ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜರಾಜೇಶ್ವರಿ ನಗರ ವಲಯದ ವ್ಯಾಪ್ತಿಯಲ್ಲಿ ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಇಂದು ಮಾಗಡಿ ರಸ್ತೆಯಿಂದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
• ಮಾಗಡಿ ರಸ್ತೆ ಬಳಿಯ ವಾರ್ಡ್ ರಸ್ತೆಗಳಲ್ಲಿ ಡಾಂಬರೀಕರಣ ಮಾಡಿರುವುದನ್ನು ಪರಿಶೀಲಿಸಿದ ವೇಳೆ ರಸ್ತೆ ಮೇಲೆ ಬೀಳುವ ನೀರು ಚರಂಡಿಗಳಿಗೆ ಸರಿಯಾಗಿ ಹೋಗಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಿದರು. ಈ ಸಂಬಂಧ ಡಾಂಬರೀಕರಣ ಮಾಡುವ ಮುಂಚೆಯೇ ರಸ್ತೆಯನ್ನು ಪರಿಶೀಲಿಸಿಕೊಂಡು ಸರಿಯಾದ ಅನುಕ್ರಮದಲ್ಲಿ ಡಾಂಬರೀಕರಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
• ಮಾಗಡಿ ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗಗಳಲ್ಲಿರುವ ಮಳಿಗೆಗಳು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಇದರಿಂದ ಪಾದಚಾರಿಗಳ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗುತ್ತದೆ ಎಂಬುದನ್ನು ಗಮನಿಸಿ ಒತ್ತುವರಿ ತೆರವು ಮಾಡಿರುವವರಿಗೆ ಒತ್ತುವರಿ ತೆರವುಗೊಳಿಸುವಂತೆ ಎಚ್ಚರಿಕೆ ನೀಡಬೇಕು. ಒತ್ತುವರಿ ತೆರವುಗೊಳಿಸದಿದ್ದರೆ ಮುಲಾಜಲ್ಲದೆ ದಂಡ ವಿಧಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
• ವಿಜ್ಞೇಶ್ವರ ನಗರ ವ್ಯಾಪ್ತಿಯಲ್ಲಿ ಡಾಂಬರೀಕರಣ ಮಾಡಲು ಜೆಲ್ಲಿ ಕಲ್ಲು ಹಾಕಿದ್ದು, ಅದಕ್ಕೆ ಕೂಡಲೆ ಡಾಂಬರೀಕರಣ ಮಾಡಲು ಸೂಚನೆ ನೀಡಿದರು.
• ಹೇರೋಹಳ್ಳಿ ವಾರ್ಡ್ ನಲ್ಲಿ ಹೊಸದಾಗಿ ಡಯಾಲಿಸಿಸ್ ಸೆಂಟರ್ ಅನ್ನು ಸ್ಥಾಪಿಸಿದ್ದು, ಅದನ್ನು ಪರಿಶೀಲಿಸಿ ಬಾಕಿಯಿರುವ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿಕೊಂಡು ಶೀಘ್ರ ಸಾರ್ವಜನಿಕರ ಸೇವೆಗೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
• 80 ಅಡಿ ಕೆಂಗೇರಿ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಬೆಸ್ಕಾಂ ಪೋಲ್ ಅಳವಡಿಸಿದ್ದು, ಅದಕ್ಕಳವಡಿಸಿರುವ ಕಂಬಿಗಳು ಪಾದಚಾರಿಗಳ ಓಡಾಟಕ್ಕೆ ಅಡಚಣೆಯಾಗುವುದನ್ನು ಗಮನಿಸಿ, ಬೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ ಕಂಬಿಗಳು ಪಾದಚಾರಿಗಳಿಗೆ ಸಮಸ್ಯೆಯಾಗದ ರೀತಿ ಅಳವಡಿಸುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
• ಕೆಂಗೇರಿ 80 ಅಡಿ ರಸ್ತೆಯಲ್ಲಿ ಗ್ರೀನ್ ಹೌಸ್ ಎಂಬ ತರಕಾರಿ ಮಳಿಗೆಯು ಪಾದಚಾರಿ ಮಾರ್ಗದಲ್ಲಿ ರಾಶಿ-ರಾಶಿ ತರಕಾರಿಗಳನ್ನು ಹಾಕಿದ್ದು, ಕೂಡಲೆ ಪಾದಚಾರಿ ಮಾರ್ಗದಲ್ಲಾಕಿರುವ ತರಕಾರಿಗಳನ್ನು ತೆರವುಗೊಳಿಸಬೇಕು. ಮತ್ತೆ ಪಾದಚಾರಿ ಮಾರ್ಗದಲ್ಲಿ ಹಾಕಿದಲ್ಲಿ ಮಳಿಗೆ ಮಾಲೀಕರಿಗೆ 50,000 ರೂ. ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
• ಮುಖ್ಯ ರಸ್ತೆ ಬದಿಯ ಪಾದಚಾರಿ ಮಾರ್ಗಗಳಲ್ಲಿ ವಾಹನಗಳ ಪಾರ್ಕಿಂಗ್ ಮಾಡದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
• ಪಾದಚಾರಿ ಮಾರ್ಗದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹಾಕಿದ್ದು, ಅದನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
• ಕೆಂಗೇರಿಯ 80 ಅಡಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಮಾಡಿದ್ದು, ಎಕ್ಸ್ಪೆನ್ಷನ್ ಜಾಯಿಂಟ್ ಕೆಲಸ ಮಾಡಲಾಗುತ್ತಿದ್ದು, ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗದಂತೆ ಕೆಲಸ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
• ಕೆಂಗೇರಿ 80 ಅಡಿ ರಸ್ತೆ, ಜ್ಞಾನಜ್ಯೋತಿ ನಗರದ ಹೊಯ್ಸಳ ವೃತ್ತ ಬಳಿ ಮಳಿಗೆಗಳ ಮುಭಾಗ ಪಾದಚಾರಿ ಮಾರ್ಗದಲ್ಲಿ ನಾಮಫಲಕಗಳ ಪೋಲ್ ಗಳನ್ನು ಅಳವಡಿಸಿಕೊಂಡಿದ್ದು, ಅಂತಹ ಪೋಲ್ ಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
• ಹೊಯ್ಸಳ ವೃತ್ತದ ಬಳಿ ಎಸ್.ಜಿ ನಿಲಯದಿಂದ ಸಂಪೂರ್ಣ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು, ರಸ್ತೆಗೆ ಬ್ಯಾರಿಕೇಡ್ ಗಳನ್ನು ವೆಲ್ಡಿಂಗ್ ಮಾಡಿದ್ದು, ಅದನ್ನು ಕೂಡಲೆ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಲಯ ಜಂಟಿ ಆಯುಕ್ತರಾದ ನಾಗರಾಜ್, ವಲಯ ಮುಖ್ಯ ಅಭಿಯಂತರರಾದ ರಾಘವೇಂದ್ರ ಪ್ರಸಾದ್, ಅಧೀಕ್ಷಕ ಅಭಿಯಂತರರಾದ ನಂದೀಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
https://play.google.com/store/apps/details?id=com.speed.newskannada