ಬಿಡದಿ : ಇಲ್ಲಿನ ಈಗಲ್ಟನ್ ರೆಸಾರ್ಟ್ ಮತ್ತು ಗಾಲ್ಫ್ ವಿಲೇಜ್ ಆವರಣದಲ್ಲಿ ಇರುವ ಖಾಸಗಿ ವಿಲ್ಲಾವೊಂದರಲ್ಲಿ ದುಷ್ಕರ್ಮಿಗಳು ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.ಈಟನ್ಟನ್ ವಿಲ್ಲಾ ಸಿ-21ರಲ್ಲಿ ವಾಸವಿದ್ದ ರಘುರಾಜ್ (70) ಹಾಗೂ ಅವರ ಪತ್ನಿ ಆಶಾ (63) ಹತ್ಯೆಗೀಡಾದವರು.ದುಷ್ಕರ್ಮಿಗಳು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದು, ಸೋಮವಾರ ರಾತ್ರಿ ಅಥವಾ ಮಂಗಳವಾರ ಮುಂಜಾನೆ ಈ ಕೃತ್ಯ ನಡೆದಿರಬಹುದು. ಪರಿಚಯಸ್ಥರೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಚೆನ್ನೈ ಮೂಲದವರಾದ ರಘುರಾಜ್ ವಾಯುಸೇನೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಿದ್ದು, ನಿವೃತ್ತಿ ಬಳಿಕ ಈಗಲ್ಟನ್ನಲ್ಲಿ ವಿಲ್ಲಾ ಖರೀದಿಸಿ ಇಲ್ಲಿಯೇ ನೆಲೆಸಿದ್ದರು. ಅವರಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದು, ಕೆಲಸದ ನಿಮಿತ್ತ ದೆಹಲಿಯಲ್ಲಿ ಇದ್ದಾರೆ.
ಬೆಳಕಿಗೆ ಬಂದಿದ್ದು ಹೇಗೆ?: ರಘುರಾಜ್ ಸೋಮವಾರ ರಾತ್ರಿಯಿಂದಲೂ ಮೊಬೈಲ್ ಕರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಗಾಬರಿಗೊಂಡ ಅವರ ಪುತ್ರ ಈಗಲ್ಟನ್ ರೆಸಾರ್ಟ್ನಲ್ಲಿನ ಭದ್ರತಾ ಸಿಬ್ಬಂದಿಗೆ ಮಂಗಳವಾರ ಮಧ್ಯಾಹ್ನ ಕರೆ ಮಾಡಿ ವಿಚಾರಿಸಿದ್ದಾರೆ. ಭದ್ರತಾ ಸಿಬ್ಬಂದಿಯು ಮನೆಗೆ ಬಂದು ನೋಡಿದಾಗ ಅಲ್ಲಿಂದ ಒಬ್ಬ ವ್ಯಕ್ತಿ ಓಡುವುದು ಕಂಡಿದೆ. ಮನೆಯ ಒಳಗೆ ಪ್ರತ್ಯೇಕ ಕೊಠಡಿಗಳಲ್ಲಿ ರಘುರಾಜ್ ಹಾಗೂ ಆಶಾ ಅವರ ಶವಗಳು ಪತ್ತೆಯಾದವು ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಗಿರೀಶ್ ಮಾಹಿತಿ ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada