2019 ರಲ್ಲಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಪತ್ರಕರ್ತರೊಬ್ಬರು ನಟ ಸಲ್ಮಾನ್ ಖಾನ್ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ನಟ ಸಲ್ಮಾನ್ ಖಾನ್ ಮತ್ತು ಅವರ ಅಂಗರಕ್ಷಕರೊಬ್ಬರಿಗೆ ನೀಡಿದ್ದ ಸಮನ್ಸ್ ಮತ್ತು ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶಕ್ಕೆ ಬಾಂಬೆ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 5 ರಂದು ವಿಚಾರಣೆಗೆ ಹಾಜರಾಗುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಇಬ್ಬರಿಗೆ ಸಮನ್ಸ್ ಜಾರಿ ಮಾಡಿತ್ತು.
ಬಾಲಿವುಡ್ ನಟ ಸಲ್ಮಾನ್ ಖಾನ್ ಪತ್ರಕರ್ತರೊಬ್ಬರ ಜೊತೆಗೆ ಅನುಚಿತ ವರ್ತನೆಗೆ ಸಂಬಂಧಿಸಿದಂತೆ ಏಪ್ರಿಲ್ 5 ರಂದು ವಿಚಾರಣೆಗೆ ಹಾಜರಾಗುವಂತೆ ಮುಂಬೈನ ನ್ಯಾಯಾಲಯ ಆದೇಶಿಸಿತ್ತು. ಆದರೆ ಈ ಆದೇಶ ಪ್ರಶ್ನಿಸಿ ಸಲ್ಮಾನ್ ಖಾನ್ ಹೈಕೋರ್ಟ್ ಮೊರೆ ಹೋಗಿದ್ದರು. ನಟ, ತಮ್ಮ ಅರ್ಜಿಯಲ್ಲಿ, ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಹೈಕೋರ್ಟ್ಗೆ ಮನವಿ ಮಾಡಿದ್ದರು. ಇದರೊಂದಿಗೆ ಸಮನ್ಸ್ಗೆ ತಡೆ ನೀಡುವಂತೆಯೂ ಒತ್ತಾಯಿಸಿದ್ದರು. ಸದ್ಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಮ್ಯಾಜಿಸ್ಟ್ರೇಟ್ ನೀಡಿರುವ ಸಮನ್ಸ್ ಗೆ ತಡೆ ನೀಡಿದೆ.
ಹಾಗಿದ್ರೆ ಏನಿದು ಘಟನೆ?
ಈ ಪ್ರಕರಣ 2019ರಲ್ಲಿ ನಡೆದಿದ್ದು, ಪತ್ರಕರ್ತ ಅಶೋಕ್ ಪಾಂಡೆ ಎಂಬುವವರು ಸಲ್ಮಾನ್ ಖಾನ್ ವಿರುದ್ಧ ದೂರು ನೀಡಿದ್ದರು. ಪತ್ರಕರ್ತ ನೀಡಿರುವ ದೂರಿನಲ್ಲಿ ‘ತಮ್ಮ ಕ್ಯಾಮೆರಾಮನ್ನೊಂದಿಗೆ ಜುಹುದಿಂದ ಕಾಂದಿವಲಿಗೆ ಹೋಗುವಾಗ ದಾರಿಯಲ್ಲಿ ಸಲ್ಮಾನ್ ಖಾನ್ ಅವರನ್ನು ನೋಡಿದೆವು. ಈ ಸಮಯದಲ್ಲಿ ಸಲ್ಮಾನ್ ಖಾನ್ ಅವರ ಸೈಕ್ಲಿಂಗ್ ಮಾಡುವ ವೀಡಿಯೊವನ್ನು ಸೆರೆಹಿಡಿಯಲು ಬಯಸಿದ್ದೆವು. ಇದಕ್ಕಾಗಿ ನಟನ ಬಾಡಿಗಾರ್ಡ್ ನಿಂದ ಅನುಮತಿ ಪಡೆಯಲಾಗಿತ್ತು. ಆದರೆ ವಿಡಿಯೋ ಮಾಡಲು ಪ್ರಾರಂಭಿಸಿದಾಗ, ಸಲ್ಮಾನ್ ಖಾನ್ ಅದನ್ನು ವಿರೋಧಿಸಿದರು. ನಟ ತನ್ನ ಮೇಲೆ ಹಲ್ಲೆ ನಡೆಸಿ ನಂತರ ಫೋನ್ ಕಸಿದುಕೊಂಡಿದ್ದಾರೆ’ ಎಂದು ಪತ್ರಕರ್ತ ಆರೋಪ ಮಾಡಿದ್ದಾರೆ. ಅಲ್ಲದೆ ಸಲ್ಮಾನ್ ಖಾನ್ ಅವರ ಅಂಗರಕ್ಷಕ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ ಆರೋಪವೂ ಇದೆ.
ಪತ್ರಕರ್ತನ ಈ ಆರೋಪದ ನಂತರ, ಸಲ್ಮಾನ್ ಖಾನ್ ವಿರುದ್ಧ ಹಲವು ಸೆಕ್ಷನ್ಗಳಲ್ಲಿ ಪ್ರಕರಣ ದಾಖಲಾಗಿದೆ. ನಟನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504(ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಪೊಲೀಸ್ ವರದಿ ತಿಳಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada