ಕೋಲ್ಕತ್ತ: ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತಾವು ಕೇಳಿರುವ ಮಾಹಿತಿಯನ್ನು ಶೀಘ್ರ ಒದಗಿಸುವಂತೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಒತ್ತಾಯಿಸಿದ್ದಾರೆ.
ಟಿಎಂಸಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಧನಕರ್ ಅವರು ತಮ್ಮ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿಲ್ಲ ಎಂದು ಹೇಳಿದ್ದಾರೆ.
‘ಸಾಂವಿಧಾನಿಕ ಅಸ್ಥಿರತೆ’ ತಪ್ಪಿಸುವ ಸಲುವಾಗಿ ಹಲವು ವಿಷಯಗಳ ಬಗ್ಗೆ ಚರ್ಚಿಸಲು ವಾರದಲ್ಲಿ ರಾಜಭವನಕ್ಕೆ ಭೇಟಿ ನೀಡುವಂತೆ ಮಮತಾ ಬ್ಯಾನರ್ಜಿ ಅವರಿಗೆ ಫೆಬ್ರುವರಿ 15ರಂದು ಬರೆದ ಪತ್ರದಲ್ಲಿ ರಾಜ್ಯಪಾಲರು ಒತ್ತಾಯಿಸಿದ್ದರು.
ನ್ಯಾಯ ಸಮ್ಮತವಾಗಿ ಪಟ್ಟಿ ಮಾಡಿರುವ ಯಾವುದೇ ವಿಷಯಗಳಿಗೆ ಮಮತಾ ಅವರಿಂದ ಪ್ರತಿಕ್ರಿಯೆ ಬಂದಿಲ್ಲ ಎಂದಿರುವ ರಾಜ್ಯಪಾಲರು, ‘ಸಂವಿಧಾನದ 167ನೇ ವಿಧಿಯಡಿ ರಾಜ್ಯಪಾಲರಿಗೆ ಮಾಹಿತಿ ನೀಡುವುದು ಮುಖ್ಯಮಂತ್ರಿಗಳ ಸಾಂವಿಧಾನಿಕ ಕರ್ತವ್ಯವಾಗಿದೆ’ ಎಂದು ತಿಳಿಸಿದ್ದಾರೆ.
‘ವಾರದಲ್ಲಿ, ಯಾವುದೇ ಸಮಯದಲ್ಲಿ ರಾಜಭವನದಲ್ಲಿ ಸಂವಾದ ನಡೆಸಲು ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಒತ್ತಾಯಿಸಲಾಗಿದೆ. ಏಕೆಂದರೆ ಪಟ್ಟಿ ಮಾಡಿರುವ ವಿಷಯಗಳಿಗೆ ಪ್ರತಿಕ್ರಿಯೆ ನೀಡದೆ ಇದ್ದರೆ ಸಾಂವಿಧಾನಿಕ ಅಸ್ಥಿರತೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ’ ಎಂದಿದ್ದಾರೆ.
‘ಮುಖ್ಯಮಂತ್ರಿ ಮತ್ತು ರಾಜ್ಯಪಾಲರಂತಹ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗಳ ನಡುವೆ ಸಂವಾದ, ಚರ್ಚೆ ಮತ್ತು ಸಮಾಲೋಚನೆಯು ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯ. ಅಲ್ಲದೆ, ಸಾಂವಿಧಾನಿಕ ಆಡಳಿತದ ಅವಿಭಾಜ್ಯ ಭಾಗವೂ ಆಗಿದೆ. ಗೌರವಾನ್ವಿತ ಮಮತಾ ಬ್ಯಾನರ್ಜಿ ಅವರು ಸಾಂವಿಧಾನಿಕ ಆಡಳಿತದಿಂದ ಪ್ರಭಾವಿತರಾಗಿದ್ದಾರೆ’ ಎಂದು ಧನಕರ್ ಅವರು ಗುರುವಾರ ಸರಣಿ ಟ್ವೀಟ್ಗಳಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada