ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆದ ‘ವಾಲ್ಮಿಕಿ ಜಾತ್ರೆ’ ಈಗ ಚರ್ಚೆಯ ವಿಷಯವಾಗಿದೆ. ಸಮುದಾಯದ ಏಳಿಗೆ ಇನ್ನಿತರೆ ರಾಜಕೀಯ ಕಾರಣಗಳಿಗೆ ಅಲ್ಲದೆ ನಟ ಸುದೀಪ್ ಗೈರು ಹಾಜರಿ ಹಾಗೂ ಸುದೀಪ್ರ ಅಭಿಮಾನಿಗಳು ವಾಲ್ಮಿಕಿ ಜಾತ್ರೆಯಲ್ಲಿ ನಡೆದುಕೊಂಡ ರೀತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಜೋರಾದ ಚರ್ಚೆಗಳಾಗುತ್ತಿವೆ.ವಾಲ್ಮಿಕಿ ಜಾತ್ರೆಯ ಮೊದಲ ದಿನ ನಟ ಸುದೀಪ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎನ್ನಲಾಗಿತ್ತು. ಆಯೋಜಕರು ಸಹ ಇದನ್ನೇ ಹೇಳಿದ್ದರು. ಆಹ್ವಾನ ಪತ್ರಿಕೆ, ಫ್ಲೆಕ್ಸ್ಗಳಲ್ಲಿಯೂ ಸುದೀಪ್ ಹೆಸರಿತ್ತು. ವೇದಿಕೆಯಲ್ಲಿ ಸಹ ಹಲವು ಬಾರಿ ಸುದೀಪ್, ಸಂಜೆಯ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದಿದ್ದರು. ಆದರೆ ನಟ ಸುದೀಪ್ ಬರಲಿಲ್ಲ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ದಾಂಧಲೆ ಎಬ್ಬಿಸಿ ನೂರಕ್ಕೂ ಹೆಚ್ಚು ಕುರ್ಚಿಗಳನ್ನು ಒಡೆದು ಹಾಕಿದ್ದಾರೆ.ಆದರೆ ಘಟನೆ ಕುರಿತು ಖೇದ ವ್ಯಕ್ತಪಡಿಸಿರುವ ನಟ ಸುದೀಪ್, ತಮಗೆ ಆಹ್ವಾನವಿರಲಿಲ್ಲ, ಇದ್ದಿದ್ದರೆ ಖಂಡಿತ ಬರುತ್ತಿದ್ದೆ ಎಂದು ಟ್ವೀಟ್ ಮಾಡಿದ್ದಾರೆ ಇದು ಈಗ ವಿವಾದಕ್ಕೆ ಕಾರಣವಾಗಿದೆ. ಸುದೀಪ್ರ ಗೆಳೆಯ ಹಾಗೂ ಶಾಸಕ ರಾಜುಗೌಡ ಸಹ ಸುದೀಪ್, ವಾಲ್ಮಿಕಿ ಜಾತ್ರೆಗೆ ಬರದೇ ಹೋಗಿದ್ದರಲ್ಲಿ ಅವರದ್ದು ತಪ್ಪಿಲ್ಲ ಎಂದಿದ್ದಾರೆ. ಸುದೀಪ್ಗೆ ಆಹ್ವಾನವೇ ನೀಡಲ್ಲವಾದ್ದರಿಂದ ವಾಲ್ಮಿಕಿ ಶ್ರೀ ಹಾಗೂ ಆಯೋಜಕರ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಇದರ ಬೆನ್ನಲ್ಲೆ ಚಿತ್ರವೊಂದು ವೈರಲ್ ಆಗಿ ಗೊಂದಲ ಮೂಡಿಸಿದೆ.ವಾಲ್ಮೀಕಿ ಪೀಠಾಧಿಪತಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರು ನಟ ಸುದೀಪ್ ಅವರ ತಂದೆ ಸಂಜೀವ್ ಅವರಿಗೆ ಆಹ್ವಾನ ನೀಡಿರುವ ಚಿತ್ರ ಇದೀಗ ವೈರಲ್ ಆಗಿದೆ. ಸ್ವಾಮೀಜಿಯವರು ಸುದೀಪ್ ಭೇಟಿಗೆ ತೆರಳಿದ್ದಾಗ ಅವರಿಲ್ಲದೇ ಇದ್ದ ಕಾರಣ, ಅವರ ತಂದೆಗೆ ಆಹ್ವಾನ ನೀಡಲಾಗಿತ್ತು ಎನ್ನಲಾಗಿದ್ದು, ಹಾಗಿದ್ದ ಮೇಲೆ ಸುದೀಪ್, ತಮಗೆ ಆಹ್ವಾನ ನೀಡಿರಲಿಲ್ಲ ಎಂದು ಹೇಳಿರುವುದೇಕೆ? ಎಂಬ ಗೊಂದಲ ಮೂಡಿದೆ.ಸಚಿವ ಶ್ರೀರಾಮುಲು ಗೈರಿನ ಬಗ್ಗೆಯೂ ಚರ್ಚೆಗಳು ಕೇಳಿ ಬರುತ್ತಿವೆ. ವಾಲ್ಮಿಕಿ ಸಮುದಾಯದ ಹಾಲಿ ಮುಖಂಡರಲ್ಲಿ ಒಬ್ಬರಾದ ಶ್ರೀರಾಮುಲು ಸಹ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇತ್ತು ಆದರೆ ಅವರೂ ಸಹ ಭಾಗವಹಿಸಿಲ್ಲ. ಇದರ ಬಗ್ಗೆಯೂ ಕೆಲವರು ಆಕ್ಷೇಪ ಎತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada