2020ರ ಸಮಯದಲ್ಲಿ ಇಡೀ ದೇಶವೇ ಕೊರೋನಾ ಹಾವಳಿಯಿಂದ ತತ್ತರಿಸಿ ಹೋಗಿತ್ತು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕುಗ್ರಾಮದ ಹುಡುಗಿ ತನುಜಾ ಬೆಂಗಳೂರಿಗೆ ಬಂದು ನೀಟ್ ಪರೀಕ್ಷೆ ಬರೆದಿದ್ದು, ದೊಡ್ಡ ಸುದ್ದಿಯಾಗಿತ್ತು. ಅಂದಿನ ಮುಖ್ಯಮಂತ್ರಿ ಬಿ.
ಎಸ್ ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ. ಸುಧಾಕರ್ ಮತ್ತು ಸರ್ಕಾರ ತನುಜಾಳಿಗೆ ನೀಟ್ ಪರೀಕ್ಷೆ ಬರೆಯಲು ಅನುಕೂಲ ಮಾಡಿತ್ತು. ಸಾಕಷ್ಟು ಅಡೆತಡೆಗಳನ್ನು ಎದುರಿಸಿ, ಕೊನೆಗೂ ಅಂದುಕೊಂಡಂತೆ ತನುಜಾ ನೀಟ್ ಪರೀಕ್ಷೆ ಬರೆಯುವಲ್ಲಿ ಯಶಸ್ವಿಯಾಗಿದ್ದರು. ಇದೇ ನೈಜ ಘಟನೆಯನ್ನು ಆಧರಿಸಿ ತೆರೆಗೆ ಬಂದಿರುವ ಚಿತ್ರ “ತನುಜಾ’.
ಇಷ್ಟು ಹೇಳಿದ ಮೇಲೆ ಇದೊಂದು ಸ್ಫೂರ್ತಿದಾಯಕ ಸಿನಿಮಾ ಎಂದು ಹೊಸದಾಗಿ ಹೇಳಬೇಕಿಲ್ಲ. ಒಂದು ನೈಜ ಘಟನೆಯನ್ನು ತೆರೆಮೇಲೆ ತರುವಾಗ, ಒಂದಷ್ಟು ಅಂಶಗಳನ್ನು ಸೇರಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ನಿರ್ದೇಶಕರು ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ.
“ತನುಜಾ’ ನಮ್ಮ ನಾಡಿನ ಗ್ರಾಮೀಣ ಭಾಗದ ಹೆಣ್ಣುಮಗಳೊಬ್ಬಳ ಸಾಧನೆಯ ನೈಜ ಘಟನೆಯಾಧರಿತ ಚಿತ್ರ. ಒಬ್ಬ ವಿದ್ಯಾರ್ಥಿ ಮನಸ್ಸು ಮಾಡಿದರೆ ಯಾವುದೇ ಅಡೆ ತಡೆ ಬಂದರು ಮೆಟ್ಟಿ ನಿಂತು ಹೇಗೆಲ್ಲಾ ಸಾಧನೆ ಮಾಡಬಹುದು, ತಾಯಿಯ ಇಚ್ಛಾಶಕ್ತಿಯಿಂದ ಮಕ್ಕಳ ಭವಿಷ್ಯ ಹೇಗೆಲ್ಲಾ ರೂಪಿಸಬಹುದು? ಶಿಕ್ಷಕರು ನಿರ್ಧಾರ ಮಾಡಿದರೆ ವಿದ್ಯಾರ್ಥಿಗಳ ಗುರಿ ಮುಟ್ಟಲು ಹೇಗೆ ನೆರವಾಗಬಹುದು? ಒಂದು ಆಡಳಿತಾತ್ಮಕ ವ್ಯವಸ್ಥೆ ಸಾಮಾನ್ಯ ಜನರಿಗೆ ಸೂಕ್ತ ಸಮಯಕ್ಕೆ ಸ್ಪಂದಿಸಿದರೆ ಏನೆಲ್ಲಾ ಅಚ್ಚರಿ ನಡೆಯಬಹುದು? ಎನ್ನುವುದಕ್ಕೆ “ತನುಜಾ’ ಚಿತ್ರ ಒಂದು ಉತ್ತಮ ಉದಾಹರಣೆ.
ಚಿತ್ರದ ಮೊದಲರ್ಧದಲ್ಲಿ ನಿರ್ದೇಶಕರು ತನುಜಾಗಳ ಕನಸು, ಶಿಕ್ಷಣದ ಬಗೆಗಿನ ಆಕೆಯ ತುಡಿತ, ತಾಯಿಯ ಬೆಂಬಲ, ಹೇಗಾದರೂ ತನುಜಾ ಪರೀಕ್ಷೆ ಬರೆಯಲೇಬೇಕೆಂದು ಆಕೆಯ ಗುರು ಪಡುವ ಶ್ರಮ ಸೇರಿದಂತೆ ಇತರ ಅಂಶಗಳನ್ನು ಕಟ್ಟಕೊಡಲಾಗಿದೆ. ಚಿತ್ರದ ದ್ವಿತೀಯಾರ್ಧವನ್ನು ಮತ್ತಷ್ಟು ಕುತೂಹಲಕಾರಿಯಾಗಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿ ದ್ದಾರೆ. ಇಲ್ಲಿ ತನುಜಾ ಪರೀಕ್ಷೆ ಬರೆಯಲು ಶಿವಮೊಗ್ಗ-ಬೆಂಗಳೂರು ಪ್ರಯಾಣದ ಹಾದಿಯನ್ನು ಚಿತ್ರಿಸಲಾಗಿದೆ. ಇಲ್ಲಿನ ಅಂಶಗಳು ಕ್ಷಣ ಕ್ಷಣವೂ ಕುತೂಹಲ ಹೆಚ್ಚಿಸುತ್ತಾ ಸಾಗುತ್ತದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಬದಿಗಿಟ್ಟು ನೋಡಿದರೆ ತನುಜಾ ಒಂದು ಪ್ರಯತ್ನವಾಗಿ ಮೆಚ್ಚುವಂತಹ ಸಿನಿಮಾ. ಶಿಕ್ಷಣದ ತುಡಿತವಿರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತಹ ಚಿತ್ರವಿದು.
ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಪ್ತಾ ಪಾವೂರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ಸಂಧ್ಯಾ ಅರಕೆರೆ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಸುಧಾಕರ್, ಪತ್ರಕರ್ತ ವಿಶ್ವೇಶ್ವರ ಭಟ್ ನೈಜವಾಗಿ ಕಾಣಿಸಿಕೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada