ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯದ ‘ರೈಡರ್’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಸ್ವತ: ನಿಖಿಲ್ ಥಿಯೇಟರ್ಗಳಿಗೆ ಭೇಟಿ ನೀಡುತ್ತಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಕೂತು ಸಿನಿಮಾ ನೋಡುತ್ತಿದ್ದಾರೆ.
ಈ ವೇಳೆ ‘ರೈಡರ್’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿಖಿಲ್ ತಂದೆ ಎಚ್ ಡಿ ಕುಮಾರಸ್ವಾಮಿ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಇತ್ತೀಚೆಗೆ ಸಿನಿಮಾಗಿಂತ ಹೆಚ್ಚು ರಾಜಕೀಯದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಯುವಕರನ್ನು ಒಗ್ಗೂಡಿಸಿ ಪಕ್ಷ ಬಲಪಡಿಸುವ ಕೆಲಸದಲ್ಲಿ ನಿರತರಾಗಿದ್ದರು. ಈ ಮಧ್ಯೆ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವುದು ಕಡಿಮೆ ಮಾಡಿದ್ದರು. ‘ರೈಡರ್’ ವೀಕ್ಷಿಸಿದ ಬಳಿಕ ಮಾಜಿ ಮುಖ್ಯ ಮಂತ್ರಿ ಎಚ್ಡಿ ಕುಮಾರಸ್ವಾಮಿ ಮಗ ಸಿನಿಮಾದಲ್ಲೇ ಹೆಚ್ಚು ಸೇವೆ ಸಲ್ಲಿಸಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ನಟರ ಅವಶ್ಯಕತೆಯಿದೆ
ನಿನ್ನೆ(ಡಿಸೆಂಬರ್ 25) ‘ರೈಡರ್’ ಸಿನಿಮಾದ ವಿಶೇಷ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಈ ವೇಳೆ ಪುತ್ರ ನಿಖಿಲ್ ಅಭಿನಯದ ಸಿನಿಮಾ ನೋಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕನ್ನಡ ಚಿತ್ರರಂಗಕ್ಕೆ ನಟರು ಬೇಕು. ತಮ್ಮ ಪುತ್ರ ಆ ಅವಶ್ಯಕತೆಯನ್ನು ನೀಗಿಸಲಿ ಎಂದಿದ್ದಾರೆ. “ಕನ್ನಡ ಚಿತ್ರರಂಗಕ್ಕೆ ನಟರ ಅವಶ್ಯಕತೆಯಿದೆ. ಹೀಗಾಗಿ ರಾಜಕೀಯಕ್ಕಿಂತ ಸಿನಿಮಾಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿ. ನಟರ ಕೊರತೆಯನ್ನು ನಿಖಿಲ್ ಕುಮಾರ್ ನೀಗಿಸಲಿ ಎಂಬುದು ದೇವರ ಇಚ್ಛೆ ಎಂದು ಭಾವಿಸಿದ್ದೇನೆ.” ಎಂದು ‘ರೈಡರ್’ ಸಿನಿಮಾ ವೀಕ್ಷಿಸಿದ ಬಳಿಕ ತಿಳಿಸಿದ್ದಾರೆ.
ರಾಜಕೀಯಕ್ಕಿಂತ ಹೆಚ್ಚು ಸಿನಿಮಾ ಸೇವೆ ಮಾಡಲಿ
ನಿಖಿಲ್ ಕುಮಾರಸ್ವಾಮಿ ಕಳೆದ ಎರಡು ವರ್ಷಗಳಿಂದ ರಾಜಕಾರಣದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಕಡಿಮೆ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಹೀಗಾಗಿ ಕನ್ನಡದಲ್ಲಿಯೇ ಹೆಚ್ಚು ಸೇವೆ ಮಾಡಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. “ಮೂರನೇ ಚಿತ್ರದಲ್ಲಿಯೇ ನಟನಾಗುವ ಎಲ್ಲಾ ಅರ್ಹತೆಯಿದೆ ಎಂಬುದನ್ನು ನಿಖಿಲ್ ತೋರಿಸಿದ್ದಾರೆ. ರಾಜಕಾರಣದ ಹಿನ್ನೆಲೆಯಲ್ಲಿ ಮೊದಲು ಸಿನಿಮಾದ ಬಗ್ಗೆ ಗಮನ ನೀಡಿರಲಿಲ್ಲ. ಈ ಸಿನಿಮಾ ನೋಡಿದಾಗ, ಅವರು ರಾಜಕಾರಣಕ್ಕಿಂತ ಸಿನಿಮಾದಲ್ಲಿ ಇನ್ನೂ ಹೆಚ್ಚು ಸೇವೆ ಮಾಡಲಿ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತೇನೆ.” ಎಂದಿದ್ದಾರೆ.
ಪುನೀತ್ರಂದು ಉತ್ತಮ ನಟನಾಗಲಿ
ಇದೇ ವೇಳೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರಂತೆಯೇ ನಿಖಿಲ್ ಕೂಡ ಉತ್ತಮ ನಟನಾಗಬೇಕು ಎಂದು ಎಚ್ಡಿಕೆ ಬಯಸಿದ್ದಾರೆ. “ನಾನು ಅವನ ಜೊತೆಯಲ್ಲಿ ಮಾತಾಡೇಕು ಅಂತ ಇದ್ದೇನೆ. ರಾಜಕಾರಣಕ್ಕಿಂತ ಈ ಚಿತ್ರದಲ್ಲಿ ಮುಂದುವರೆಯುವ ಮುಖಾಂತರ, ನಮ್ಮ ನಾಡಿನಲ್ಲಿ ಪುನೀತ್ ಅಂತಹ ಅತ್ಯದ್ಭುತ ನಟ ನಮ್ಮ ಜೊತೆ ಇಲ್ಲ. ಆಕಸ್ಮಿತವಾದ ಸಾವನ್ನು ನಾವೇನು ಕಂಡಿದ್ದೇವೆ. ಇವತ್ತು ಅಂತಹ ಕಲಾವಿದನ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ನಿಖಿಲ್ ಕನ್ನಡ ಚಿತ್ರರಂಗಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಬೇಕು ಎಂದು ನಾನು ಬಯಸುತ್ತಿದ್ದೇನೆ. ” ಎಂದಿದ್ದಾರೆ ಎಚ್ಡಿ ಕುಮಾರಸ್ವಾಮಿ.
ಸಂಕ್ರಾಂತಿಗೆ ನಿಖಿಲ್ ಹೊಸ ಸಿನಿಮಾ
ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾವನ್ನು ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್ನಲ್ಲಿ ನಿರ್ಮಾಪಕ ಸುಪ್ರಿತ್ ನಿಖಿಲ್ ಕುಮಾರಸ್ವಾಮಿ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಸಂಕ್ರಾಂತಿ ಬಳಿಕ ಈ ಸಿನಿಮಾ ಸೆಟ್ಟೇರಲಿದ್ದು, ಜನವರಿ ಮೊದಲ ವಾರದಿಂದ ಸಿನಿಮಾದ ಬಗ್ಗೆ ಒಂದೊಂದೇ ಮಾಹಿತಿ ಹೊರಬೀಳಲಿದೆ. ಸದ್ಯ ‘ರೈಡರ್’ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಿಖಿಲ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: