ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿರುವ ನಟ ನಂದಮೂರಿ ತಾರಕರತ್ನ ಮೃತದೇಹವನ್ನು ಹೈದರಾಬಾದ್ ಅವರ ನಿವಾಸಕ್ಕೆ ರವಾನಿಸಲಾಗಿದೆ. ಇವತ್ತು ದಿನ ಪೂರ್ತಿ ಅವರ ಕುಟುಂಬಸ್ಥರು ಹಾಗೂ ಆಪ್ತ ಬಂಧುಗಳು, ಸ್ನೇಹಿತರ ಅಂತಿಮ ದರ್ಶನಕ್ಕೆ ಇಡಲಾಗಿದೆ.
ರಾಜಕೀಯ ಗಣ್ಯರು ಹಾಗೂ ಸಿನಿಮಾ ಸೆಲೆಬ್ರೆಟಿಗಳು ತಾರಕರತ್ನ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಜೂನಿಯರ್ NTR ಹಾಗೂ ಕಲ್ಯಾಣ್ ರಾಮ್ ತೀವ್ರ ದುಖಿಃತರಾಗಿ ಮೌನಕ್ಕೆ ಜಾರಿದ್ದಾರೆ.
ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ತಾರಕರತ್ನ ಅವರ ಅಂತಿಮ ದರ್ಶನ ಪಡೆದರು. ಇದೇ ವೇಳೆ ಮಾತನಾಡಿದ ಅವರು, ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ದೂರವಾಗಿದ್ದಾರೆ. ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ. ಇತ್ತೀಚೆಗಷ್ಟೇ ಅವರು ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ನನ್ನ ಬಳಿ ಹೇಳಿಕೊಂಡಿದ್ದರು ಎಂದು ಹೇಳಿದರು.
ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಕೂಡ ತಾರಕರತ್ನ ಮೃತದೇಹದ ದರ್ಶನ ಪಡೆದು ಭಾವುಕರಾದರು. ಮಾವ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಧ್ವನಿ ಇನ್ನು ಮುಂದೆ ನನಗೆ ಕೇಳುವುದಿಲ್ಲ. ನಾನಿದ್ದೀನಿ ಎಂದು ನನ್ನ ಹಿಂದೆ ಬರುತ್ತಿದ್ದ ಆ ಹೆಜ್ಜೆಯ ಸಪ್ಪಳ ನಿಂತು ಹೋಗಿದೆ. ಇವರ ಸಾವು ನಮ್ಮ ಕುಟುಂಬಕ್ಕೆ ತುಂಬಲಾರದ ನಷ್ಟ ಎಂದು ಹೇಳುತ್ತಾ ದುಖಿಃತರಾದರು.
ತೆಲುಗು ನಟರಾದ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ್ ಹಾಗೂ ನಾನಿ ಕೂಡ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ನಂದಮೂರಿ ತಾರಕರತ್ನ ಅವರ ಹಠಾತ್ ಸಾವು ನಂಬಲು ಅಸಾಧ್ಯವಾದದ್ದು. ಓಂ ಶಾಂತಿ ಎಂದೇಳಿ ಅವರ ಕುಟುಂಬಕ್ಕೆ ದೇವರು ದುಖಃ ಭರಿಸುವ ಶಕ್ತಿ ನೀಡಲಿ ಎಂದು ಟ್ವಿಟ್ ಮಾಡಿದ್ದಾರೆ.
ತಾರಕರತ್ನ ಆಸ್ಪತ್ರೆಯಲ್ಲಿ ಸಾವನ್ನೇ ಗೆದ್ದು ಬರುತ್ತಾರೆಂದು ಕುಟುಂಬಸ್ಥರು ಭಾವಿಸಿದ್ದರು. ಆದ್ರೆ ವಿಧಿಯಾಟವೇ ಬೇರೆಯಾಗಿತ್ತು. ಮೃತದೇಹದ ಮುಂದೆ ತಾರಕರತ್ನ ಅವರ ಪತ್ನಿ ಮತ್ತು ಮಗಳು ಒಬ್ಬರಿಗೊಬ್ಬರು ಕಣ್ಣೀರು ಒರೆಸಿಕೊಳ್ಳುತ್ತಾ ಬಿಕ್ಕಿ ಬಿಕ್ಕಿ ರೋಧಿಸುತ್ತಿರುವುದು ಎಲ್ಲರ ಕಣ್ಣಂಚನ್ನ ಒದ್ದೆಯಾಗಿ ಮಾಡುವಂತಿದೆ. ತಾರಕರತ್ನ ನಿವಾಸದಲ್ಲಿ ಕುಟುಂಬಸ್ಥರ ದರ್ಶನದ ಬಳಿಕ ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೂ ಹೈದರಾಬಾದ್ನ ಫಿಲ್ಮ್ಚೇಂಬರ್ನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ನಂತರ ಸಂಜೆ 5 ಗಂಟೆಗೆ ಮಹಾಪ್ರಸ್ಥಾನದಲ್ಲಿ ತಾರಕರತ್ನ ಅಂತ್ಯಕ್ರಿಯೆ ಮಾಡಲಾಗುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada