ತರಕಾರಿ ವ್ಯಾಪಾರಿಗಳ ಕರ್ಕಶ ಮೈಕ್ ವಿರುದ್ಧ ಪೊಲೀಸರ ಸಮರ…!
ಈ ಕುರಿತು ಪ್ರಕಟಣೆ ನೀಡಿರುವ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರು, ತರಕಾರಿ ವ್ಯಾಪಾರಿಗಳು ಬದುಕಿಗಾಗಿ ವ್ಯಾಪಾರ ಮಾಡುವುದು ತಪ್ಪಲ್ಲ. ಆದರೆ ಯಾರೂ ಮೈಕ್ ಬಳಿಸಿ ವೃದ್ಧರಿಗೆ, ಮಹಿಳೆಯರಿಗೆ ಮತ್ತು ವಿದ್ಯಾರ್ಥಿಗಳ ಆನ್ಲೈನ್ ತರಗತಿಗೆ ತೊಂದರೆ ಮಾಡುವ ರೀತಿಯಲ್ಲಿ ಜೋರಾಗಿ ಕೂಗಬಾರದು. ಶಬ್ಧ ಮಾಲಿನ್ಯದಿಂದ ಜನರಿಗೆ ತೊಂದರೆ ಆಗುತ್ತಿದ್ದು, ಇಂತಹ ಪ್ರಕರಣಗಳು ಇನ್ನು ಮೂದೆ ನಡೆದರೆ ಕಾನೂನು ಕ್ರಮ ಜರುಗಿಸಲಾಗುವುದು. ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಎಲ್ಲಾ ಕಡೆ ಮೈಕ್ ಬಳಕೆ: ಈ ಮೊದಲು ಮನೆಗಳ ಸಮೀಪ ಬಂದು ತರಕಾರಿ ಮಾರುತ್ತಿದ್ದವರು ಸಾಂಪ್ರದಾಯಿಕವಾಗಿ ಬಾಯಲ್ಲಿ ಕೂಗಿ ಮಾರಾಟ ಮಾಡುತ್ತಿದ್ದರು. ಟೆಕ್ನಾಲಜಿ ಮುಂದುವರೆದಂತೆ ಪೊಲೀಸರು ಗುಂಪು ಚದುರಲಿಸಲು ಬಳಸುವ ಮೈಕ್ಗಳನ್ನು ತರಕಾರಿ ವ್ಯಾಪಾರಿಗಳು ಬಳಸುತ್ತಿದ್ದಾರೆ. ಒಮ್ಮೆ ಕೂಗಿದನ್ನೇ ರೆಕಾರ್ಡ್ ಮಾಡಿಕೊಂಡು ಪೆನ್ ಡ್ರೈವ್ ಮೂಲಕ ಹಾಕಿದರೆ ಸಾಕು ನಿರಂತರ ಕೂಗುತ್ತಲೇ ಇರುತ್ತದೆ. ತರಕಾರಿ ವ್ಯಾಪಾರಿಗಳು ಕೂಗುವ ಧ್ವನಿ ಕೇಳಲಾಗದೇ ವೃದ್ಧರು , ವಿದ್ಯಾರ್ಥಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೀಗಾಗಿ ಪೂರ್ವ ವಿಭಾಗದ ಪೊಲೀಸರು ಈ ಕರ್ಕಶ ಮೆಗಾ ಪೋನ್ ಗಳ ವಿರುದ್ಧ ಸಮರ ಸಾರಿದ್ದು, ಎಚ್ಚರಿಕೆ ನಡುವೆ ಏನಾದರೂ ಮತ್ತೆ ಬೀದಿಗಳಲ್ಲಿ ಸದ್ದು ಮಾಡಿದರೆ ಬಂಧಿಸುವುದಾಗಿ ತರಕಾರಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಕಾರ್ಯಾಚರಣೆ ಅತಿ ಶೀಘ್ರದಲ್ಲಿ ಬೆಂಗಳೂರಿನಲ್ಲಿ ಶುರುವಾಗಲಿದೆ.