ಮೈಸೂರು, ಫೆಬ್ರವರಿ, 19: ಕೆ.ಆರ್. ನಗರದ ಶಾಸಕ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ಇದೀಗ ಸಂಧಾನದ ಹಂತಕ್ಕೆ ಬಂದಿದ್ದು, ಈ ಸಂಬಂಧ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿ ಆಗಿದ್ದಾಗ ಕಲ್ಯಾಣ ಮಂಟಪದ ಪಕ್ಕದ ಹಾಲ್ ಜಾಗವನ್ನು ಸಾರಾ ಮಹೇಶ್ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ವರದಿ ನೀಡಿದ್ದರು.
ಇದು ಸಾರಾ ಮಹೇಶ್ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ, ಆರೋಪ ಸಾಬೀತಾದರೆ ರಾಜಕೀಯ ಸನ್ಯಾಸ್ವತ್ವ ಸ್ವೀಕರಿಸುತ್ತೇನೆ ಎಂದು ಸಾರಾ ಮಹೇಶ್ ಶಪಥ ಮಾಡಿದ್ದರು. ಇವೆಲ್ಲದರ ನಡುವೆ ಇದೀಗ ಮತ್ತೊಬ್ಬ ಐಎಎಸ್ ಅಧಿಕಾರಿ ಮಣಿಮಣ್ಣನ್ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಚರ್ಚೆಯ ಫೋಟೋ ವೈರಲ್
ರೋಹಿಣಿ ಸಿಂಧೂರಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದ ಸಾರಾ ಮಹೇಶ್, ಜಿಲ್ಲಾಧಿಕಾರಿ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿದ್ದಾರೆ ಎಂದು ದಾಖಲೆ ಸಮೇತ ಮಾಹಿತಿ ನೀಡಿದ್ದರು. ಅಧಿವೇಶನದಲ್ಲೂ ರೋಹಿಣಿ ಸಿಂಧೂರಿ ವಿರುದ್ಧ ಗುಡುಗಿದ್ದರು. ಅಲ್ಲದೆ, ಸರ್ಕಾರಿ ಮಟ್ಟದಲ್ಲೇ ತನಿಖೆ ನಡೆಸಲು ಪಟ್ಟು ಹಿಡಿದಿದ್ದರು. ಇದು ರೋಹಿಣಿ ಅವರಿಗೆ ಸಂಕಷ್ಟವನ್ನುಂಟು ಮಾಡಿತ್ತು.
ಇದು ವೃತ್ತಿ ಬದುಕಿನಲ್ಲೂ ಕಪ್ಪು ಚುಕ್ಕಿ ಇಟ್ಟಂತಾಗಿದ್ದು, ಬಡ್ತಿ ಸಿಗದೆ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್ನಲ್ಲೇ ರೋಹಿಣಿ ಸಿಂಧೂರಿ ಹಾಗೂ ಸಾರಾ ಮಹೇಶ್ ನಡುವೆ ಸಂಧಾನ ನಡೆದಿತ್ತು ಎನ್ನುವ ಮಾಹಿತಿ ಲಭ್ಯವಾಗಿತ್ತು. ಆದರೆ, ಅದು ಫಲಪ್ರದವಾಗಿರಲಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿತ್ತು.
ವೈರಲ್ ಆದ ಸಂದೇಶದಲ್ಲಿ ಏನಿದೆ?
ಈ ನಡುವೆ ರೋಹಿಣಿ ಸಿಂಧೂರಿ ಸಾರಾ ಮಹೇಶ್ಗೆ ಮಾಡಿದ್ದಾರೆ ಎನ್ನಲಾದ ಮೇಸೆಜ್ ಕೂಡ ಇದೀಗ ವೈರಲ್ ಆಗಿದೆ. “ನಾನು ಭೂ ಒತ್ತುವರಿ ಬಗ್ಗೆ ವರದಿ ಪಡೆದಿದ್ದೆ. ನನಗೆ ಯಾವುದೆ ವೈಯಕ್ತಿಕ ದ್ವೇಷ ಇಲ್ಲ. ನಾನು ನನ್ನ ಕೆಲಸವನ್ನಷ್ಟೇ ಮಾಡಿದ್ದೇನೆ,” ಎಂದು ಸಂದೇಶದಲ್ಲಿ ಉಲ್ಲೇಖಿಸಿದ್ದರು. ಇದೀಗ ಮಣಿವಣ್ಣನ್ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿದೆ ಎನ್ನಲಾಗಿದೆ. ರೋಹಿಣಿ ಸಿಂಧೂರಿ ಹಾಗೂ ಸಾರಾ ಮಹೇಶ್ ನೇರ ನೇರ ಕುಳಿತುಕೊಂಡು ಮಾತನಾಡಿದ್ದು, ಸಂಧಾನ ಫಲಪ್ರದವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada