ಬೆಂಗಳೂರು,ಮಾ.18- ತಹಸೀಲ್ದಾರ್ ಒಬ್ಬರ ವರ್ಗಾವಣೆ ಕುರಿತಂತೆ ಆಡಳಿತಾರೂಢ ಬಿಜೆಪಿ ಪಕ್ಷದ ಇಬ್ಬರು ಪ್ರಭಾವಿ ಸಚಿವರ ನಡುವೆ ಭಾರೀ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ನಡೆದಿದೆ.ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ತಹಸೀಲ್ದಾರ್ ಶ್ರೀನಿವಾಸ್ ಅವರನ್ನು ವರ್ಗಾವಣೆಗೊಳಿಸಿ ಬೇರೊಬ್ಬರನ್ನು ನಿಯೋಜಿಸ ಬೇಕೆಂದು ರಾಮನಗರ ಜಿಲ್ಲಾ ಉಸ್ತುವಾರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ಅವರು ಆರ್.ಅಶೋಕ್ ಅವರಲ್ಲಿ ಮನವಿ ಮಾಡಿದ್ದರು.ಈ ಸಂಬಂಧ ಅಶೋಕ್ ಅವರಿಗೆ ಪತ್ರವನ್ನೂ ನೀಡಿ, ಕೆಲವು ಆರೋಪಗಳು ಇರುವ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರನ್ನು ತಕ್ಷಣವೇ ವರ್ಗಾವಣೆಗೊಳಿಸಬೇಕೆಂದು ಕೋರಿದ್ದರು. ಆದರೆ ಸಚಿವರ ಈ ಮನವಿಗೆ ಅಶೋಕ್ ಸ್ಪಂದಿಸಿರಲಿಲ್ಲ. ತಹಸೀಲ್ದಾರ್ ಒಬ್ಬರಿಗೆ ಪ್ರಭಾವಿ ಮಠಾೀಶರೊಬ್ಬರ ಶ್ರೀರಕ್ಷೆ ಹಾಗೂ ಪ್ರಮುಖ ನಾಯಕರೊಬ್ಬರ ಪ್ರಭಾವ ಇರುವುದರಿಂದ ಅವರನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸದ್ಯಕ್ಕೆ ಅವರನ್ನೇ ಮುಂದುವರೆಸುವುದಾಗಿ ಹೇಳಿದ್ದರು.ಆದರೆ ಪಟ್ಟು ಬಿಡದ ಅಶ್ವಥ್ ನಾರಾಯಣ, ತಹಸೀಲ್ದಾರ್ ಶ್ರೀನಿವಾಸ್ ಅವರನ್ನು ವರ್ಗಾವಣೆ ಮಾಡಬೇಕೆಂದು ಪದೇ ಪದೇ ಒತ್ತಡ ಹಾಕಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಕೆರಳಿದ ಅಶ್ವಥ್ ನಾರಾಯಣ ವಿಧಾನಸಭೆ ಕಲಾಪ ನಡೆಯುತ್ತಿದ್ದ ವೇಳೆ ಲಾಂಜ್ನಲ್ಲಿದ್ದ ಅಶೋಕ್ ವಿರುದ್ಧ ಏರಿದ ಧ್ವನಿಯಲ್ಲೇ ಮುಗಿಬಿದ್ದರು.ಒಬ್ಬ ಜಿಲ್ಲಾ ಉಸ್ತುವಾರಿ ಸಚಿವನಾದ ನಾನು ಹೇಳಿದರೆ ನೀವು ವರ್ಗಾವಣೆ ಮಾಡುವುದಿಲ್ಲ ಎಂದರೆ ಹೇಗೆ.? ನನಗೆ ಅಷ್ಟೂ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಅಶೋಕ್, ಇಲಾಖೆಯ ಸಚಿವನಾದ ನನಗೆ ಯಾರನ್ನು, ಎಲ್ಲಿಗೆ, ಯಾವಾಗ ವರ್ಗಾವಣೆ ಮಾಡ ಬೇಕೆಂಬುದು ಗೊತ್ತಿದೆ. ನಿಮ್ಮಿಂದ ನಾನು ಕಲಿಯಬೇಕಾದ ಅಗತ್ಯವಿಲ್ಲ. ಪಕ್ಷದಲ್ಲಿ ನಾನು ನಿಮಗಿಂತಲೂ ಹಿರಿಯ. ನನಗೆ ನಿಮ್ಮ ಉಪದೇಶ ಬೇಡ ಎಂದು ತಿರುಗೇಟು ನೀಡಿದ್ದಾರೆ.
ಈ ಹಂತದಲ್ಲಿ ಇಬ್ಬರು ಸಚಿವರ ನಡುವೆ ಏಕವಚನದಲ್ಲೇ ಪದ ಪ್ರಯೋಗವಾಗಿ ಪರಸ್ಪರ ತೋಳೇರಿಸಿಕೊಂಡೆ ಆರೋಪ- ಪ್ರತ್ಯಾರೋಪಗಳ ಸುರಿಮಳೆ ಗೈದಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣವೇ ಸ್ಥಳದಲ್ಲಿದ್ದ ಕೆಲವು ಸಚಿವರು ಮತ್ತು ಶಾಸಕರು ಇಬ್ಬರನ್ನು ಸಮಾಧಾನಪಡಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎಂದು ಸ್ಥಳದಲ್ಲೆ ಇದ್ದ ಹೆಸರು ಹೇಳಲು ಇಚ್ಛಿಸದ ಪ್ರಮುಖರೊಬ್ಬರು ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada