ಮುಖ್ಯಮಂತ್ರಿ ಸ್ಥಾನದ ಕುರಿತ ಚರ್ಚೆ ಬಿಡುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸ್ಪಷ್ಟವಾಗಿ ಸೂಚಿಸಿದೆ. ವಿಶೇಷವಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರಿಗೆ ಈ ವಿಚಾರದಲ್ಲಿಎಚ್ಚರ ವಹಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿದು ಬಂದಿದೆ.”ನೀವು ನೀಡುವ ಹೇಳಿಕೆ ಬಗ್ಗೆ ಜಾಗ್ರತೆಯಿರಲಿ. ವೈಯಕ್ತಿಕ ಆಕಾಂಕ್ಷೆ ಮತ್ತು ಸಮುದಾಯಗಳ ಕುರಿತ ಸೂಕ್ಷ್ಮ ವಿಚಾರದಲ್ಲಿ ನೀಡುವ ಒಂದು ಹೇಳಿಕೆ ಪಕ್ಷದ ಅವಕಾಶವನ್ನು ಹಾಳು ಮಾಡಬಹುದು. ಕರ್ನಾಟಕದಲ್ಲಿಅಧಿಕಾರಕ್ಕೆ ಬರಲು ಉತ್ತಮ ವಾತಾವರಣವಿದೆ. ಈಗ ಚುನಾವಣೆ ಗೆಲ್ಲಲು ಕೆಲಸ ಮಾಡಿ. ಮುಂದಿನದನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ,” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೈಕಮಾಂಡ್ ಪರವಾಗಿ ಸೂಚನೆ ಕೊಟ್ಟರು ಎಂದು ತಿಳಿದು ಬಂದಿದೆ.ಬೆಳಗಾವಿ ಅಧಿವೇಶನಕ್ಕೆ ತೆರೆ ಬೀಳುತ್ತಿದ್ದಂತೆ ಚುನಾವಣೆ ಸಿದ್ಧತೆ ಸಂಬಂಧಿತವಾದ ಕಾಂಗ್ರೆಸ್ ಚಟುವಟಿಕೆ ಬಿರುಸುಗೊಳ್ಳಲಿದೆ. ಈ ನಿಟ್ಟಿನಲ್ಲಿಸಾಲು ಸಾಲು ಸಮಾವೇಶ ನಡೆಸುವಂತೆ ಪ್ರದೇಶ ಕಾಂಗ್ರೆಸ್ಗೆ ಹೈಕಮಾಂಡ್ ಸೂಚಿಸಿದೆ. ಕೃಷ್ಣಾ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಡಿಸೆಂಬರ್ 30ರಂದು ವಿಜಯಪುರದಲ್ಲಿ ಬೃಹತ್ ಸಮಾವೇಶ, ಮಹದಾಯಿ ಯೋಜನೆಗಾಗಿ ಜನವರಿ 2ರಂದು ಹುಬ್ಬಳ್ಳಿಯಲ್ಲಿ ಸಭೆ, ಜನವರಿ 8ರಂದು ದಲಿತ ಸಮಾವೇಶ, ನಂತರ ಒಬಿಸಿ ಸಮಾವೇಶ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.ರಾಜ್ಯ ಕಾಂಗ್ರೆಸ್ ಪ್ರಮುಖರಾದ ಡಾ ಜಿ ಪರಮೇಶ್ವರ, ಕೆಎಚ್ ಮುನಿಯಪ್ಪ, ಬಿಕೆ ಹರಿಪ್ರಸಾದ್, ಎಂಬಿ ಪಾಟೀಲ್, ಆರ್ವಿ ದೇಶಪಾಂಡೆ, ದಿನೇಶ್ ಗುಂಡೂರಾವ್, ಎಚ್ಕೆ ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಆರ್ ಧ್ರುವನಾರಾಯಣ, ಈಶ್ವರ ಖಂಡ್ರೆ ಮತ್ತಿತರರು ಪಾಲ್ಗೊಂಡಿದ್ದರು. ಪಕ್ಷದ ಪರವಾಗಿ ಚುನಾವಣಾ ತಂತ್ರಗಾರಿಕೆ ಮಾಡುತ್ತಿರುವ ಸುನೀಲ್ ಕುನಗೋಳು ಅವರನ್ನೂ ಸಭೆಗೆ ಕರೆಸಿಕೊಳ್ಳಲಾಗಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada