ಬೆಂಗಳೂರು:ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ನಿದಾನಗತಿಯಲ್ಲಿ ಏರಿಕೆ ಮತ್ತು ನಾಲ್ಕನೆ ಅಲೆಯ ಭೀತಿಯ ನಡುವೆ ಮುಂದಿನ ಅಲೆಯ ನಿರ್ವಹಣೆ ಕುರಿತಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ದಿ ನ್ಯೂ ಸಂಡೆ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ್ದಾರೆ.
ಲಸಿಕೆಯ ಪ್ರಾಮುಖ್ಯತೆ ಕುರಿತಂತೆ ಒತ್ತಿ ಹೇಳಿರುವ ಸುಧಾಕರ್, ಜನರು ಮುನ್ನೆಚ್ಚರಿಕೆ ಡೋಸ್ ತೆಗೆದುಕೊಂಡು ಮಕ್ಕಳಿಗೆ ಉತ್ತಮ ರೀತಿಯಲ್ಲಿ ವ್ಯಾಕ್ಸಿನೇಷನ್ ಆದರೆ ಲಾಕ್ ಡೌನ್ ಅಗತ್ಯವಿರುವುದಿಲ್ಲ ಎಂದಿದ್ದಾರೆ.
ನಾಲ್ಕನೇ ಅಲೆಗೆ ರಾಜ್ಯ ಸಜ್ಜಾಗಿದೆಯೇ?
ಕೋವಿಡ್ ವಿರುದ್ಧ ಹೋರಾಡಲು ನಮ್ಮಲ್ಲಿರುವ ಏಕೈಕ ಅಸ್ತ್ರವೆಂದರೆ ವ್ಯಾಕ್ಸಿನೇಷನ್. ಏಪ್ರಿಲ್ 29 ರ ಹೊತ್ತಿಗೆ ರಾಜ್ಯದಲ್ಲಿ 10,61,57,160 ಡೋಸ್ ಲಸಿಕೆ ನೀಡಲಾಗಿದೆ. ಮತ್ತು 18 ವರ್ಷ ಮೇಲ್ಪಟ್ಟ ಬಹುತೇಕ ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಇತರ ವರ್ಗಗಳಿಗೆ ಅಂದರೆ 12-14 ಮತ್ತು 15-17 ರ ವ್ಯಾಕ್ಸಿನೇಷನ್ ಉತ್ತಮವಾಗಿ ನಡೆಯುತ್ತಿದೆ. ಆದರೆ ಮುನ್ನೆಚ್ಚರಿಕೆ ಲಸಿಕೆ ತೆಗೆದುಕೊಳ್ಳಲು ಜನರು ಮುಂದಾಗದಿರುವುದು ನಿರಾಸೆ ತಂದಿದೆ. ಮೂರನೇ ಅಲೆ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಸಾವು ನೋವು ಹಾಗೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿದ್ದರಿಂದ ಜನರು ನಿರಾಸೆ ತಾಳಿರಬಹುದು.
ಓಮಿಕ್ರಾನ್ ನ ಹೊಸ ಉಪ ತಳಿಯ ಪ್ರಸರಣ ಪರಿಗಣಿಸಿ, ನಾಲ್ಕನೆ ಅಲೆಯಲ್ಲಿಯೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ನಾವು ನೋಡಬಹುದೇ. ಮತ್ತೆ ಲಾಕ್ಡೌನ್ ಆಗುತ್ತದೆಯೇ?
ಪ್ರಸ್ತುತ ಪರಿಸ್ಥಿತಿಯಲ್ಲಿ ಲಾಕ್ಡೌನ್ ಸಮರ್ಥಿಸುವುದಿಲ್ಲ. ವೈರಸ್ನ ಹರಡುವಿಕೆ ನಿಗ್ರಹಿಸುವುದು ಲಾಕ್ ಡೌನ್ ಉದ್ದೇಶವಾಗಿತ್ತು. ಈ ಹಿಂದೆ ಕೂಡಾ ಲಾಕ್ ಡೌನ್ ಮೂಲಕ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆ ಮಾಡಲಾಗಿತ್ತು. ಮೂರನೇ ಅಲೆ ವೇಳೆ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೂ ಮರಣ ಪ್ರಮಾಣ ಹಾಗೂ ಆಸ್ಪತ್ರೆಗಳಿಗೆ ಸೇರುವವರ ಸಂಖ್ಯೆಯಲ್ಲಿ ಕಡಿಮೆಯಾಗಿತ್ತು. ದೇಶದಲ್ಲಿ ವ್ಯಾಪಕ ರೀತಿಯ ಲಸಿಕಾಕರಣದಿಂದ ಇದು ಸಾಧ್ಯವಾಗಿತ್ತು. ಇದೇ ರೀತಿಯಲ್ಲಿ ಲಸಿಕೆ ಪ್ರಮಾಣ ಮುಂದುವರೆದರೆ ಯಾವುದೇ ಲಾಕ್ ಡೌನ್ ಅಗತ್ಯವಿರಲ್ಲ.
ಈ ಅಲೆಯು ಜೂನ್ ನಂತರ ಉತ್ತುಂಗಕ್ಕೇರುವ ನಿರೀಕ್ಷೆಯಿದೆ ಮತ್ತು ಅಕ್ಟೋಬರ್ ವರೆಗೆ ಮುಂದುವರಿಯುತ್ತದೆ, ಇದು ಶಾಲೆಗಳಿಗೆ ನಿರ್ಣಾಯಕ ಸಮಯವಾಗಿದೆ. ಶಾಲೆಗಳು ಮತ್ತೆ ಆನ್ಲೈನ್ ಮೋಡ್ಗೆ ಬದಲಾಗುತ್ತವೆಯೇ?
ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ. ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೂಡ ಸ್ಪಷ್ಟಪಡಿಸಿದ್ದಾರೆ. ಒಟ್ಟು ಪಾಸಿಟಿವಿಟಿ ದರವು ಶೇ. 5ಕ್ಕೂ ಹೆಚ್ಚಾದ ಸಂದರ್ಭದಲ್ಲಿ ಮಾತ್ರ ಶಾಲೆಗಳನ್ನು ಮುಚ್ಚುವುದನ್ನು ಪರಿಗಣಿಸಲಾಗುವುದು
ಶಾಲೆಯಲ್ಲಿ ಮಕ್ಕಳಿಗೆ ಲಸಿಕೆ ಹಾಕಲು ನೀವು ಹೇಗೆ ಯೋಜನೆ ಮಾಡಿಕೊಂಡಿದ್ದೀರಿ? ಪೋಷಕರಿಗೆ ಮನವರಿಕೆ ಮಾಡುವುದು ಕಷ್ಟವಲ್ಲವೇ?
ರಾಜ್ಯಾದ್ಯಂತ 5 ರಿಂದ 11 ವರ್ಷದೊಳಗಿನ 5,000 ಮಕ್ಕಳು ಇನ್ನೂ ಲಸಿಕೆಗೆ ಅರ್ಹರಾಗಿಲ್ಲದ ಕಾರಣ ಅವರನ್ನು ಪರೀಕ್ಷಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದಾಗ್ಯೂ, ಈ ವರ್ಗಕ್ಕೆ ವ್ಯಾಕ್ಸಿನೇಷನ್ ಶೀಘ್ರದಲ್ಲೇ ಕಾರ್ಬೆವಾಕ್ಸ್ನೊಂದಿಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ವೈರಸ್ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಲಸಿಕೆಗಳು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ಪ್ರತಿಯೊಬ್ಬರೂ ಅರಿತುಕೊಂಡಿರುವುದರಿಂದ ಪೋಷಕರನ್ನು ಮನವೊಲಿಸುವುದು ಕಷ್ಟ ಎಂದು ನಾನು ಭಾವಿಸುವುದಿಲ್ಲ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ಹಾಕುವಂತೆ ನಾನು ಒತ್ತಾಯಿಸುತ್ತೇನೆ. ಈ ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವೆಂದು ಅಧ್ಯಯನಗಳು ಸಾಬೀತುಪಡಿಸಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: