ಸರ್ ಬೆನಗಲ್ ನರಸಿಂಗ ರಾವ್ಅಂತರರಾಷ್ಟ್ರೀಯ ಮಟ್ಟದ ಪ್ರಖ್ಯಾತ ಕಾನೂನು ತಜ್ಞ, ವಿಶ್ವಸಂಸ್ಥೆಯನ್ನು ಪ್ರತಿನಿಧಿಸಿದ, ಭಾರತದ ಸಂವಿಧಾನದ ಕರಡು ಪ್ರತಿ ತಯಾರಿಸಿದ, ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶ ಸ್ಥಾನದವರೆಗೆ ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದ ಭಾರತದ ಹೆಮ್ಮೆಯ ಪುತ್ರರಾದ ಸರ್ ಬೆನಗಲ್ ನರಸಿಂಗ ರಾವ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಚಿತ್ರಾಪುರ ಸಾರಸ್ವತ ಕುಟುಂಬಗಳಲ್ಲಿ ಒಂದಾದ ಬೆನೆಗಲ್ ಮನೆತನದಲ್ಲಿ 1887ರ ಫೆಬ್ರುವರಿ 26ರಂದು ಜನಿಸಿದರು.ನರಸಿಂಗ ರಾವ್ ಅವರ ತಂದೆ ಬಿ. ರಾಘವೇಂದ್ರರಾವ್ ಮದರಾಸು ಪ್ರೆಸಿಡೆನ್ಸಿಯಲ್ಲಿ ಸರ್ಕಾರಿ ವೈದ್ಯರು. ತಾಯಿ ರಾಧಾಬಾಯಿ. 1905ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಬಿ.ಎ. ಪದವಿ ಪಡೆದ ರಾಯರು, ಭಾರತ ಸರ್ಕಾರದ ಶಿಷ್ಯವೇತನದಿಂದ ಇಂಗ್ಲೆಂಡಿನಲ್ಲಿ ಐ.ಸಿ.ಎಸ್. ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದರು. ಮುಂದೆ ಭಾರತಕ್ಕೆ ಹಿಂದಿರುಗಿ ಬಂಗಾಳದಲ್ಲಿ 14 ವರ್ಷಗಳ ಕಾಲ ಜಿಲ್ಲಾಧಿಕಾರಿ, ನ್ಯಾಯಾಧಿಶರಾಗಿ ಸೇವೆ, 1919-20ರಲ್ಲಿ ಮುರ್ಷಿದಾಬಾದ್ನಲ್ಲಿ ಸೆಷನ್ ಜಡ್ಜ್; 1920-25ರಲ್ಲಿ ಸಿಲ್ಹೆಟ್ ಹಾಗೂ ಕಾತಾರ್ನಲ್ಲಿ ಡಿಸ್ಟ್ರಿಕ್ಟ್ ಹಾಗೂ ಸೆಷನ್ ಜಡ್ಜ್ ; 1925ರಲ್ಲಿ ಅಸ್ಸಾಂ ಪ್ರಾಂತ್ಯದ ವಿಧಾನ ಪರಿಷತ್ತಿನ ಕಾರ್ಯದರ್ಶಿ ಹೀಗೆ ಪ್ರತಿಷ್ಠಿತ ಹುದ್ಧೆಗಳಲ್ಲಿ ಕಾರ್ಯನಿರ್ವಹಿಸಿದರು. ಲಂಡನ್ನಿನ ದುಂಡುಮೇಜಿನ ಪರಿಷತ್ತಿನಲ್ಲಿ ಅಸ್ಸಾಂ ಪ್ರತಿನಿಯಾಗಿ ಭಾಗವಹಿಸಿದ್ದರು. 1934-35ರಲ್ಲಿ ಭಾರತ ಸರಕಾರದ ಲೆಜಿಸ್ಲೆಟಿವ್ ವಿಭಾಗದ ಕಾರ್ಯದರ್ಶಿಗಳಾಗಿ, 1935ರಲ್ಲಿ ಕೊಲ್ಕತ್ತಾದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ರಾವ್ 1938ರಲ್ಲಿ ಸುಧಾರಣ ಆಯೋಗದ ಕೆಲಸ ನಿರ್ವಹಿಸಿದರು. 1941ರಲ್ಲಿ ಹಿಂದೂ ನ್ಯಾಯ ಪರಿಷ್ಕರಣೆಗಾಗಿ ಕೇಂದ್ರ ಸರಕಾರ ರಚಿಸಿದ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. 1939ರಲ್ಲಿ ಕೇಂದ್ರ ಸಂಶೋಧನ ಸಂಸ್ಥೆಗಾಗಿ ವೈದ್ಯವಿಜ್ಞಾನ, ಶಸ್ತ್ರ ಚಿಕಿತ್ಸೆ ವಿಭಾಗಗಳ ಯೋಜನೆಯನ್ನು ಸಿದ್ಧಪಡಿಸಿದರು. ಸಿಂಧೂ ಆಯೋಗದ ಕಾರ್ಯಕಾರಿಣಿಯಲ್ಲೂ ಭಾಗಿಯಾಗಿದ್ದರು. 1944ರಲ್ಲಿ ಭಾರತ ಸರ್ಕಾರದ ಸೇವೆಯಿಂದ ನಿವೃತ್ತಿ ಹೊಂದಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: