ಜೀ ಕನ್ನಡ ವಾಹಿನಿಯಲ್ಲಿ ಸದ್ಯ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ವೇದಾಂತ್ ವಸಿಷ್ಠ ಪಾತ್ರವನ್ನು ನಿರ್ವಹಿಸಿ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತನಾಗಿರುವ ನಟ ರಕ್ಷಿತ್ ಗೌಡ. ರಕ್ಷ್ ಎಂಬ ಹೆಸರಿನಿಂದಲೇ ಹೆಚ್ಚಾಗಿ ಕರೆಯಲ್ಪಡುವ ನಟ ರಕ್ಷಿತ್ ಗೌಡ ಈಗಲೂ ಸಹ ಗಟ್ಟಿಮೇಳ ಧಾರಾವಾಹಿಯಲ್ಲಿ ಸಕ್ರಿಯರಾಗಿದ್ದಾರೆ.
ಮೊದಲಿಗೆ ನಟನಾಗಿ ಈ ಧಾರಾವಾಹಿಯಲ್ಲಿ ಭಾಗಿಯಾಗಿದ್ದ ನಟ ರಕ್ಷ್ ಈಗ ಸ್ವತಃ ನಿರ್ಮಾಪಕನಾಗಿದ್ದಾರೆ.
ತೆಲುಗಿನ ವರುಂಧಿನಿ ಪರಿಣಯಂ ಎಂಬ ಧಾರಾವಾಹಿಯ ರಿಮೇಕ್ ಆಗಿರುವ ಗಟ್ಟಿಮೇಳ ಧಾರಾವಾಹಿಗೆ ದೊಡ್ಡ ವೀಕ್ಷಕರ ಬಳಗವಿದ್ದು, ಧಾರಾವಾಹಿ ವೀಕ್ಷಕರಿಗೆ ಇಷ್ಟವಾಗುವ ರೀತಿ ಮೂಡಿ ಬರಲು ತಂಡ ಹಲವಾರು ತಂತ್ರಗಳನ್ನು ಹೆಣೆಯುತ್ತಿದೆ. ಇನ್ನು ಈ ಹಿಂದೆ ಧಾರಾವಾಹಿಗಳಿಗೆ ಚಲನಚಿತ್ರ ನಟರನ್ನು ಕರೆತರುವ ಟ್ರೆಂಡ್ ಸ್ವಲ್ಪ ದಿನಗಳ ಮಟ್ಟಿಗೆ ಸದ್ದು ಮಾಡಿತ್ತು. ಅದೇ ರೀತಿ ಗಟ್ಟಿಮೇಳ ಧಾರಾವಾಹಿ ತಂಡ ಸಹ ಸ್ಟಾರ್ ನಟರನ್ನು ತಮ್ಮ ಧಾರಾವಾಹಿಗೆ ಕರೆಸಿ ನಟಿಸುವಂತೆ ಮಾಡಲು ಯೋಜನೆ ಹಾಕಿಕೊಂಡಿತ್ತು.
ಇನ್ನು ರಕ್ಷ್ ಪ್ರೊಡಕ್ಷನ್ ಶುರು ಮಾಡಿದಾಗ ಟಿಆರ್ಪಿಯಲ್ಲಿ ಕುಸಿತ ಕಂಡಿತ್ತು. ಆ ಸಂದರ್ಭದಲ್ಲಿ ಧಾರಾವಾಹಿಯ ಲೀಡ್ ಪಾತ್ರಗಳಾದ ವೇದಾಂತ್ ಹಾಗೂ ಅಮೂಲ್ಯ ಮದುವೆ ಮಾಡಿದರೆ ಟಿಆರ್ಪಿ ಬರಲಿದೆ ಎಂಬುದನ್ನು ಚಿಂತಿಸಿ ಮದುವೆ ಸಂಚಿಕೆಗಳನ್ನು ಹೇಗೆ ಚಿತ್ರಿಸಬೇಕು, ಯಾರನ್ನು ಕರೆಸಬೇಕು ಎಂದು ತೀರ್ಮಾನಿಸಲು ಸಭೆಯೊಂದನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಸ್ಟಾರ್ ನಟರೊಬ್ಬರನ್ನು ಕರೆಸಿದರೆ ಹೆಚ್ಚಿನ ಆಕರ್ಷಣೆ ಇರಲಿದೆ ಎಂಬ ವಿಚಾರ ಬಂದಾಗ ರಕ್ಷ್ ಹೇಳಿದ್ದ ಉತ್ತರ ಕೇಳಿ ಎಲ್ಲರೂ ಇದು ಆಗದಿರುವ ಕೆಲಸ ಬಿಡಿ ಎಂದುಬಿಟ್ಟಿದ್ದರಂತೆ.
ಹೀಗೆ ಸಭೆಯಲ್ಲಿ ಚರ್ಚೆಯಾಗುತ್ತಿದ್ದಾಗ ರಕ್ಷ್ ತಾನು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನು ಧಾರಾವಾಹಿಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದರಂತೆ. ಇದನ್ನು ಕೇಳಿದ ಸಭೆಯಲ್ಲಿದ್ದವರು ನಕ್ಕು ಇದು ಆಗುವ ಕೆಲಸವಲ್ಲ ಬಿಡಿ ಎಂದು ಹೇಳಿಬಿಟ್ಟಿದ್ದರು ಎಂದು ನಟ ರಕ್ಷ್ ಎಂ ಜಿ ವರ್ಸ್ ಯುಟ್ಯೂಬ್ ಚಾನೆಲ್ನಲ್ಲಿ ನಡೆದ ಸಂದರ್ಶನದಲ್ಲಿ ಬಿಚ್ಚಿಟ್ಟರು. ತಮಾಷೆ ಮಾಡಬೇಡಿ ಸುಮ್ನಿರಿ ಸರ್, ನಿಮ್ಮ ಉತ್ಸಾಹ ನಮಗೆ ಅರ್ಥ ಆಗ್ತಿದೆ, ರವಿ ಸರ್ ಜೀವನದಲ್ಲಿ ಧಾರಾವಾಹಿ ಮಾಡಿಲ್ಲ, ಅವರು ಒಪ್ಪಿಕೊಳ್ಳುವುದಿಲ್ಲ ಎಂದು ಎಲ್ಲರೂ ಹೇಳಿದರು, ಆದರೆ ನಾನು ನಿಮಗ್ಯಾಕೆ ನಾನು ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದೆ ಎಂದು ರಕ್ಷ್ ಹೇಳಿಕೊಂಡರು.
ಹೀಗೆ ರಕ್ಷ್ ಕೊಟ್ಟ ಮಾತಿನಂತೆ ರವಿಚಂದ್ರನ್ ಅವರನ್ನು ಗಟ್ಟಿಮೇಳ ಧಾರಾವಾಹಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಈ ಕುರಿತು ಮಾತನಾಡದಿ ರಕ್ಷ್ ರವಿ ಸರ್ ಅವರನ್ನು ಕರೆತರುತ್ತೇನೆ ಎಂದು ಹೇಳಿದ ಬಳಿಕ ಅವರ ಮನೆಗೆ ಹೋಗಿ ಮಾತನಾಡಿದೆ, ಅವರು ಸಂತೋಷದಿಂದ ಒಪ್ಪಿಕೊಂಡರು, ಬಳಿಕ ನೀನು ನನ್ನ ಮಗನ ಥರ ಇದ್ದೀಯ ನೀನು ನನಗೆ ದುಡ್ಡೇ ಕೊಡಬೇಡ ಹೋಗೋ ಮಾಡ್ತೀನಿ ಎಂದ್ರು, ಆದರೆ ನಾನು ದುಡ್ಡನ್ನು ತೆಗೆದುಕೊಂಡೇ ನಟಿಸಬೇಕು ಎಂದು ಪಟ್ಟು ಹಿಡಿದು ಒಪ್ಪಿಸಿದೆ ಎಂದು ತಿಳಿಸಿದರು.
ಇನ್ನೂ ಮುಂದುವರಿದು ಮಾತನಾಡಿದ ರಕ್ಷ್ ಸಂಜೆ ಏಳು ಗಂಟೆಗೆ ಬಂದ ರವಿ ಸರ್ ಬೆಳಗ್ಗಿನ ಜಾವ ನಾಲ್ಕು ಗಂಟೆಯವರೆಗೆ ಶೂಟಿಂಗ್ನಲ್ಲಿ ಭಾಗವಹಿಸಿದ್ರು, ಸಿನಿಮಾಗಾಗಿಯೇ ಕೇವಲ ಐದು ಗಂಟೆ ಕೆಲಸ ಮಾಡುವ ಅವರು ಇಷ್ಟು ಹೊತ್ತು ಧಾರಾವಾಹಿ ಸೆಟ್ನಲ್ಲಿ ಕಳೆದಿದ್ದನ್ನು ಕಂಡು ಎಲ್ಲರೂ ಆಶ್ಚರ್ಯಕ್ಕೆ ಒಳಗಾಗಿದ್ದರು ಎಂದು ತಿಳಿಸಿದರು. ಕೊನೆಗೆ ನನ್ನ ಜೀವನದಲ್ಲೇ ಇಷ್ಟು ಹೊತ್ತು ಕೆಲಸ ಮಾಡಿರಲಿಲ್ಲ, ಇವತ್ತು ನಿನ್ನಿಂದ ಇಷ್ಟು ಹೊತ್ತು ಕೆಲಸ ಮಾಡಿದೆ, ನಿನಗೆ ಇದೆ ಕಣೋ ಎಂದು ಪ್ರೀತಿಯಿಂದ ಬೈದು ರವಿ ಸರ್ ಹೊರಟರು ಎಂದು ರಕ್ಷ್ ತಿಳಿಸಿ ರವಿಚಂದ್ರನ್ ಅವರು ಮಾಡಿದ ಸಹಾಯವನ್ನು ನೆನೆದರು.
https://play.google.com/store/apps/details?id=com.speed.newskannada