ನಮ್ಮ ಆತ್ಮೀಯರೂ ಕನ್ನಡ ತಂತ್ರಜ್ಞಾನದಲ್ಲಿ ಮಹತ್ವದ ಕೊಡುಗೆದಾರರೂ ಆದ ಉದಯ ಶಂಕರ ಪುರಾಣಿಕರ ಜನ್ಮದಿನವಾಗಿದೆ. ಇವರು ಆತ್ಮೀಯ ವಲಯದಲ್ಲಿ ಉದಯ ಪುರಾಣಿಕ್ ಎಂದೇ ಪರಿಚಯಗೊಂಡಿರುವವರು.ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಮಹತ್ವದ ಕುಟುಂಬಗಳಲ್ಲಿ ಪುರಾಣಿಕ್ ಕುಟುಂಬ ಪ್ರಮುಖವಾದುದು. ಶ್ರೀ ಅನ್ನದಾನಯ್ಯ ಪುರಾಣಿಕ್ ಮತ್ತು ಡಾ. ಸಿದ್ಧಯ್ಯ ಪುರಾಣಿಕ್ ಅವರನ್ನು ಈ ಕನ್ನಡ ನಾಡಿನಲ್ಲಿ ಅರಿಯದವರೇ ಇಲ್ಲ. ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ನಾಡಿನ ಏಕೀಕರಣ ಚಳುವಳಿಯ ಪ್ರಮುಖ; ಬರಹಗಾರ, ಅನೇಕ ಸಂಘ ಸಂಸ್ಥೆಗಳನ್ನು ಬೆಳೆಸಿದ ಶ್ರೀ ಅನ್ನದಾನಯ್ಯ ಪುರಾಣಿಕರ ಪುತ್ರರಾದ, ನಮ್ಮೆಲ್ಲರ ಆತ್ಮೀಯರಾದ ಉದಯ ಶಂಕರ ಪುರಾಣಿಕರು ವೃತ್ತಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ತಂತ್ರಜ್ಞರಾಗಿದ್ದರೂ ಕನ್ನಡದ ಪ್ರೀತಿಯಿಂದ ಅವರು ಯಾವುದೇ ಸದ್ದುಗದ್ದಲವಿಲ್ಲದೆ ಅಪಾರ ಕೆಲಸ ಮಾಡುತ್ತಿರುವವರಾಗಿದ್ದಾರೆ. ಅಮೆರಿಕ, ಯೂರೋಪ್, ಆಸ್ಟ್ರೇಲಿಯಾ, ಜಪಾನುಗಳಲ್ಲಿ ಹಿಂದೆ ಕೆಲಸ ಮಾಡಿರುವ ಇವರು ಐ.ಬಿ.ಎಮ್ ಸಂಸ್ಥೆಯ ಹಿರಿಯ ಪ್ರೊಗ್ರಾಮಿಂಗ್ ವ್ಯವಸ್ಥಾಪಕರಾಗಿ, ಅನೇಕ ಸರ್ಕಾರಗಳಿಗೆ, ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಮತ್ತು ವ್ಯವಸ್ಥಿತ ಸಂಘಟನೆಗಳಿಗೆ ಸಲಹೆಗಾರರಾಗಿ ಅಮೂಲ್ಯ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ನಾವು ಕಂಪ್ಯೂಟರ್ ತಂತ್ರಜ್ಞಾನದ ಅಳವಡಿಕೆಯನ್ನು ಕಾಣುತ್ತಿರುವ ಸಹಕಾರಿ ಬ್ಯಾಂಕುಗಳು, ಬೆಂಗಳೂರು ದೂರದರ್ಶನ ಕೇಂದ್ರ, ಎ.ಟಿ.ಎಂ, ಇ-ವ್ಯಾಲೆಟ್, ಮೊಬೈಲ್ ಫೋನ್ಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಲು ಕೇಂದ್ರ ಸರ್ಕಾರ ಹೊರ ತಂದಿರುವ ಆದೇಶ, ಕಾಲ್ ಸೆಂಟರ್, ಇ-ಪುಸ್ತಕ ಮತ್ತು ಇ-ಪ್ರಕಟಣೆಗಳು ಮುಂತಾದವುಗಳಲ್ಲಿ ಉದಯ ಪುರಾಣಿಕರ ಮಹತ್ವದ ಪರಿಶ್ರಮವಿದೆ. ಇವರ ಒತ್ತಾಯದ ಮೇರೆಗೆ ಅಮೆಜಾನ್ ಅಂತಹ ಸಂಸ್ಥೆಗಳು ತನ್ನ ಭಾರತದ ಕಾಲ್ ಸೆಂಟರ್ಗಳಲ್ಲಿ ಕನ್ನಡ ಬಳಸಲು ಪ್ರಾರಂಭಿಸಿರುವುದು ಗಮನಾರ್ಹ ಸಂಗತಿಯಾಗಿದೆ.ಉದಯ ಪುರಾಣಿಕ್ ಅವರ ಜ್ಞಾನ ಕೇವಲ ತಂತ್ರಜ್ಞಾನಕ್ಕೆ ಸೀಮಿತವಾದುದಲ್ಲ. ವೇದ, ಉಪನಿಷತ್ತುಗಳು, ವಚನ ಸಾಹಿತ್ಯದಿಂದ, ನವ್ಯ ಮತ್ತು ಇಂದಿನ ಫೇಸ್ಬುಕ್ ಬರಹಗಳ ಬಗ್ಗೆ ಅವರು ವಿಸ್ತೃತವಾದ ಮುಕ್ತ ಮನೋಭಾವದ ಆಸಕ್ತಿಹೊಂದಿದವರಾಗಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: