ಶ್ರೀಲಂಕಾ ವಿರುದ್ಧ ಮೊದಲನೇ ಪಂದ್ಯ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಗುರುವಾರ ನಡೆಯುವ ಎರಡನೇ ಹಣಾಹಣಿಯನ್ನೂ ಗೆದ್ದು ಟಿ20 ಸರಣಿಯನ್ನು ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಉಭಯ ತಂಡಗಳ ನಡುವಣ ಎರಡನೇ ಟಿ20 ಪಂದ್ಯಕ್ಕೆ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ವೇದಿಕೆ ಸಿದ್ದವಾಗಿದೆ.ಮೊದಲನೇ ಟಿ20 ಪಂದ್ಯ ಮಂಗಳವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿತ್ತು. ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ ಭಾರತ ತಂಡ ಕೇವಲ ಎರಡು ರನ್ ರೋಚಕ ಗೆಲುವು ಸಾಧಿಸಿತ್ತು. ಆ ಮೂಲಕ ನಾಯಕನಾಗಿ ಹಾರ್ದಿಕ್ ಪಾಂಡ್ಯ ಸತತವಾಗಿ ಮೂರನೇ ಟಿ20 ಸರಣಿ ಗೆಲ್ಲುವ ಸನಿಹದಲ್ಲಿದ್ದಾರೆ.ಕೊನೆಯ ಓವರ್ನಲ್ಲಿ ಶ್ರೀಲಂಕಾ ತಂಡಕ್ಕೆ 13 ರನ್ ಅಗತ್ಯವಿತ್ತು. ಈ ವೇಳೆ ಬೌಲ್ ಮಾಡಿದ ಅಕ್ಷರ್ ಪಟೇಲ್ ಅವರು ಚಮಿಕಾ ಕರುಣಾರತ್ನೆ ಅವರ ಕೈಯಲ್ಲಿ ಸಿಕ್ಸರ್ ಹೊಡೆಸಿಕೊಂಡರೂ ಅಂತಿಮವಾಗಿ 10 ರನ್ ನೀಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಈ ಪಂದ್ಯದ ಗೆಲುವಿನ ಮೂಲಕ ಭಾರತ ತಂಡ 2023ರ ವರ್ಷದಲ್ಲಿ ಶುಭಾರಂಭ ಕಂಡಿತ್ತು.ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ಬಹುಬೇಗ ಕೀ ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಅಕ್ಷರ್ ಪಟೇಲ್ ಹಾಗೂ ದೀಪಕ್ ಹೂಡ ಜೋಡಿ ಅಜೇಯ 68 ರನ್ ಜೊತೆಯಾಟವನ್ನು ಆಡಿತ್ತು. ಕೇವಲ 23 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿದ್ದ ದೀಪಕ್ ಹೂಡ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ಮತ್ತೊಂದೆಡೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಶಿವಂ ಮಾವಿ ಅವರು 4 ಓವರ್ಗಳಿಗೆ 22 ರನ್ ನೀಡುವ ಮೂಲಕ ಪ್ರಮುಖ 4 ವಿಕೆಟ್ಗಳನ್ನು ಪಡೆದುಕೊಂಡಿದ್ದರು. ಆ ಮೂಲಕ ಭಾರತ ತಂಡದ ಪರ ಪದಾರ್ಪಣೆ ಪಂದ್ಯದಲ್ಲಿ 4 ವಿಕೆಟ್ ಕಿತ್ತ ಮೂರನೇ ಬೌಲರ್ ಎನಿಸಿಕೊಂಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada