ಪ್ರಿಯವಾದವರನ್ನು ಮುದ್ದು ಹೆಸರಿನಿಂದ ಕರೆಯುವುದು ರೂಢಿ. ಪತ್ನಿಯನ್ನು, ಪ್ರೇಯಸಿಯನ್ನು, ಚಿನ್ನು ಎಂದೊ, ಮುದ್ದು ಎಂದೋ, ಬಂಗಾರ ಎಂದೋ ಕರೆಯುವುದು ಸಾಮಾನ್ಯ.
ಬೇರೆ ಬೇರೆ ಭಾಷೆಗಳವರು ಅವರದ್ದೇ ಆದ ಮುದ್ದು ಹೆಸರುಗಳ ಮೂಲಕ ತಮ್ಮ ಪ್ರೀತಿ ಪಾತ್ರರನ್ನು ಕರೆಯುತ್ತಾರೆ.
ಹಿಂದಿ ಪ್ರದೇಶಗಳಲ್ಲಿ ‘ಬಾಬು’, ‘ಶೋನ’ ‘ಬೇಬಿ’ ಹೆಸರುಗಳು ಹೆಚ್ಚು ಚಾಲ್ತಿಯಲ್ಲಿವೆ.
ಬಾಲಿವುಡ್ ನ ಹಲವು ಕ್ಯೂಟ್ ಜೋಡಿಗಳು ತಮ್ಮ ಪ್ರೇಯಸಿಯನ್ನು, ಪತಿ, ಪತ್ನಿಯನ್ನು ಮುದ್ದಾಗಿ ಅಡ್ಡ ಹೆಸರಿನಿಂದ ಕರೆಯುವ ರೂಢಿ ಇರಿಸಿಕೊಂಡಿದ್ದಾರೆ. ಕರೀನಾರನ್ನು ಬೆಬೊ ಎನ್ನುತ್ತಾರೆ ಸೈಫ್ ಅಲಿ ಖಾನ್, ಮಲೈಕಾರನ್ನು ಬೇಬಿ ಎನ್ನುತ್ತಾರಂತೆ ಅರ್ಜುನ್ ಕಪೂರ್. ಆದರೆ ನಟ ರಣ್ವೀರ್ ಸಿಂಗ್ ತಮ್ಮ ಪತ್ನಿ ದೀಪಿಕಾರನ್ನು ‘ಚಪ್ಲಿ’ ಎಂದು ಕರೆಯುತ್ತಾರಂತೆ!
ನಟ ರಣ್ವೀರ್ ಹಾಗೂ ನಟಿ ದೀಪಿಕಾ ಪಡುಕೋಣೆ ಬಾಲಿವುಡ್ನ ಮುದ್ದಾದ ಜೋಡಿಗಳಲ್ಲಿ ಒಂದು. ಪರಸ್ಪರ ಬಹಳ ಪ್ರೀತಿಯಿಂದಿರುವ ಈ ದಂಪತಿ ಒಬ್ಬರನ್ನೊಬ್ಬರು ಮುದ್ದು ಹೆಸರುಗಳಿಂದ ಕರೆದುಕೊಳ್ಳುತ್ತಾರೆ. ಆದರೆ ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆಯನ್ನು ‘ಚಪ್ಲಿ’ ಎಂದು ಕರೆಯುತ್ತಾರಂತೆ. ಈ ವಿಷಯವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
‘ಜಯೇಶ್ಭಾಯ್ ಜೋರ್ದಾರ್’ ಸಿನಿಮಾ ಬಿಡುಗಡೆ ಆಗಿದೆ
ರಣ್ವೀರ್ ಸಿಂಗ್ ನಟನೆಯ ‘ಜಯೇಶ್ಭಾಯ್ ಜೋರ್ದಾರ್’ ಸಿನಿಮಾ ಮೂರು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಪ್ರಚಾರಕ್ಕಾಗಿ ಹಲವು ಕಾರ್ಯಕ್ರಮಗಳಲ್ಲಿ, ಸಂದರ್ಶನಗಳಲ್ಲಿ ರಣ್ವೀರ್ ಸಿಂಗ್ ಭಾಗವಹಿಸಿದ್ದರು. ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಗುಜರಾತಿ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಭಾಗವಹಿಸಿದ್ದ ರಣ್ವೀರ್ ಸಿಂಗ್, ತಾವು ತಮ್ಮ ಪತ್ನಿ ದೀಪಿಕಾ ಪಡುಕೋಣೆಯನ್ನು ಆಗಾಗ್ಗೆ ‘ಚಪ್ಲಿ’ ಎಂದು ಕರೆಯುತ್ತೇನೆ ಎಂದಿದ್ದಾರೆ!
”ದೀಪಿಕಾ ಪಡುಕೋಣೆಯನ್ನು ‘ಚಪ್ಲಿ’ ಎಂದು ಕರೆಯುತ್ತೇನೆ”
‘ಜಯೇಶ್ಭಾಯ್ ಜೋರ್ದಾರ್’ ಸಿನಿಮಾದ ನಿರ್ದೇಶಕ ದಿವ್ಯಾಂಗ್ ಠಕ್ಕರ್ ಹಾಗೂ ರಣ್ವೀರ್ ಸಿಂಗ್ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ನಿರ್ದೇಶಕ ದಿವ್ಯಾಂಗ್ ಠಕ್ಕರ್, ರಣ್ವೀರ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ದಿವ್ಯಾಂಗ್, ಇಂಗ್ಲೀಷ್ನಲ್ಲಿ ಹೇಳಿದ ಪದಗಳ ಅರ್ಥವನ್ನು ರಣ್ವೀರ್ ಸಿಂಗ್ ಗುಜರಾತಿನಲ್ಲಿ ಹೇಳಬೇಕಿತ್ತು. ಇದು ಆ ಸಂದರ್ಶನದ ಟಾಸ್ಕ್ಗಳಲ್ಲಿ ಒಂದು. ನಿರ್ದೇಶಕ ದಿವ್ಯಾಂಗ್ ಠಕ್ಕರ್, ‘ಓವರ್ ಸ್ಮಾರ್ಟ್’ ಅನ್ನು ಗುಜರಾತಿ ಭಾಷೆಯಲ್ಲಿ ಏನೆಂದು ಕರೆಯುತ್ತಾರೆ ಎಂದು ಕೇಳುತ್ತಾರೆ, ಅದಕ್ಕೆ ರಣ್ವೀರ್ ಸಿಂಗ್ ‘ಚಪ್ಲಿ’ ಎಂದು ಉತ್ತರಿಸಿ, ನಿನ್ನ ಅತ್ತಿಗೆಯನ್ನು (ದೀಪಿಕಾ ಪಡುಕೋಣೆ) ನಾನು ಹಾಗೇ ಕರೆಯುವುದು ಎಂದಿದ್ದಾರೆ.
ದೀಪಿಕಾ ಪಡುಕೋಣೆಗೆ ಹೇಗನ್ನಿಸುತ್ತಿರಬೇಡ!?
ಗುಜರಾತಿ ಭಾಷೆಯಲ್ಲಿ ಅತಿ ಬುದ್ಧಿವಂತರನ್ನು ‘ಚಪ್ಲಿ’ ಎನ್ನುತ್ತಾರಂತೆ, ಅದೇ ಕಾರಣಕ್ಕೆ ರಣ್ವೀರ್ ಸಿಂಗ್, ತಮ್ಮ ಅತಿ ಬುದ್ಧಿವಂತ ಮಡದಿ ದೀಪಿಕಾ ಪಡುಕೋಣೆಯನ್ನು ‘ಚಪ್ಲಿ’ ಎಂದು ಕರೆಯುತ್ತಾರೆ. ಆದರೆ ದೀಪಿಕಾ ಪಡುಕೋಣೆ, ಕನ್ನಡತಿ. ಅವರಿಗೆ ‘ಚಪ್ಲಿ’ ಪದಕ್ಕೆ ಕನ್ನಡದಲ್ಲಿ ಅರ್ಥ ಏನೆಂಬುದು ಗೊತ್ತಿದೆ. ಪತಿ ತನ್ನನ್ನು ‘ಚಪ್ಲಿ’ ಎಂದು ಕರೆದಾಗೆಲ್ಲಾ ದೀಪಿಕಾಗೆ ಹೇಗಿನ್ನಿಸುತ್ತಿರಬಹುದು ಪಾಪ!
ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ
‘ಜಯೇಶ್ಭಾಯ್ ಜೋರ್ದಾರ್’ ಸಿನಿಮಾ ಕಳೆದ ಶುಕ್ರವಾರವಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಲಿಂಗ ತಾರತಮ್ಯದ ವಿರುದ್ಧ ಸಂದೇಶವನ್ನು ಹೊಂದಿರುವ ಸಿನಿಮಾ ಇದಾಗಿದ್ದು, ಗಂಭೀರ ಸಂದೇಶವನ್ನು ಹಾಸ್ಯನ ಚೌಕಟ್ಟಿನಲ್ಲಿ ಕಟ್ಟಿಕೊಡಲಾಗಿದೆ. ಸಿನಿಮಾವನ್ನು ದಿವ್ಯಾಂಗ್ ಠಕ್ಕರ್ ನಿರ್ದೇಶನ ಮಾಡಿದ್ದು, ‘ಅರ್ಜುನ್ ರೆಡ್ಡಿ’ ಖ್ಯಾತಿಯ ಶಾಲಿನಿ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ಬೊಮನ್ ಇರಾನಿ ಸಹ ಸಿನಿಮಾದಲ್ಲಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada