ಮುಂಬೈ: ಮುಂದಿನ ಆರು ತಿಂಗಳಲ್ಲಿ ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ನೇತೃತ್ವದ ಸರಕಾರ ಪತನವಾಗುವ ಸಾಧ್ಯತೆಯಿರುವುದರಿಂದ ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ರವಿವಾರ ಹೇಳಿದ್ದಾರೆ.
ರವಿವಾರ ಸಂಜೆ ಮುಂಬೈನಲ್ಲಿ ಎನ್ಸಿಪಿ ಶಾಸಕರು ಹಾಗೂ ಪಕ್ಷದ ಇತರ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
“ಮಹಾರಾಷ್ಟ್ರದಲ್ಲಿ ಹೊಸದಾಗಿ ರಚನೆಯಾದ ಸರಕಾರವು ಮುಂದಿನ ಆರು ತಿಂಗಳಲ್ಲಿ ಪತನವಾಗಬಹುದು. ಆದ್ದರಿಂದ ಎಲ್ಲರೂ ಮಧ್ಯಂತರ ಚುನಾವಣೆಗೆ ಸಿದ್ಧರಾಗಿರಬೇಕು” ಎಂದು ಪವಾರ್ ಕರೆ ನೀಡಿದರು ಎಂದು ಸಭೆಯಲ್ಲಿ ಭಾಗವಹಿಸಿದ್ದ ಎನ್ಸಿಪಿ ನಾಯಕರೊಬ್ಬರು ಹೇಳಿದ್ದಾರೆ.
“ಶಿಂಧೆ ಅವರನ್ನು ಬೆಂಬಲಿಸುತ್ತಿರುವ ಅನೇಕ ಬಂಡಾಯ ಶಾಸಕರು ಪ್ರಸ್ತುತ ವ್ಯವಸ್ಥೆಯಿಂದ ಸಂತೋಷವಾಗಿಲ್ಲ. ಒಮ್ಮೆ ಸಚಿವರ ಖಾತೆ ಹಂಚಿಕೆಯ ನಂತರ ಅವರ ಅಸಮಾಧಾನ ಹೊರಬರುತ್ತದೆ, ಇದು ಅಂತಿಮವಾಗಿ ಸರಕಾರ ಪತನಕ್ಕೆ ಕಾರಣವಾಗುತ್ತದೆ” ಎಂದು ಪವಾರ್ ಹೇಳಿದರು.
ಈ ಪ್ರಯೋಗದ ವೈಫಲ್ಯವು ಹಲವಾರು ಬಂಡಾಯ ಶಾಸಕರು ತಮ್ಮ ಮೂಲ ಪಕ್ಷಕ್ಕೆ ಮರಳಲು ಕಾರಣವಾಗುತ್ತದೆ. ನಮ್ಮ ಕೈಯಲ್ಲಿ ಕೇವಲ ಆರು ತಿಂಗಳಿರುವ ಸಾಧ್ಯತೆಯಿರುವ ಕಾರಣ ಎನ್ಸಿಪಿ ಶಾಸಕರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸಮಯ ಕಳೆಯಬೇಕು ಎಂದು ಪವಾರ್ ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada