ಶಾಂತಾದೇವಿಯರು 1933 ವರ್ಷದ ಜನವರಿ 12ರಂದು ವಿಜಾಪುದಲ್ಲಿ ಜನಿಸಿದರು. ತಂದೆ ಸಿದ್ಧಬಸಪ್ಪ ಗಿಡ್ನವರ. ತಾಯಿ ಭಾಗೀರಥಿದೇವಿ. ಕಂದಾಯ ಇಲಾಖೆಯಲ್ಲಿ ಮಾಮಲೆದಾರರಾಗಿದ್ದ ತಂದೆಯವರು ಮುಂಬೈ ಕರ್ನಾಟಕದ ಅಸಿಸ್ಟೆಂಟ್ ಕಮೀಷನರಾಗಿ ನಿವೃತ್ತರಾದವರು. ಅವರಿಗೆ ಅಪಾರವಾದ ಸಾಹಿತ್ಯದ ಒಲವು. ಮನೆಯಲ್ಲಿ ಇಂಗ್ಲಿಷ್, ಕನ್ನಡ ಪುಸ್ತಕಗಳ ದೊಡ್ಡ ಭಂಡಾರವನ್ನೇ ಹೊಂದಿದ್ದರು. ಅವರಲ್ಲಿ ಸಾಹಿತ್ಯ ಮತ್ತು ಅಧ್ಯಾತ್ಮ ಕೃತಿಗಳಿಗೆ ಮೊದಲ ಪ್ರಾಶಸ್ತ್ಯ. ಮಧುರ ಚೆನ್ನರ ಸಹವಾಸದಿಂದ ಅರವಿಂದರ ಅನುಯಾಯಿಗಳು. ಮಾಸ್ತಿ, ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶಂಬಾ ಜೋಶಿ, ಗೋಕಾಕ್, ರಂ.ಶ್ರೀ. ಮುಗಳಿ, ಶಿ.ಶಿ. ಬಸವನಾಳ, ಹರ್ಡೇಕರ್ ಮಂಜಪ್ಪ, ಫ.ಗು. ಹಳಕಟ್ಟಿ, ಸಿಂಪಿ ಲಿಂಗಣ್ಣ, ಸ.ಸ. ಮಾಳವಾಡ ಮುಂತಾದ ಸಾಹಿತಿಗಳ ಸಂಗ ಅವರಿಗಿತ್ತು. ಮಧುರಚೆನ್ನ, ಬೇಂದ್ರೆ, ರಂ.ಶ್ರೀ. ಮುಗಳಿ ಮೊದಲಾದವರಂತೂ ಮನೆಗೆ ಆಗಾಗ ಬರುತ್ತಿದ್ದರು.ಶಾಂತಾದೇವಿ ಅವರಿಗೆ ಮನೆಯಲ್ಲಿದ್ದ ಸಾಂಸ್ಕೃತಿಕ ವಾತಾವರಣದಿಂದ ಸಹಜವಾಗೆಂಬಂತೆ ಸಾಹಿತ್ಯದ ಹುಚ್ಚು ಜೊತೆಗೂಡಿತ್ತು. ತಂದೆಯಿಂದಲೇ ‘ಜೇನ್ ಆಸ್ಟಿನ್’ಳ ಕಾದಂಬರಿ ಓದಿ ಬರವಣಿಗೆಯ ಪರಿಚಯ ಆಗಿತ್ತು. ಪ್ರಾಥಮಿಕ ವಿದ್ಯಾಭ್ಯಾಸ ವಿಜಾಪುರದಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸ ರೋಣ, ರಾಣಿ ಬೆನ್ನೂರು, ಬೈಲಹೊಂಗಲಗಳಲ್ಲಿ ಅಯ್ತು.ಶಾಲೆಗೆ ಹೋಗುತ್ತಿದ್ದ ದಿನಗಳವು (1948-49). ಕಿತ್ತೂರ ಸಂಸ್ಥಾನದ ಸಮಗ್ರ ಇತಿಹಾಸ ಗೊತ್ತಿದ್ದವರು ದೊಡ್ಡಭಾವೆಪ್ಪ ಮೂಗಿ. ಅವರು ಆಗಾಗ ಶಾಂತಾದೇವಿ ಅವರ ಮನೆಗೆ ಬರುತ್ತಿದ್ದರು. ಅವರು ಹೇಳಿದ ಘಟನೆಯನ್ನು ಆಧರಿಸಿ `ರಂಜನಿ ಮಹಲು’ ಎಂಬ ಕಥೆ ಬರೆದಿದ್ದರು. ಆದರೆ ಸಂಕೋಚದಿಂದ ಪ್ರಕಟಣೆಗೆ ಕಳಿಸಲಿಲ್ಲ.ಶಾಂತಾದೇವಿಯವರು ವಿಜಾಪುರದಲ್ಲಿದ್ದಾಗ ಚೆನ್ನವೀರ ಕಣವಿಯವರು ಅವರ ಅಕ್ಕನ ಪುತ್ರರಾಗಿದ್ದ ಶಂಕರ ಪಾಟೀಲರ ಮನೆಗೆ ಬರುತ್ತಿದ್ದರು. ಅವರು ಬಿ.ಎ ಓದುವಾಗಿನಿಂದ ಅಲ್ಲಿಗೆ ಬರುತ್ತಿದ್ದರು. ಹಾಗೆಯೇ ಶಾಂತಾದೇವಿಯವರ ಮನೆಯಲ್ಲಿದ್ದಗ್ರಂಥಾಲಯಕ್ಕೂ ಭೇಟಿ ಕೊಟ್ಟಿದ್ದರು. ಆಗಲೇ ಕಣವಿ ಅವರ `ಕಾವ್ಯಾಕ್ಷಿ’ ಹಾಗೂ `ಭಾವಜೀವಿ’ ಎರಡು ಕವನ ಸಂಕಲನಗಳು ಪ್ರಕಟವಾಗಿದ್ದವು. ಸಿದ್ದಪ್ಪನವರಿಗೆ ಸಾಹಿತ್ಯದ ಒಲವಿದ್ದವರಿಗೆ ಶಾಂತಾದೇವಿ ಅವರನ್ನು ಮದುವೆ ಮಾಡಿಕೊಡುವ ಇಚ್ಛೆಯಿತ್ತು. “ನಮ್ಮ ಮಗಳ ಬಗ್ಗೆ ಏನನ್ನಿಸುತ್ತದೆ? ಲಗ್ನ ಮಾಡಿಕೊಳ್ತಿರೇನು ಎಂದು ಕಣವಿ ಅವರನ್ನು” ಶಾಂತಾದೇವಿ ಅವರ ತಾಯಿ ಕೇಳಿದ್ದರು. “ತಂದೆ-ತಾಯಿಯನ್ನು ಕೇಳಿ ಹೇಳ್ತೀನಿ” ಎಂದು ಬಂತು ಉತ್ತರ. ಕಣವಿ ಅವರ ಎಂ.ಎ. ಆದ ಮೇಲೆ ಅಂದರೆ 1952ರಲ್ಲಿ ಧಾರವಾಡದಲ್ಲಿ ಶಾಂತಾದೇವಿ ಚನ್ನವೀರ ಕಣವಿ ಅವರ ಮದುವೆಯಾಯಿತು.ನಿಶ್ಚಿತಾರ್ಥಕ್ಕೂ ಮದುವೆಗೂ ಎರಡು ವರ್ಷ ಅಂತರವಿತ್ತು. ಆಗ ಕಣವಿಯವರ ಪ್ರೇಮ ಪತ್ರದಲ್ಲಿ ಕಾವ್ಯಭಾಷೆಯಿತ್ತು. ಮದುವೆಯ ನಂತರ ಶಾಂತಾದೇವಿಯವರ ಬರವಣಿಗೆಗೆ ಅದು ಪ್ರೇರಣೆ ಆಯ್ತು.
https://play.google.com/store/apps/details?id=com.speed.newskannada