ಆಸ್ತಿ ತೆರಿಗೆ ಪರಿಷ್ಕರಣೆಯನ್ನು ನಿಲ್ಲಿಸಿ. ಪ್ರತೀ ವರ್ಷ ಜವಾಬ್ದಾರಿಯುತವಾಗಿ ಸರಿಯಾದ ಸಮಯಕ್ಕೆ ಆಸ್ತಿ ತೆರಿಗೆಯನ್ನು ಪಾವತಿಸುತ್ತಾ ಬಂದಿರುವ ತೆರಿಗೆದಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬಿಬಿಎಂಪಿ ಮಾಜಿ ಸದಸ್ಯರು ಆಗ್ರಹಿಸಿದ್ದಾರೆ.ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಮಾಜಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು,ಮಾಜಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಭೇಟಿ ನೀಡಿ ಮನವಿ ಸಲ್ಲಿಸಿದರು.ಬಿಬಿಎಂಪಿ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಬೆಸ್ಕಾಂ ಮಾಹಿತಿ ಆಧಾರದ ಮೇಲೆ ಆಸ್ತಿ ತೆರಿಗೆ ಮೊತ್ತವನ್ನು ಪರಿಷ್ಕರಿಸಿ,ನೋಟಿಸ್ ಜಾರಿ ಮಾಡುತ್ತಿರುವ ಪ್ರಕ್ರಿಯೆ ಕೂಡಲೇ ನಿಲ್ಲಿಸಿ ಎಂದು ಒತ್ತಾಯಿಸಿದರು.
ಅಲ್ಲದೆ, ಬಿಬಿಎಂಪಿ ವ್ಯಾಪ್ತಿಯಲ್ಲಿನ ಹಲವಾರು ಸ್ವತ್ತುಗಳಿಗೆ ತಮ್ಮ ಆದೇಶದಂತೆ ಬೆಸ್ಕಾಂ ಮಾಹಿತಿಯನ್ನು ಆಧರಿಸಿ, ಆಸ್ತಿ ತೆರಿಗೆಯನ್ನು ಪರಿಷ್ಕರಿಸಿ ವ್ಯತ್ಯಾಸದ ಮೊತ್ತವನ್ನು ಪಾವತಿಸಲು ನೋಟೀಸ್ ಜಾರಿ ಮಾಡಲಾಗುತ್ತಿದೆ.
ಈ ರೀತಿ ವ್ಯತ್ಯಾಸದ ಮೊತ್ತಕ್ಕೆ ದುಪ್ಪಟ್ಟು ದಂಡ ಮತ್ತು ಬಡ್ಡಿಯೊಂದಿಗೆ ಆಸ್ತಿ ತೆರಿಗೆಯನ್ನು ಪಾವತಿಸಲು ಸ್ವತ್ತಿನ ಮಾಲೀಕರಿಗೆ ನೋಟೀಸ್ ಜಾರಿ ಮಾಡಲಾಗುತ್ತಿದೆ. ಈ ಸ್ವತ್ತುಗಳ ಮಾಲೀಕರುಗಳು ಈಗಾಗಲೇ ಪಾಲಿಕೆಗೆ ಪ್ರತಿ ವರ್ಷ ಸರಿಯಾದ ಸಮಯಕ್ಕೆ ಆಸ್ತಿ ತೆರಿಗೆಯನ್ನು ಪಾವತಿಸಿದ್ದಾರೆ.ಹಲವು ಸ್ವತ್ತುಗಳ ಪೈಕಿ ಕೆಲವೊಂದು ಸ್ವತ್ತುಗಳಲ್ಲಿ ಸಣ್ಣಪುಟ್ಟ ವಸತಿಯೇತರ ಚಟುವಟಿಕೆಗಳಿದ್ದು, ಕೋವಿಡ್-೧೯ ಕಾರಣದಿಂದಾಗಿ ವಿಧಿಸಲಾಗಿದ್ದ ಲಾಕ್ಡೌನ್ನಿಂದಾಗಿ ವಸತಿಯೇತರ ಚಟುವಟಿಕೆಗಳಲ್ಲಿ ಸ್ವತ್ತಿನ ಮಾಲೀಕರುಗಳು ಸಾಕಷ್ಟು ನಷ್ಟವನ್ನು ಅನುಭವಿಸಿರುತ್ತಾರೆ. ಅಲ್ಲದೇ, ಆರ್ಥಿಕವಾಗಿ ಸಂಕಷ್ಟದಲ್ಲಿರುತ್ತಾರೆ.ಈ ರೀತಿ ಸಂಕಷ್ಟದಲ್ಲಿರುವ ಕೆಲವೊಂದು ಸ್ವತ್ತಿನ ಮಾಲೀಕರುಗಳು ತಮ್ಮ ಸ್ವತ್ತುಗಳನ್ನೇ ಮಾರಾಟ ಮಾಡುವ ಪರಿಸ್ಥಿತಿಯಲ್ಲಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ೧೦೦ ರಿಂದ ೨೦೦ ಚ.ಅಡಿ ವಸತಿಯೇತರ ಕಟ್ಟಡಕ್ಕೆ ಸುಮಾರು ೬ ವರ್ಷಗಳ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿದಾಗ, ದುಪ್ಪಟ್ಟು ದಂಡ ಮತ್ತು ಬಡ್ಡಿಯೊಂದಿಗೆ ಸ್ವತ್ತಿನ ಮಾಲೀಕರು ಸುಮಾರು ೧ ಲಕ್ಷದಷ್ಟು ಆಸ್ತಿ ತೆರಿಗೆಯನ್ನು ಪಾವತಿಸಬೇಕಾಗಿರುವುದು ಬೆಳಕಿಗೆ ಬಂದಿದೆ.ಪಾಲಿಕೆಯ ವ್ಯಾಪ್ತಿಯಲ್ಲಿ ಕೆಲವೊಂದು ಸ್ವತ್ತುಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿಲ್ಲ. ಇಂತಹ ಸ್ವತ್ತುಗಳಿಂದ ’ಆಸ್ತಿ ತೆರಿಗೆ ವಸೂಲಾತಿಯನ್ನು ಮಾಡದೇ, ಪ್ರತೀ ವರ್ಷ ಸರಿಯಾದ ಸಮಯಕ್ಕೆ ಅಸ್ತಿ ತೆರಿಗೆಯನ್ನು ಪಾವತಿಸುತ್ತಾ ಬಂದಿರುವ ತೆರಿಗೆದಾರರನ್ನೇ ಗುರಿ ಮಾಡಿ ಪರಿಷ್ಕೃತ ತೆರಿಗೆ ವಸೂಲಿ ಮಾಡುತ್ತಿರುವುದು ವಿಷಾದನೀಯ
ಹೀಗಾಗಿ, ಆಸ್ತಿ ತೆರಿಗೆ ಪರಿಷ್ಕರಣೆಯನ್ನು ನಿಲ್ಲಿಸಿ. ಪ್ರತೀ ವರ್ಷ ಜವಾಬ್ದಾರಿಯುತವಾಗಿ ಸರಿಯಾದ ಸಮಯಕ್ಕೆ ಆಸ್ತಿ ತೆರಿಗೆಯನ್ನು ಪಾವತಿಸುತ್ತಾ ಬಂದಿರುವ ತೆರಿಗೆದಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಅವರು ಮನವಿ ಮಾಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada