ಕರುನಾಡ ಮತಯುದ್ಧಕ್ಕೆ ವೇದಿಕೆ ಸಿದ್ಧಗೊಳ್ತಿದೆ. ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಶಸ್ತ್ರಾಭ್ಯಾಸ ನಡೆಸ್ತಿವೆ. ಗೆಲುವಿಗಾಗಿ ಯಾತ್ರೆಗಳ ಮೇಲೆ ಯಾತ್ರೆ ಮಾಡುತ್ತಾ ರಣತಂತ್ರ ರೂಪಿಸ್ತಿವೆ. ಈ ಮಧ್ಯೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮೂಲಕ ಚುನಾವಣೆಗೆ ಕಾರ್ಯತಂತ್ರ ಹೆಣೆದಿದೆ.
ಯುದ್ಧಕ್ಕೂ ಮುನ್ನವೇ ಅಭ್ಯರ್ಥಿಗಳನ್ನ ಅಖಾಡಕ್ಕೆ ಇಳಿಸಲು ಪ್ಲಾನ್ ಮಾಡಿದೆ.
ರಾಜ್ಯದಲ್ಲಿ ಚುನಾವಣಾ ಯುದ್ಧಕ್ಕೆ 3 ಪಕ್ಷಗಳು ಶಸ್ತ್ರಗಳನ್ನ ರೆಡಿಮಾಡುತ್ತಿವೆ. ಮತದಾರರ ಮನ ಗೆಲ್ಲಲು ಭರವಸೆಯ ಅಸ್ತ್ರಗಳ ಬಿಡುತ್ತಿವೆ. ಯಾತ್ರೆಗಳನ್ನ ಮಾಡುತ್ತಾ ಮತ ಕ್ರೂಢೀಕರಣಕ್ಕೆ ಇಳಿದಿವೆ. ಇತ್ತ ಜೆಡಿಎಸ್ ಈಗಾಗಲೇ ಅಭ್ಯರ್ಥಿಗಳನ್ನ ಕಣಕ್ಕಿಳಿಸಿ ಭರ್ಜರಿ ಮತಬೇಟೆ ಆಡುತ್ತಿದೆ. ಇದೀಗ ಕಾಂಗ್ರೆಸ್ ಕೂಡಾ ಚುನಾವಣೆ ಘೋಷಣೆಗೂ ಮುನ್ನ ಕದನ ಕಲಿಗಳನ್ನ ಕಣಕ್ಕಿಳಿಸಲು ತಂತ್ರ ರೂಪಿಸಿದೆ.
140 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಗೆ ‘ಕೈ’ ಕಸರತ್ತು
ಈ ಬಾರಿ ಶತಾಯಗತಾಯ ಅಧಿಕಾರಕ್ಕೆ ಬರಲೇ ಬೇಕು ಅಂತಾ ಕಾಂಗ್ರೆಸ್ ನಾಯಕರು ಪಣತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಗೆಲುವಿಗಾಗಿ ರಣತಂತ್ರ ಹೆಣೆದಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೀತು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಚುನಾವಣೆಗೂ ಮುನ್ನವೇ ಮೊದಲ ಹಂತದ ಅಭ್ಯರ್ಥಿಗಳನ್ನ ಫೈನಲ್ ಮಾಡಲು ಮುಂದಾಗಿದ್ದಾರೆ.
ಟಿಕೆಟ್ ಸಿಗದೆ ಇದ್ದಲ್ಲಿ ಬಂಡಾಯಕ್ಕೆ ಅವಕಾಶ ನೀಡಬಾರದು
ಮೊದಲ ಹಂತದಲ್ಲಿ 140 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ. ಮಾರ್ಚ್ನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದ್ದು, ಮಾರ್ಚ್ 10ರೊಳಗೆ ಮೊದಲ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಕನಿಷ್ಠ 140 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಬೇಕು ಅಂತಾ ರಾಜ್ಯ ‘ಕೈ ನಾಯಕರು ತಮ್ಮ ಹೈಕಮಾಂಡ್ಗೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಟಿಕೆಟ್ ಸಿಗದೆ ಇದ್ದಲ್ಲಿ ಬಂಡಾಯಕ್ಕೆ ಅವಕಾಶ ನೀಡದೇ, ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಇನ್ನೂ ಇದೇ ವೇಳೆ ಬಜೆಟ್ ವಿಚಾರವಾಗಿಯೂ ಪಕ್ಷದ ಶಾಸಕರಿಗೆ ಕೈ ನಾಯಕರು ಕೆಲವೊಂದು ಕಿವಿಮಾತು ಹೇಳಿದ್ದಾರೆ. ನಿನ್ನೆ ಸಿಎಂ ಬೊಮ್ಮಾಯಿ ಮಂಡಿಸಿರುವ ಬಜೆಟ್ನಲ್ಲಿ ಏನೂ ಇಲ್ಲ. ಇದೊಂದು ಚುನಾವಣಾ ಗಿಮಿಕ್ ಬಜೆಟ್ ಆಗಿದೆ. ಯಾವುದೇ ಕಾರ್ಯಕ್ರಮಗಳನ್ನ ರೂಪಿಸಿಲ್ಲ. ಇದನ್ನ ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ಸದನದೊಳಗೆ ಹಾಗೂ ಹೊರಗೆ ಬಜೆಟ್ ಬಗ್ಗೆ ಜನರಿಗೆ ವಾಸ್ತವಾಂಶ ತಿಳಿಸಬೇಕಿದೆ ಅಂತಾ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಸರ್ಕಾರವನ್ನ ಬಿಟ್ಟುಬಿಡದೇ ಕಾಡುವಂತೆ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಬಜೆಟ್ ಮಂಡಿಸಿ ಬೀಗುತ್ತಿರುವ ಬಿಜೆಪಿಯನ್ನ ಸದನದಲ್ಲಿ ಬಗ್ಗುಬಡಿಯಲು ಮುಂದಾಗಿದೆ. ಈ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರ್ಯೋನ್ಮುಖವಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada