ಹುಬ್ಬಳ್ಳಿ: ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಾರೆ ಎಂದು ಪೊಲೀಸರು ನೂರಾರು ಮಂದಿಯನ್ನು ಬಂಧಿಸಿ ಬೈಕ್ ಹಾಗೂ ಮೊಬೈಲ್’ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಎಐಎಂಐಎಂ ಕಾರ್ಯಕರ್ತರು ಮತ್ತು ಸ್ಥಳೀಯರು ಸೋಮವಾರ ರಾತ್ರಿ 2.30ರ ವೇಳೆ ಕಸಬಾ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
‘ನಗರ ಪ್ರದೇಶದ ಮಂದಿ ರಾತ್ರಿ ವೇಳೆ ಮನೆ ಎದುರು ಅಥವಾ ಪಕ್ಕದ ಓಣಿಗೆ ಹೋಗಿ ಪರಿಚಯಸ್ಥರ ಜೊತೆ ಸಮಯ ಕಳೆಯುವುದು ಸಾಮಾನ್ಯ.
ಹಗಲಿನ ವೇಳೆ ಎಲ್ಲರೂ ಕೆಲಸಕ್ಕೆ ಹೋಗುವುದರಿಂದ ರಾತ್ರಿ ಸಮಯ ಅವರೆಲ್ಲ ಒಂದೆಡೆ ಸೇರುತ್ತಾರೆ. ಕೆಲವು ವೇಳೆ ಅವರು ಮನೆಗೆ ಬರಲು ತಡ ರಾತ್ರಿಯಾಗುತ್ತದೆ. ಆದರೆ, ಪೊಲೀಸರು ಅವರನ್ನೇ ಅನುಮಾನಾಸ್ಪದ ವ್ಯಕ್ತಿಗಳೆಂದು, ಆರೋಪಿಗಳೆಂದು ಭಾವಿಸಿ ಠಾಣೆಗೆ ಕರೆತರುವುದು ಅನ್ಯಾಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಒಂದು ತಾಸು ಪ್ರತಿಭಟನೆ ನಡೆಸಿ, ಪೊಲೀಸರ ನಡೆ ಖಂಡಿಸಿದರು. ಕೊನೆಗೆ ಪೊಲೀಸರು ವಶಪಡಿಸಿಕೊಂಡವರಿಂದ ಮುಚ್ಚಳಿಕೆ ಬರೆಸಿಕೊಂಡು, ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಕಸಬಾ ಠಾಣೆ ಇನ್ಸ್ಪೆಕ್ಟರ್ ಅಡಿವೆಪ್ಪ ಬನ್ನಿ, ನಗರದಲ್ಲಿ ಅಪರಾಧ ಚಟುವಟಿಕೆ ನಿಯಂತ್ರಿಸುವುದು ಹಾಗೂ ಸಾರ್ವಜನಿಕರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾತ್ರಿ ವೇಳೆ ಅನಗತ್ಯವಾಗಿ ರಸ್ತೆಬದಿಯಲ್ಲಿ ಇರುವವರನ್ನು ಹಾಗೂ ಓಡಾಡುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಸೋಮವಾರ ರಾತ್ರಿ ಸಹ ಒಂದಷ್ಟು ಮಂದಿಯನ್ನು ವಶಕ್ಕೆ ಪಡೆದು, ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದೇವೆ’ ಎಂದರು.
ಪ್ರತಿಭಟನೆಯಲ್ಲಿ ಎಐಎಂಐಎಂ ಮುಖಂಡ, ಪಾಲಿಕೆ ಸದಸ್ಯ ನಜೀರ್ ಹೂನ್ಯಾಳ, ದಾದಾಪೀರ್ ಬೆಟಗೇರಿ, ಇರ್ಫಾನ್ ನಾಲತ್ವಾಡ, ಅಝರ್ ಬಳ್ಳಾರಿ, ಖಾಜಾಸಾಬ್ ಮುಲ್ಲಾ ಹಾಗೂ ಸ್ಥಳೀಯರು ಇದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada