ಧಾರವಾಡ ಜಿಲ್ಲೆಯ ಪುಟ್ಟ ತಾಲ್ಲೂಕಾದ ಕುಂದಗೋಳ ತನ್ನೊಡಲಿನ ಸಂಗೀತದಿಂದಾಗಿ ದೇಶ ವಿದೇಶಗಳಲ್ಲಿಯೂ ಇಂದು ಪರಿಚಿತವಾಗಿದೆ. ಅಲ್ಲಿ ಬಂದು ಹಾಡುವುದು ಸಂಗೀತಗಾರರಿಗೆ ಖುಷಿ, ಭಕ್ತಿ, ಅಭಿಮಾನದ ಸಂಗತಿ. ಅಲ್ಲಿಗೆ ಹೋಗುವುದೆಂದರೆ ಸಂಗೀತಪ್ರಿಯರಿಗೆ ತೀರ್ಥಯಾತ್ರೆಗೆ ಹೋದ ಹಾಗೆ. ಏಕೆಂದರೆ ಅದು ಹಿಂದೂಸ್ತಾನಿ ಸಂಗೀತ ಕ್ಷೇತ್ರದ ‘’ಗಂಧರ್ವ’ ಸವಾಯಿ ಗಂಧರ್ವರು ಜನಿಸಿದ ಊರು. ಮೇರು ಕಲಾವಿದರೆನಿಸಿದ ಪಂಡಿತ್ ಭೀಮಸೇನ ಜೋಷಿ ಹಾಗೂ ವಿದುಷಿ ಗಂಗೂಬಾಯಿ ಹಾನಗಲ್ ಅವರಿಗೆ ಸಂಗೀತದ ತಾಲೀಮು ಕೊಟ್ಟ ಊರು.
ಹುಬ್ಬಳ್ಳಿಗೆ 12 ಮೈಲಿ ದೂರದಲ್ಲಿರುವ ಕುಂದಗೋಳವು ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು. ಅಲ್ಲಿನ ಆಡಳಿತ ಭಾಷೆ ಮರಾಠಿಯಾಗಿತ್ತು. ಇಂತಹ ಪರಿಸರದಲ್ಲಿ ಹಿಂದೂಸ್ತಾನೀ ಸಂಗೀತದಲ್ಲಿ ದೇಶದ ಮನೆಮಾತಾಗಿ ಪ್ರಸಿದ್ಧರಾಗಿದ್ದ, ಸವಾಯಿ ಗಂಧರ್ವರು 1886ರ ಜನವರಿ 19ರಂದು ಜನಿಸಿದರು. ಅವರ ಬಾಲ್ಯದ ಹೆಸರು ರಾಮಚಂದ್ರ ಗಣೇಶ ಕುಂದಗೋಳಕರ್. ಎಲ್ಲರೂ ಇವರನ್ನು ರಾಮಭಾವು ಎನ್ನುತ್ತಿದ್ದರು. ಅವರ ತಂದೆಯವರಾದ ಗಣೇಶರಾವ್ ಹತ್ತಿರದ ಸಂಶಿ ಎಂಬ ಊರಿನಲ್ಲಿ ಜನಿಸಿದವರು. ತಾಯಿ ಧಾರವಾಡದ ಹತ್ತಿರದ ಅಮ್ಮಿನಹಾಳ ಗ್ರಾಮದವರು.
ಬಾಲಕ ರಾಮಭಾವು ಪಲ್ಲಕ್ಕಿ ಸೇವೆಯ ಸಮಯದಲ್ಲಿ ಭಜನೆ ಹಾಡುಗಳನ್ನು ಹಾಡುತ್ತಿದ್ದರು. ಅವರ ಪ್ರಾಥಮಿಕ ಶಿಕ್ಷಣ ಹಳ್ಳಿಯಲ್ಲೇ ನಡೆಯಿತು. ಅವರ ಪ್ರೌಢಶಾಲಾ ವಿದ್ಯಾಭ್ಯಾಸ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಹೈಸ್ಕೂಲಿನಲ್ಲಿ ನಡೆಯಿತು. ಪ್ರತಿದಿನವೂ ರೈಲಿನಲ್ಲಿ ಹೋಗಿಬರಬೇಕಾಗಿತ್ತು. ಆದರೆ ಇದು ಹೆಚ್ಚುದಿನ ಸಾಗಲಿಲ್ಲ. ತಾಯಿಯ ಮರಣದಿಂದಾಗಿ ಚಿಕ್ಕಮ್ಮನ ಆಸರೆಯಲ್ಲಿ ನಾಡಿಗೇರವಾಡಿಯಲ್ಲೇ ಬೆಳೆದರು. ಕಿರಾಣಾ ಘರಾಣೆಯ ಗಾಯಕ ಅಬ್ದುಲ್ ಕರೀಂ ಖಾನರು ‘ಭೈರವಿ ರಾಗ’ದಲ್ಲಿ ಹಾಡಿದ ’ಜಮುನಾಕೆ ತೀರ್’ ಎಂಬ ಗೀತೆ ಅವರ ಹೃದಯದಲ್ಲಿ ಅಚ್ಚೊತ್ತಿತು. ಕಿರಾಣಾ ಘರಾಣೆಯ ಆದ್ಯ ಪ್ರವರ್ತಕರಾದ ಉಸ್ತಾದ ಅಬ್ದುಲ್ ಕರೀಮ್ ಖಾನ್ ಸಾಹೇಬರು ಕುಂದಗೋಳಕ್ಕೆ ತಮ್ಮ ಶಿಷ್ಯರಾದ ನಾನಾಸಾಹೇಬ ನಾಡಿಗೇರರಲ್ಲಿ ಆಗಾಗ್ಗೆ ಬರುತ್ತಿದ್ದರು. ಬಾಲಕ ರಾಮಚಂದ್ರ ಗಣೇಶನ ಸಂಗೀತಾಸಕ್ತಿಯನ್ನು ಕಂಡ ಖಾನ್ ಸಾಹೇಬರು ಅವನನ್ನು ತಮ್ಮ ಜೊತೆಯಲ್ಲಿ ಮಿರಜ್ಗೆ ಕರೆದುಕೊಂಡು ಹೋದರು.
ಗುರುಗಳಿಗೆ ಶೃತಿ ತಂಬೂರಿ ಮೀಟುತ್ತಾ ಗಂಟೆಗಟ್ಟಲೆ ಸಂಗೀತವನ್ನು ಅವಲೋಕಿಸುವ ಅವಕಾಶವನ್ನು ರಾಮಭಾವು ಸದುಪಯೋಗಗೊಳಿಸಿಕೊಂಡರು. ನಿಧಾನವಾಗಿ ಸ್ವರಬೆರೆಸುವ ತಾಲೀಮು ಆರಂಭವಾಯಿತು. ಹೀಗೆ ಶ್ರದ್ಧಾನಿಷ್ಠೆಗಳಿಂದ ಗುರುಸಾನ್ನಿಧ್ಯದಲ್ಲಿ ಸಂಗೀತವನ್ನು ತಮ್ಮದಾಗಿಸಿಕೊಂಡರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: