ತ್ರಿವಿಕ್ರಮ ಅವರು ಕಥೆಗಾರರಾಗಿ, ಕಾದಂಬರಿಕಾರರಾಗಿ, ನಾಟಕಕಾರರಾಗಿ, ಸಂಗೀತ ಮತ್ತು ಸಂಸ್ಕೃತಿಗಳ ಬರಹಗಾರಾಗಿ ಮತ್ತು ಗಮಕಿಗಳಾಗಿ ಹೆಸರಾದವರು. ಇಂದು ಅವರ ಸಂಸ್ಮರಣಾ ದಿನ.
ತ್ರಿವಿಕ್ರಮ ಅವರು 1920ರ ಜುಲೈ 19ರಂದು ತುಮಕೂರಿನಲ್ಲಿ ಜನಿಸಿದರು. ತಂದೆ ಕೆ.ಎಸ್. ಕೃಷ್ಣಮೂರ್ತಿ. ತಾಯಿ ಜಯಲಕ್ಷ್ಮಮ್ಮ. ತ್ರಿವಿಕ್ರಮ ಅವರು ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಬೆಂಗಳೂರಿನಲ್ಲಿ ಓದಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದರು.
ತ್ರಿವಿಕ್ರಮ ಅವರು ಉದ್ಯೋಗಕ್ಕೆ ಸೇರಿದ್ದು ಕರ್ನಾಟಕ ಸರ್ಕಾರದ ಕಂಟ್ರೋಲರ್ ಕಚೇರಿಯಲ್ಲಿ. ನಂತರ ಕೇಂದ್ರ ಸರ್ಕಾರದ ಹುದ್ದೆಗೆ ವರ್ಗಾವಣೆಯಾಯಿತು. 1978ರಲ್ಲಿ ನಿವೃತ್ತರಾದರು.
ವಿದ್ಯಾರ್ಥಿಯಾಗಿದ್ದಾಗಲೇ ತ್ರಿವಿಕ್ರಮ ಅವರ ಕಥೆಗಳು ಸರಸ್ವತಿ, ಸುಬೋಧ, ರಂಗಭೂಮಿ, ಜಯಕರ್ನಾಟಕ, ವಿಶ್ವಬಂಧು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಭಾವಗೀತೆಗಳನ್ನು ರಚಿಸಿ ಸ್ವರ ಸಂಯೋಜಿಸಿ ಹಾಡಿಸುವುದು ಅವರಿಗಿದ್ದ ಪ್ರಿಯ ಹವ್ಯಾಸ. ಕರ್ನಾಟಕ ಸಂಗೀತ, ಲಲಿತಕಲೆಗಳ ಬಗ್ಗೆ ಅಪಾರ ಅರಿವಿದ್ದ ಅವರು, ಸಂಗೀತದಿಂದ ಪಡೆದ ಪ್ರೌಢಜ್ಞಾನದಿಂದ ಸಂಗೀತ ಕೃತಿಯನ್ನೂ ರಚನೆ ಮಾಡಿದರು. ತ್ರಿವಿಕ್ರಮ ಅವರು ಕಲೆ, ಸಾಹಿತ್ಯ, ಸಂಗೀತ, ನೃತ್ಯ ಈ ಎಲ್ಲಾ ಪ್ರಕಾರಗಳಲ್ಲೂ ಪತ್ರಿಕೆಗಳಿಗೆ ವಿಮರ್ಶೆ ಬರೆದರು. ‘ಉದಯವಾಣಿ’ ಪತ್ರಿಕೆಗೆ 10 ವರ್ಷ ಸಾಂಸ್ಕೃತಿಕ ವರದಿಗಾರರಾಗಿದ್ದರು. ಗಮಕವಾಚನದಲ್ಲಿ ಪರಿಣತಿಯಿದ್ದ ಅವರು ರಾಜ್ಯ ಸಂಸ್ಕೃತಿ ಮತ್ತು ಪ್ರಚಾರ ಇಲಾಖೆಯ ಮೂಲಕ ನಾಡಿನಾದ್ಯಂತ ಗಮಕವಾಚನ ಮಾಡಿದ್ದರು.
ತ್ರಿವಿಕ್ರಮ ಅವರು ಕಥೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಕವನ ಸಂಕಲನಗಳ ವೈವಿಧ್ಯಮಯ ಬರಹ ಮಾಡಿದರು. ಬೃಂದಾವನ, ಕಾಮನಬಿಲ್ಲು ಅವರ ಕಥಾಸಂಕಲನಗಳು. ಸ್ವಪ್ನಜೀವಿ, ಒಲಿದು ಬಂದ ಹೆಣ್ಣು, ವಂಶೋದ್ಧಾರಕ, ದೇವತಾಸ್ತ್ರೀ, ನಾಟ್ಯಕಸ್ತೂರಿ, ಬೆಳೆಯುವ ಪೈರು, ಇಬ್ಬರು ಸವತಿಯರು, ಮನೆ ಬೆಳಗಿತು, ಹೂವು-ದುಂಬಿ, ಮುಳ್ಳಿನ ಹಾಸಿಗೆ ಮೊದಲಾದವು ಅವರ ಸುಮಾರು 25 ಕಾದಂಬರಿಗಳಲ್ಲಿ ಸೇರಿವೆ. ರಸಗಂಗೆ, ಚೈತ್ರದ ಕೋಗಿಲೆ ಅವರ ಕಾವ್ಯ ಸಂಕಲನಗಳು. ಉಲ್ಲಾಳದ ರಾಣಿ ಅಬ್ಬಕ್ಕ, ಹಾರಾಡಲಿ ನಮ್ಮ ರಾಷ್ಟ್ರಧ್ವಜ, ಬೆಂಗಳೂರಿನ ರೋಮಾಂಚಕಾರಿ ಕಥೆ ಅವರು ರಚಿಸಿದ ರೇಡಿಯೋ ನಾಟಕಗಳು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: