ಎಸ್. ವಿ ಪರಮೇಶ್ವರ ಭಟ್ಟ!

 

‘ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ ನೀ ಬಂದು ನಿಂತಿಲ್ಲಿ ದೀಪ ಹಚ್ಚ,
ನಲ್ಲ ನೀ ಬಂದಂದು ಕಣ್ಣಾರೆ ಕಂಡದು ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ’
ಈ ಗೀತೆಯನ್ನು ಅದೆಷ್ಟು ಸಲ ಕೇಳಿದ್ದರೂ ಪ್ರತಿಬಾರಿ ಕೇಳುವಾಗಲೂ ಹೊಸದಾಗಿ ದೀಪ ಹಚ್ಚಿದಂತೆ ಹೃದ್ಭಾವ ತುಂಬುತ್ತದೆ. ಈ ಪ್ರೀತಿಯ ಹಾಡಿನಿಂದ ನನಗೆ ಎಸ್. ವಿ. ಪರಮೇಶ್ವರ ಭಟ್ಟರೆಂದರೆ ಕೂಡ ಹೃದಯಲ್ಲಿ ಪ್ರೀತಿ. ಇದೇ ಗೌರವ ಮೈಸೂರು ಅನಂತ ಸ್ವಾಮಿಗಳಿಗೆ ಮತ್ತು ಅದನ್ನು ಆತ್ಮೀಯವಾಗಿ ಹಾಡಿರುವ ಸುನೀತ ಅನಂತಸ್ವಾಮಿ Sunitha Ananthaswamy ಅವರಿಗೆ ಕೂಡಾ ಸಲ್ಲುತ್ತದೆ. ನಾವು ಪೂಜಿಸುವ ದೇವರುಗಳನ್ನೆಲ್ಲ ಕಲ್ಲಾಗಿಸಿಬಿಡುತ್ತೇವೆ. ನಾವು ಯಾವುದನ್ನು ಪ್ರೀತಿ ಎನ್ನುತ್ತೇವೋ ಅದು ತಟಸ್ಥವಾಗುವ ಅಪಾಯವಿದೆ. ಎಸ್. ವಿ. ಪರಮೇಶ್ವರ ಭಟ್ಟರ ಒಂದು ರಚನೆಯ ಬಗ್ಗೆ ನನ್ನ ಪ್ರೀತಿ ಏನೇ ಇದ್ದರೂ, ಅವರ ಅಗಾಧತೆಯ ಆಳಕ್ಕೆ ಇಳಿದಷ್ಟೂ ಇಂತಹ ಹಲವು ಕೃತಿಗಳನ್ನು ಮೀರಿದ ಸಹಸ್ರ ಸಹಸ್ರ ಪಾಲಿನ ಕೃತಿ ಶಕ್ತಿ, ದಿವ್ಯ ತೇಜದ ಬದುಕಿನ ಶಕ್ತಿಯನ್ನು ಅರಿಯಬಹುದಾಗಿದೆ.‘ಕನ್ನಡದ ಕಾಳಿದಾಸ’ರೆಂದೇ ಹೆಸರು ಮಾಡಿರುವ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು, ಕನ್ನಡ ನವೋದಯ ಕಾಲದ ಪ್ರಮುಖ ವಿದ್ವಾಂಸರೂ, ಕವಿಗಳೂ ಆಗಿ, ಮೆಚ್ಚಿನ ಪ್ರಾಧ್ಯಾಪಕರಾಗಿ ಪ್ರಾಜ್ಞ ಜನ ಮನದಲ್ಲಿ ನೆಲೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲದವರಾದ ಪರಮೇಶ್ವರ ಭಟ್ಟರ ಹಿರಿಯರು ಮಲೆನಾಡಿನ ತೀರ್ಥಹಳ್ಳಿಯ ಸೆರಗಿನಲ್ಲಿ ನೆಲೆಸಿದ್ದವರು. ಸದಾಶಿವರಾಯರು ಮತ್ತು ಲಕ್ಷಮ್ಮನವರ ಕುಲಪುತ್ರರಾಗಿ ಪರಮೇಶ್ವರ ಭಟ್ಟರು 1914ರ ಫೆಬ್ರವರಿ 8ರಂದು ಮಾಳೂರಿನಲ್ಲಿ ಜನಿಸಿದರು. ಚಿಕ್ಕವಯಸ್ಸಿನಲ್ಲೇ ಓದು, ಯಕ್ಷಗಾನ, ನಾಟಕಗಳಲ್ಲಿ ಆಸಕ್ತಿಯಿದ್ದು, ತಂದೆ ತಾಯಿಗಳಲ್ಲಿದ್ದ ಅದೇ ತೆರನಾದ ಕಲಾಪ್ರೀತಿಯಿಂದ ಪುಟ್ಟ ಹುಡುಗನಾಗಿದ್ದಾಗಲೇ ಬಾಲಕೃಷ್ಣ, ಉತ್ತರೆಯ ವೇಷಗಳನ್ನು ಧರಿಸಿದ್ದರು.ಶಾಲೆಯಲ್ಲಿ ಕಮಕೋಡು ನರಸಿಂಹ ಶಾಸ್ತ್ರಿಗಳು, ಕಾಲೇಜಿನಲ್ಲಿ ಎ. ಆರ್. ಕೃಷ್ಣಶಾಸ್ತ್ರಿಗಳು, ವಿ.ಸೀತಾರಾಮಯ್ಯ, ಕೆ. ವೆಂಕಟರಾಮಪ್ಪ, ಡಿ. ವಿ. ಶೇಷಗಿರಿರಾಯರು, ಮೊದಲಾದವರು ಭಟ್ಟರಲ್ಲಿ ಸಾಹಿತ್ಯಾಭಿರುಚಿ ಮೈಗೂಡಲು ಒತ್ತಾಸೆಗಳಾದರು. ಅಂದಿನ ದಿನಗಳಲ್ಲಿ ‘ಸಿರಿಗನ್ನಡಿಗರ ಡಿಂಗರಿಗ’ ಎಂಬ ಕಾವ್ಯನಾಮವನ್ನು ಹೊತ್ತು ಪ್ರಕಟವಾಗುತ್ತಿದ್ದ ಅವರ ಬರಹಗಳನ್ನು ಕಂಡು ಮೆಚ್ಚಿದ ಅ.ನ. ಕೃಷ್ಣರಾಯರು, ಒಮ್ಮೆ ಅವರನ್ನು ಭೇಟಿಯಾದಾಗ “ಏನು ಭಟ್ಟರೆ, ಬಿರುದು ಅದ್ಭುತವಾಗಿ ಗಡಗಡಿಸುತ್ತಿದೆಯೆಲ್ಲ” ಎಂದು ಹಾಸ್ಯ ಮಾಡಿದಾಗ, ಭಟ್ಟರು ಆ ಕಾವ್ಯನಾಮವನ್ನು ಕೈಬಿಟ್ಟರಂತೆ!ಬಿ. ಎ ತರಗತಿಗಳಲ್ಲಿ ಓದುತ್ತಿದ್ದಾಗ ಎಚ್. ಎಂ. ಶಂಕರನಾರಾಯಣ ರಾಯರು ಮತ್ತು ಜಿ. ವೆಂಕಟಸುಬ್ಬಯ್ಯನವರೂ ಇವರ ಸಹಪಾಠಿಗಳಾಗಿದ್ದರು. ಬಿ.ಎಂ.ಶ್ರೀ ಮತ್ತು ಟಿ. ಎಸ್. ವೆಂಕಣ್ಣಯ್ಯ ಹಿರಿಯ ಪ್ರಾಧ್ಯಾಪಕರು. ಎಂ.ಎ ತರಗತಿಗೆ ಬಂದಾಗ ತೀ.ನಂ. ಶ್ರೀ ಮತ್ತು ಡಿ. ಎಲ್. ನರಸಿಂಹಾಚಾರ್ಯರು ಗುರುವೃಂದದಲ್ಲಿ ಸೇರಿದರು. ಕುವೆಂಪು ಅವರ ಪಾಠ ತರಗತಿಯಲ್ಲಿ ಕೇಳಲಾಗದಿದ್ದರೂ ತರಗತಿಯ ಆಚೆ ಅವರ ಹಿಂದೆ ಹಿಂದೆಯೇ ಇದ್ದರು. ಅಂದಿನ ದಿನಗಳಲ್ಲಿ ರಾಮಾಯಣ ದರ್ಶನಂ ರಚಿಸುತ್ತಿದ್ದ ಕುವೆಂಪು ಅವರು, ಬರೆದು ಮುಗಿಸಿದ ಭಾಗಗಳನ್ನು ಭಟ್ಟರನ್ನು ಕೂರಿಸಿಕೊಂಡು ಓದಿ ಹೇಳುತ್ತಿದ್ದರಂತೆ. ನಾ. ಕಸ್ತೂರಿ ಅವರೊಂದಿಗೆ ಸೇರಿಕೊಂಡು ಭಟ್ಟರು ಕುವೆಂಪು ಅವರ ‘ರಕ್ತಾಕ್ಷಿ’ ನಾಟಕದಲ್ಲಿ ಕೂಡ ಅಭಿನಯಿಸಿದ್ದರು.ಮೈಸೂರಿನ ಮಹಾರಾಣಿ ಕಾಲೇಜು, ಶಿವಮೊಗ್ಗೆಯ ಕಾಲೇಜು, ಮೈಸೂರು ಮಾಹಾರಾಜ ಕಾಲೇಜುಗಳಲ್ಲಿ ತಮ್ಮ ವಿದ್ಯಾರ್ಥಿಗಳಿಂದ ವಿದ್ವಾಂಸ – ವಿನೋದಪ್ರಿಯ ಪ್ರಾಧ್ಯಾಪಕರೆನಿಸಿಕೊಂಡು ಪರಮೇಶ್ವರ ಭಟ್ಟರು ಅಪಾರ ಜನಪ್ರಿಯತೆ ಪಡೆದಿದ್ದರು. 1960ರಲ್ಲಿ ಮಾನಸಗಂಗೋತ್ರಿ ಜನ್ಮತಾಳಿದಾಗ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪರಮೇಶ್ವರಭಟ್ಟರು ಪ್ರವಾಚಕರಾಗಿ ಹಲವು ಕಾಲ ಕೆಲಸ ಮಾಡಿದರು. ನಂತರ ಮಂಗಳೂರಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಪ್ರಾಧ್ಯಾಪಕರು ಮತ್ತು ನಿರ್ದೇಶಕರಾಗಿ ಪರಮೇಶ್ವರ ಭಟ್ಟರು ನೇಮಿಸಲ್ಪಟ್ಟರು. ಆ ಕೇಂದ್ರಕ್ಕೆ ಮಂಗಳ ಗಂಗೋತ್ರಿ ಎಂದು ನಾಮಕರಣ ಮಾಡಿ, ಅದರ ಸಮಗ್ರ ವಿಕಾಸದ ಶಿಲ್ಪಿಯೆನಿಸಿಕೊಂಡರು. ಮಂಗಳೂರಿನಲ್ಲಿ ಅವರು ಕಳೆದ ದಿನಗಳು ಬಂಗಾರದ ದಿನಗಳು. ಮಂಗಳೂರಿನಲ್ಲಿ ಅವರ ಜನಪ್ರಿಯತೆ ಎಷ್ಟಿತ್ತೆಂದರೆ ಅವರನ್ನು ಬಿಟ್ಟು ಜಿಲ್ಲೆಯ ಯಾವೊಂದು ಸಾಂಸ್ಕೃತಿಕ ಉತ್ಸವ ಚಟುವಟಿಕೆಗಳೂ ನಡೆಯುತ್ತಿರಲಿಲ್ಲ. ಅವರ ವಿನೋದ ಪ್ರಿಯತೆ, ಸರಸ ಮಾತುಗಾರಿಕೆಗಳಿಂದ, ಒಳ್ಳೆಯ ವಾಗ್ಮಿ ಎಂಬ ಕೀರ್ತಿ ಹಬ್ಬಿತ್ತು. ಸ್ನಾತಕೋತ್ತರ ತರಗತಿಗಳೇ ಇರಲಿ, ಕಾವ್ಯ ಕೃತಿಗಳ ಸೊಗಸನ್ನು ಹಾಸ್ಯ ಪರಿಲೇಪನದೊಂದಿಗೆ ವರ್ಣಿಸಿ ಶಿಷ್ಯಗಣದ ಹೃದಯ ಸೂರೆಗೊಂಡರು. ಗುರು ಪರಂಪರೆಗೆ ಗೌರವ ತಂದುಕೊಟ್ಟ ಶ್ರೇಷ್ಠ ಪ್ರಾಧ್ಯಾಪಕರುಗಳ ಸಾಲಿನಲ್ಲಿ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು ವಿರಾಜಿಸಿದರು.ಎಸ್. ವಿ. ಪರಮೇಶ್ವರ ಭಟ್ಟರು ಕನ್ನಡ ನವೋದಯದ ಕಾಲದ ಬಹುಶ್ರುತ ವಿದ್ವಾಂಸ ಬರಹಗಾರರು, ಕವಿತೆಗಳು, ಭಾವಗೀತೆ, ವಚನ, ಮುಕ್ತಕಗಳೇ ಮೊದಲಾಗಿ ಸಾವಿರಾರು ಸಂಖ್ಯೆಯ ಸೃಜನಶೀಲ ಕಾವ್ಯಗಳನ್ನು ಸೃಷ್ಟಿಸಿದರಲ್ಲದೆ, ಸಂಸ್ಕೃತ ಮಹಾಕವಿಗಳ ಕಾವ್ಯ, ನಾಟಕ, ಗೀತೆ, ಮುಕ್ತಕಗಳನೇಕವನ್ನು ಅನುವಾದಗಳಲ್ಲಿ ತಂದು ಮರುಸೃಷ್ಟಿ ಮಾಡಿದ್ದಾರೆ. ಹಲವು ಮಹಾಸಂಪುಟಗಳಲ್ಲಿ ಬಂದ ಅವರ ಅನುವಾದ ಸಾಹಿತ್ಯವು ವಿಸ್ಮಯ ಹುಟ್ಟಿಸುವಂತಿದೆ. ಅವರ ವಿಮರ್ಶೆ, ಉಪನ್ಯಾಸಗಳು, ಪ್ರಬಂಧಗಳು, ಮುನ್ನುಡಿಗಳು, ಗ್ರಂಥ ಸಂಪಾದನೆ, ಸ್ವಂತ ಸೃಷ್ಟಿಯ ಗಾದೆಗಳು ಒಗಟುಗಳು ಎಲ್ಲವೂ ಸೇರಿ, ಪ್ರಯೋಗ ವೈವಿಧ್ಯವನ್ನು ತೋರುತ್ತವೆ.‘ರಾಗಿಣಿ’, ‘ಗಗನ ಚುಕ್ಕಿ’, ‘ಅಂಚೆಯಪೆಟ್ಟಿಗೆ’, ‘ಕೃಷ್ಣ ಮೇಘ’, ‘ಸಂಜೆ ಮಲ್ಲಿಗೆ’ ಮೊದಲಾದವು ಅವರ ಕವನ ಸಂಗ್ರಹಗಳು. ‘ಮಾಚಯ್ಯ’, ‘ಜಹನಾರ’ ನೀಳ್ಗವನಗಳು. ‘ಚಂದ್ರವೀಧಿ’, ‘ಇಂದ್ರಚಾಪ’, ‘ತುಂಬೆಹೂ’, ‘ಚಿತ್ರಕಥೆ’ ಮೊದಲಾದವು ಮುಕ್ತಕ ಸಂಗ್ರಹಗಳು. ‘ಉಪ್ಪುಕಡಲು’, ‘ಪಾಮರ’, ‘ಉಂಬರ’ ಇವು ವಚನ ಸಂಕಲನಗಳು – ಈ ಎಲ್ಲ ಕೃತಿಗಳಲ್ಲೂ ಭಟ್ಟರ ಪ್ರಯೋಗಶೀಲ ಪ್ರವೃತ್ತಿ ಎದ್ದು ಕಾಣುವಂಥದ್ದು.ಪರಮೇಶ್ವರ ಭಟ್ಟರ ಪ್ರಕೃತಿ ಮತ್ತು ಪ್ರಣಯ ಗೀತಗಳು ಪದಲಾಲಿತ್ಯ, ಭಾವ ಸಂಯೋಜನೆಗಳಿಂದ ನಮ್ಮನ್ನು ಸೆರೆಹಿಡಿಯುತ್ತವೆ. ಅಲ್ಲಿ ಕನಸುಗಳು ತೇಲಾಡುತ್ತವೆ. ‘ತಿಳಿ ಮುಗಿಲ ತೊಟ್ಟಿಲಲಿ, ಮಲಗಿರುವ ಚಂದಿರನ ಗಾಳಿ ಜೋಗುಳ ಹಾಡಿ ತೂಗುವ ಹಾಗೆ’, ‘ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುವ ಹಾಗೆ’, ಪ್ರತಿಮಾ ರೂಪದ ಚಿತ್ರಗಳು ಅಲ್ಲಿ ಸಿಗುತ್ತವೆ.‘ನೂರು ವರುಷಗಳಲ್ಲಿ, ಒಮ್ಮೆ ಸುಲಿದೊಂದಳಿಯ ಸಖ ಸಂಗ ಸಾಕು’ ಎಂಬ ಧನ್ಯೋಸ್ಮಿ ಭಾವನೆಯನ್ನು ಕವಿ ತಳೆಯುತ್ತಾರೆ. ‘ನೌಕಾ ಕ್ರೀಡನವೆಳೆಸಿದವಾಗಲೆ ತುಂಗೆಯ ಶೀತಲ ವೇಳೆಯಲಿ ನಲಿದೆವು ಒಲಿದೆವು ಆನಂದಿಸಿದೆವು ರಾಸಕ್ರೀಡೆಯ ಲೀಲೆಯಲಿ’ ಮುಂತಾದ ‘ಭಾವಗೀತೆ’ಯ ಸಾಲುಗಳಲ್ಲಿ ಪ್ರಕೃತಿ ಪ್ರಣಯಗಳ ಸಂಗಮದಲ್ಲಿ ರಾಧಾಕೃಷ್ಣರ ಸಮಾಗಮದ ಸಮರ್ಪಣ ಭಾವವಿದ್ದರೆ, ದಾಂಪತ್ಯ ಜೀವನ ಗೀತಗಳಲ್ಲಿ ನೋವುಂಡು ನಲಿದ ಸಮರಸಭಾವಗಳು ಮೈದಳೆಯುತ್ತವೆ.
‘ಹಗಲಿನುದ್ದಕ್ಕೂ ಬಿಸಿಲ ಬೇಗೆಯೇ ಇದ್ದರೇನು ಹೇ ಸಖಿ, ಸಂಜೆಯ ಹೊತ್ತಿಗೆ ಕಡಲ ಗಾಳಿಗೆ ಮೈಯನ್ನೊಡ್ಡುವ ಸುಖವ ನೆನೆಯುತ, ನಾ ಸುಖಿ’ ಎಂದು ಸಹಿಷ್ಣುಶೀಲ ಪ್ರವೃತ್ತಿಯನ್ನು ಕವಿ ಬೆಳೆಸಿಕೊಳ್ಳುತ್ತಾರೆ. ಒಂದೊಂದು ಕಾಲದಲ್ಲಿ ‘ಒಂದೊಂದು ರೀತಿಯಲ್ಲಿ, ಒಂದೊಂದು ಸುಖವಿಹುದು, ದುಃಖವಿಹುದು; ಅದರದರಕಾಲದಲ್ಲಿ ಸುಖ ದುಃಖಗಳ ಸವಿದ ಬಾಳು ಹಸನಾಗಿಪುದೆ ಸೃಷ್ಟಿಯೊಸಗೆ’ ಎಂಬ ತಾತ್ವಿಕ ನೆಲೆಗೆ ಕವಿ ತಲುಪುತ್ತಾರೆ.ಪರಮೇಶ್ವರ ಭಟ್ಟರು 1965 ಮತ್ತು 66ರಲ್ಲಿ ಪ್ರಕಟಿಸಿದ ಮುಕ್ತಕ ಸಂಗ್ರಹಗಳು ಇಂದ್ರಚಾಪ ಮತ್ತು ಚಂದ್ರವೀಧಿ, ಇವು ಮುಕ್ತಕ ಸಾಹಿತ್ಯಕ್ಕೆ ಅವರ ಅಪೂರ್ವ ಕೊಡುಗೆಗಳು. ಇವುಗಳಲ್ಲೊಂದೊಂದರಲ್ಲೂ 700 ಮುಕ್ತಕಗಳಿವೆ. ಇವು ಕನ್ನಡದ ಗಾಥಾಸಪ್ತಶತಿಗಳೆಂದು ಪ್ರಸಿದ್ಧವಾಗಿವೆ. ಇವುಗಳ ಕೆಲವು ತುಣುಕುಗಳನ್ನು ನಾವಿಲ್ಲಿ ನೋಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ಚಲನಚಿತ್ರಗಳನ್ನು ಜಾಗತಿಕ ಮನ್ನಣೆಗೆ ಪ್ರೇರೇಪಿಸಲು ಬಯಸುತ್ತೇನೆ ಎಂದ, ರಣವೀರ್ ಸಿಂಗ್;

Wed Feb 16 , 2022
ರಣವೀರ್ ಸಿಂಗ್ ಅವರ ಗುರಿಯಿಂದ ದೂರವಿರಬಹುದೇ? ನಟ ನಂಬಿದ್ದರು. “ಇದು ನನ್ನ ಬಕೆಟ್ ಪಟ್ಟಿಯಲ್ಲೂ ಇರಲಿಲ್ಲ” ಎಂದು ಸಿಂಗ್ ಉದ್ಗರಿಸುತ್ತಾರೆ, ಅವರು ಸ್ಟಾರ್-ಸ್ಟಡ್ಡ್ NBA ಆಲ್-ಸ್ಟಾರ್ ಸೆಲೆಬ್ರಿಟಿ ಗೇಮ್‌ನ ಭಾಗವಾಗಲು ಅವಕಾಶವನ್ನು ಪಡೆದಿದ್ದಾರೆ ಎಂದು ನಂಬಲು ಸಾಧ್ಯವಾಗಲಿಲ್ಲ. ಅವರು ಫೆಬ್ರವರಿ 18 ರಂದು ನಡೆಯಲಿರುವ ಆಟದಲ್ಲಿ ತಮ್ಮ ಪರಾಕ್ರಮವನ್ನು ತೋರಿಸಲು ಕ್ಲೀವ್‌ಲ್ಯಾಂಡ್‌ಗೆ ಹಾರಿದ್ದಾರೆ ಮತ್ತು ಅವರು ಹಾಸ್ಯನಟ ಟಿಫಾನಿ ಹ್ಯಾಡಿಶ್, ರಾಪರ್‌ಗಳಾದ ಅನುಯೆಲ್ ಎಎ, ಮೆಷಿನ್ ಗನ್ ಕೆಲ್ಲಿ, ಜ್ಯಾಕ್ […]

Advertisement

Wordpress Social Share Plugin powered by Ultimatelysocial