ಹೊಸದಿಲ್ಲಿ ಮಾರ್ಚ್ 14: ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವಿನ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎರಡು ದಿನಗಳ ದೆಹಲಿ ಪ್ರವಾಸದಲ್ಲಿದ್ದಾರೆ. ಭಾನುವಾರ ಅಖಿಲೇಶ್ ಯಾದವ್ ದೆಹಲಿಗೆ ಬಂದಿದ್ದು ಇಂದು ಅವರು ದೆಹಲಿಗೆ ಆಗಮಿಸಿ ಎರಡನೇ ದಿನ. ಭಾನುವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವರನ್ನು ಯೋಗಿ ಭೇಟಿ ಮಾಡಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಯುಪಿ ಗೆಲುವಿಗಾಗಿ ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸಿದರು. ಇದಾದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಯುಪಿ ಚುನಾವಣೆಯ ವರದಿಯನ್ನೂ ನೀಡಿದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದ್ದರೂ ಕೂಡಾ ಪಕ್ಷಕ್ಕೆ ದೊಡ್ಡದೊಂದು ಆಘಾತ ಕೂಡಾ ಆಗಿದೆ. ಯೋಗಿ ಆದಿತ್ಯನಾಥ್ ನಂತರದ ನಾಯಕ ಎಂದೇ ಬಿಂಬಿತರಾಗಿದ್ದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಸಿರಾತು ಕ್ಷೇತ್ರದಲ್ಲಿ ಸೋಲನ್ನಪ್ಪಿದ್ದಾರೆ. ಸಮಾಜವಾದಿ ಪಕ್ಷದ ದೋಸ್ತಿ ಪಕ್ಷವಾದ ಅಪ್ನಾ ದಳದ ಅಭ್ಯರ್ಥಿ ಪಲ್ಲವಿ ಪಟೇಲ್ ಎದುರು ಬರೋಬ್ಬರಿ 7 ಸಾವಿರ ಮತಗಳ ಅಂತರದಿಂದ ಕೇಶವ ಪ್ರಸಾದ್ ಮೌರ್ಯ ಸೋಲನ್ನಪ್ಪಿದ್ದು, ಅವರಿಗೆ ಇನ್ನು ಮುಂದೆ ಪಕ್ಷದಲ್ಲಿ ಯಾವ ಜವಾಬ್ದಾರಿ ಕೊಡಬೇಕು, ಸರ್ಕಾರದಲ್ಲಿ ಯಾವ ಜವಾಬ್ದಾರಿ ಕೊಡಬೇಕು ಎಂಬ ವಿಚಾರದ ಬಗ್ಗೆಯೂ ಪ್ರಧಾನಿ ಮೋದಿ ಜೊತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಚರ್ಚಿಸಿರಬಹುದು ಎಂದು ತಿಳಿದುಬಂದಿದೆ. ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಮಾತ್ರವಲ್ಲ, ಇನ್ನೂ 10 ಸಚಿವರೂ ಕೂಡಾ ಚುನಾವಣೆಯಲ್ಲಿ ಸೋಲನ್ನಪ್ಪಿದ್ದಾರೆ.
ಇನ್ನು ಯೋಗಿ ಆದಿತ್ಯನಾಥ್ ನಂತರದ 2ನೇ ಅತಿದೊಡ್ಡ ನಾಯಕ ದಿನೇಶ್ ಶರ್ಮಾ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿರಲಿಲ್ಲ. ಹೀಗಾಗಿ, ಡಿಸಿಎಂ ಆಗಿ ಯಾರನ್ನು ಆಯ್ಕೆ ಮಾಡಲಿದ್ದಾರೆ ಅನ್ನೋದು ಭಾರೀ ಕುತೂಹಲ ಕೆರಳಿಸಿದೆ. ಸೋಲನ್ನಪ್ಪಿದ್ದರೂ ಕೂಡಾ ಕೇಶವ ಪ್ರಸಾದ್ ಮೌರ್ಯಗೆ ಡಿಸಿಎಂ ಪಟ್ಟ ಸಿಗಬಹುದೇ ಎಂಬ ಚರ್ಚೆಗಳು ನಡೆಯುತ್ತಿದ್ದು, ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಡಿಸಿಎಂ ಪಟ್ಟ ಕೊಡಬಹುದು ಅಥವಾ ಬೇರೊಬ್ಬರನ್ನು ಡಿಸಿಎಂ ಸ್ಥಾನಕ್ಕೆ ನೇಮಿಸಬಹುದು ಎನ್ನಲಾಗುತ್ತಿದೆ.
ಹಾಗೆ ನೋಡಿದ್ರೆ ಕಳೆದ ಅವಧಿಯಲ್ಲಿ ಯೋಗಿ ಆದಿತ್ಯನಾಥ್ ಅವರು ವಿಧಾನ ಪರಿಷತ್ ಸದಸ್ಯರಾಗಿಯೇ ಸಿಎಂ ಹುದ್ದೆ ಅಲಂಕರಿಸಿದ್ದರು. ಗೋರಖ್ಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಯೋಗಿ ಆದಿತ್ಯನಾಥ್, ಸಿಎಂ ಹುದ್ದೆಗೆ ಆಯ್ಕೆಯಾದ ವೇಳೆ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಉತ್ತರ ಪ್ರದೇಶ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆಯಾದ ಬಳಿಕ ಸಿಎಂ ಆಗಿದ್ದರು. 2022ರಲ್ಲಿ ನಡೆದ ಚುನಾವಣೆಯಲ್ಲಿ ಗೋರಖ್ಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಯೋಗಿ ಆದಿತ್ಯನಾಥ್ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ ಇದೀಗ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.
ಮಾರ್ಚ್ 10ರಂದು ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ. ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶದಂತೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಯುಪಿಯ 403 ವಿಧಾನಸಭೆ ಕ್ಷೇತ್ರಗಳಲ್ಲಿ ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ಬೇಕಿರುವ ಮ್ಯಾಜಿಕ್ ನಂಬರ್ 202 ಆಘಿತ್ತು. ಇದರಲ್ಲಿ ಬಿಜೆಪಿ 255 ಸ್ಥಾನಗಳನ್ನು ಪಡೆದು ಯುಪಿಯಲ್ಲಿ ಮತ್ತೆ ಕಮಲವನ್ನು ಅರಳಿಸಿದೆ. ಜೊತೆಗೆ ಸಮಾಜವಾದಿ ಪಕ್ಷ ಒಟ್ಟು 111 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 2 ಸ್ಥಾನಗಳನ್ನು ಪಡೆದು ಹೀನಾಯ ಸೋಲು ಕಂಡಿದೆ. ಇನ್ನೂ ಇತರೆ ಪಕ್ಷಗಳು ಬೆರಳೆಣಿಕೆಯಷ್ಟು ಸ್ಥಾನಗಳನ್ನು ಮಾತ್ರ ಪಡೆದುಕೊಂಡಿವೆ. ಈ ಬಾರಿ ಎಸ್ಪಿಗೆ ಕಾಂಗ್ರೆಸ್ ಹಾಗೂ ಬಿಎಸ್ಪಿ ಮತಗಳು ಸಿಕ್ಕಿವೆ ಎನ್ನುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಇನ್ನೂ ಮೊದಲಬಾರಿಗೆ ಸ್ಪರ್ಧಿಸಿದೆ ಗೋರಖ್ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯೋಗಿ ಆದಿತ್ಯನಾಥ್ ಹಾಗೂ ಕರ್ಹಾಲ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಖಿಲೆಶ್ ಯಾದವ್ ಬಹುಮತಗಳನ್ನು ಪಡೆದು ಗೆಲವು ಸಾಧಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: