ಬೆಳ್ತಂಗಡಿ: ಶಿವರಾತ್ರಿ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರಿಕರು ಚಾರ್ಮಾಡಿ ಹಾಗೂ ಶಿರಾಡಿ ಘಾಟಿಗಳ ಮೂಲಕ ಶನಿವಾರ ಬರಲಾರಂಭಿಸಿದ್ದಾರೆ.
ಈಗಾಗಲೇ ಹಲವು ತಂಡಗಳು ಚಾರ್ಮಾಡಿ, ಕಲ್ಮಂಜ, ಮುಂಡಾಜೆ, ಕೊಕ್ಕಡ, ಬೂಡುಜಾಲು, ಉಜಿರೆ ಮೊದಲಾದ ರಸ್ತೆಗಳ ಮೂಲಕ ಧರ್ಮಸ್ಥಳ ಕ್ಷೇತ್ರದ ಕಡೆ ಪ್ರಯಾಣಿಸುತ್ತಿದ್ದಾರೆ.ಭಾನುವಾರ ಹಾಗೂ ಸೋಮವಾರ ಅತಿ ಹೆಚ್ಚಿನ ಸಂಖ್ಯೆಯ ಪಾದಯಾತ್ರಿಗಳು ಈ ರಸ್ತೆಗಳ ಮೂಲಕ ಆಗಮಿಸುವ ಸಾಧ್ಯತೆ ಇದೆ. ಶಿವರಾತ್ರಿಯಂದು ಕ್ಷೇತ್ರಕ್ಕೆ 30 ಸಾವಿರ ಪಾದಯಾತ್ರಿಗಳು ಆಗಮಿಸುವ ನಿರೀಕ್ಷೆ ಇದೆ.ಸ್ಥಳೀಯರಿಂದ ಸೇವೆ: ರಸ್ತೆಯ ಅಲ್ಲಲ್ಲಿ ಸ್ಥಳೀಯರು ಪಾನಕ, ಶರಬತ್ತು, ಕಲ್ಲಂಗಡಿ, ನೀರಿನ ವ್ಯವಸ್ಥೆ ಮಾಡಿ ಯಾತ್ರಿಗಳನ್ನು ಸ್ವಾಗತಿಸುತ್ತಿದ್ದಾರೆ. ಬೆಂಗಳೂರಿನ ಪದ್ಮರಾಜ್ ಎಂಬುವರು ಕಕ್ಕಿಂಜೆಯ ಮಧುಕರ ರಾವ್ ಸಹಕಾರದಲ್ಲಿ 30 ವರ್ಷಗಳಿಂದ, ಮುಂಡಾಜೆಯ ಪಡೀಲು ರಾಮನಾಯ್ಕ್ ಮತ್ತು ಮನೆಯವರು 25 ವರ್ಷಗಳಿಂದ ಸ್ವಾಗತಿಸಿ ಉಪಚರಿಸುತ್ತಿದ್ದಾರೆ. ಚಾರ್ಮಾಡಿ ಪಂಚಾಯಿತಿ, ಉಜಿರೆ, ಕನ್ಯಾಡಿ, ಸೋಮಂತಡ್ಕ ಮೊದಲಾದ ಕಡೆ ಸ್ಥಳೀಯರು ಪಾದಯಾತ್ರಿಗಳ ಅನುಕೂಲಕ್ಕಾಗಿ ವ್ಯವಸ್ಥೆ ಕಲ್ಪಿಸಿದ್ದಾರೆ.ಚಾರ್ಮಾಡಿ ಮೂಲಕ ಬರುವ ಪಾದಯಾತ್ರಿಗಳಿಗೆ ಶ್ರೀ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ, ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನಗಳ ಆಡಳಿತ ಮಂಡಳಿ ಆಹಾರ, ವಸತಿ ಸೇವೆಗಳನ್ನು ಒದಗಿಸಿದೆ. ಪಾದಯಾತ್ರಿಕರ ಆರೋಗ್ಯ ಉಪಚಾರಕ್ಕೆ ಉಜಿರೆ ಎಸ್ಡಿಎಂ ಆಸ್ಪತ್ರೆ ವತಿಯಿಂದ ಚಾರ್ಮಾಡಿ, ಸತ್ಯನಪಲ್ಕೆ, ಬೂಡುಜಾಲು, ಉಜಿರೆ, ಧರ್ಮಸ್ಥಳ ಮೊದಲಾದ ಕಡೆ ಶಿಬಿರಗಳನ್ನು ತೆರೆಯಲಾಗಿದೆ. ಚಾರ್ಮಾಡಿ ಹಾಗೂ ಶಿರಾಡಿ ಘಾಟಿಯಲ್ಲಿ ಕಾಡಾನೆಗಳ ಸಂಚಾರ ಇರುವುದರಿಂದ ಪಾದಯಾತ್ರಿಗಳು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಅರಣ್ಯ ಇಲಾಖೆ ಸೂಚನೆ ನೀಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada