶ್ರೀಗೆ ಶಿವಣ್ಣ ಶುಭ ಹಾರೈಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: