ಕೋಲಾರ, ಮೇ 6: ನಲವತ್ತು ಪರ್ಸೆಂಟ್ ಕಮಿಷನ್, ಪಿಎಸ್ಐ ನೇಮಕಾತಿ ಹಗರಣದ ವಿಚಾರದಲ್ಲಿ ವಿರೋಧ ಪಕ್ಷದವರು ಆಡಳಿತ ಪಕ್ಷದವರ ವಿರುದ್ದ ಹರಿಹಾಯುತ್ತಿದ್ದರೆ, ಬಿಜೆಪಿಯು ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂದು ವಿಷಯಾಂತರ ಮಾಡುತ್ತಿದೆ.
ಬಿಜೆಪಿ ಸರ್ಕಾರ ಜನಸಮಾನ್ಯರ ಪೀಡಕ ಸರ್ಕಾರ, 40% ಭ್ರಷ್ಟಾಚಾರದ ಸರ್ಕಾರ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇತ್ತ, ಮುಂದಿನ ಅಂದರೆ 2023ರ ಚುನಾವಣೆ ವೇಳೆಗೆ ಸಿದ್ದರಾಮಯ್ಯ ಕಾಂಗ್ರೆಸ್ಸಿನಲ್ಲೇ ಇರುವುದಿಲ್ಲ ಎಂದು ಬಿಜೆಪಿ ಕಿಚಾಯಿಸಿದೆ.
ಈ ಬಗ್ಗೆ ಮಾಧ್ಯದಮವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಿದ್ದರಾಮಯ್ಯ, “ಈ ರೀತಿಯ ಆಧಾರ ರಹಿತ ಹೇಳಿಕೆಗಳಿಗೆ ನಾನು ಉತ್ತರವನ್ನು ಕೊಡಲು ಹೋಗುವುದಿಲ್ಲ. ನಾನು ಒಬ್ಬ ಕಾಂಗ್ರೆಸ್ಸಿಗ, ಅವರ ರೀತಿಯಲ್ಲಿ ದುಡ್ಡು ತೆಗೆದುಕೊಂಡು ಓಡಿ ಹೋಗುವುದಿಲ್ಲ”ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
“ಅಶ್ವಥ್ ನಾರಾಯಣ ಮತ್ತು ಆರಗ ಜ್ಞಾನೇಂದ್ರ ರಾಜೀನಾಮೆ ಕೊಡುವ ವಿಚಾರದಲ್ಲಿ ಜನರ ಬಳಿ ಹೋಗುತ್ತೇವೆ. ನಾವೆಲ್ಲಾ ಧರಣಿ ನಡೆಸಿದ್ದಕ್ಕೆ ಈಶ್ವರಪ್ಪ ರಾಜೀನಾಮೆ ನೀಡಿರುವುದು, ಈ ವಿಚಾರದಲ್ಲೂ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು”ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
“ಈಶ್ವರಪ್ಪ ರಾಜೀನಾಮೆ ವಿಚಾರದಲ್ಲಿ ವಿಧಾನಸೌಧದಲ್ಲಿ ಐದು ದಿನ ಧರಣಿ ನಡೆಸಿದ್ದೆವು. ನಮ್ಮ ಸಂಘಟಿತ ಧರಣಿಯಿಂದಾಗಿ ಈಶ್ವರಪ್ಪನವರಿಂದ ಬಿಜೆಪಿ ರಾಜೀನಾಮೆ ಪಡೆಯಿತೇ ವಿನಃ, ನೈತಿಕತೆಯಿಂದ ಅಲ್ಲ”ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
“ಪಕ್ಷದೊಳಗೆ ಚರ್ಚೆಯನ್ನು ನಡೆಸಿ, ಪಿಎಸ್ಐ ನೇಮಕಾತಿ ಹಗರಣದ ವಿಚಾರದಲ್ಲೂ ಹೋರಾಟವನ್ನು ನಡೆಸಲಿದ್ದೇವೆ. ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಬಂದು ಪರವಾನಿಗೆಯನ್ನು ಒತ್ತಿಹೋಗಿದ್ದಾರೆ” ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada