ಚಿ. ಉದಯಶಂಕರ್ 1934ರ ಫೆಬ್ರವರಿ 18ರಂದು ಚಿಟ್ಟನಹಳ್ಳಿಯಲ್ಲಿ ಜನಿಸಿದರು.ಸೀನು ಸುಬ್ಬು ಸುಬ್ಬು …. ಬಲು ಅಪರೂಪ ನಮ್ ಜೋಡಿ ಹಾಡು ತಕ್ಷಣವೇ ನೆನಪಿಗೆ ಬಂತು. ಅವರು ಮತ್ತು ಶಿವರಾಂ ಈ ಹಾಡನ್ನು ಹೇಳಿ ನರ್ತಿಸಿಕೊಂಡು, ಜೊತೆಯಲ್ಲಿ ಅಂದಿದ್ದ ಹಲವಾರು ಹಾಸ್ಯ ನಟರು ಅವರ ಜೊತೆ ಇದ್ದು ಆ ಸನ್ನಿವೇಶ ಮುದ ನೀಡುವಂತದ್ದು. ಶಿವರಾಜ್ ಕುಮಾರ್ ಮತ್ತು ಸುಧಾರಾಣಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಆನಂದ್ ಚಿತ್ರದಲ್ಲಿ ಸುಧಾರಾಣಿ ಅವರ ಅಪ್ಪನಾಗಿ ಚಿ. ಉದಯಶಂಕರ್ ಅವರು ಹಾಸ್ಯಭರಿತವಾಗಿ ಹೇಳುತ್ತಿದ್ದ ಸಂಭಾಷಣೆ ಕೂಡಾ ನೆನಪಿಗೆ ಬರುತ್ತಿದೆ. ಮತ್ತೊಂದು ಚಿತ್ರ ‘ಜೀವನ ಚಕ್ರ’ದಲ್ಲಿ ವಿಶಿಷ್ಟ ರೀತಿಯ ಉದ್ಯಮಿಯಾಗಿ ಅವರು ವಿಷ್ಣುವರ್ಧನ್ ಅವರ ಬಾಸ್ ಆಗಿ ನಟಿಸಿರುವುದು ಕೂಡಾ ನೆನಪಿನಲ್ಲಿ ಉಳಿದಿದೆ. ‘ಹಾಲು ಜೇನು’ ಚಿತ್ರದಲ್ಲಿ ‘ಆನೆಯ ಮೇಲೆ ಅಂಬಾರಿ ಕಂಡೆ ….’ ಹಾಡಿನ ಕೊನೆಯಲ್ಲಿ ‘ಬಾಗಿಲ ಬಳಿಯಲ್ಲಿ ಆಫೀಸರ್ ಕಂಡೆ’ ಎಂದು ರಾಜ್ ‘ ಅವರು ಉದಯಶಂಕರ್ ಅವರನ್ನು ಕಾಣುವುದನ್ನು ನೋಡಿದ ನೆನಪು ಸಹಾ ಮರುಕಳಿಸುತ್ತಿದೆ.
ಒಬ್ಬ ಮಹಾನ್ ಹಾಡು ರಚನೆಗಾರನನ್ನು, ಚಿತ್ರ ಸಾಹಿತಿಯನ್ನು ಕೆಲವೊಂದು ಸಣ್ಣ ಪಾತ್ರಗಳ ಮೂಲಕ ಗುರುತಿಸುತ್ತಿದ್ದೇನೆ ಎಂದು ನಿಮಗನ್ನಿಸಿದ್ದರೆ ಆಶ್ಚರ್ಯವಿಲ್ಲ. ಈ ಚಿತ್ರರಂಗದಲ್ಲಿ ನಾವು ತೆರೆಯಮೇಲೆ ಮೂಡುವ ನಟ ನಟಿಯರನ್ನು ನೆನಪಿಸಿಕೊಳ್ಳುವಷ್ಟು ಅವುಗಳಲ್ಲಿ ಜೀವ ತುಂಬಿದ ಆತ್ಮೀಯ ಚೇತನಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಡಿಮೆಯೇ! ಚಿ. ಉದಯಶಂಕರ್ ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ಚಿತ್ರಗೀತೆಗಳನ್ನು ಬರೆದಿದ್ದರೋ, ಎಷ್ಟೊಂದು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರೋ ಅದರ ಲೆಕ್ಕ ಇಟ್ಟವರು ಯಾರು! ಉದಯಶಂಕರರು ಹರಿಸಿದ ಹಾಡಿನ ಮಳೆಗೆ ಲೆಕ್ಕ ಇಡಲು ಸಾಧ್ಯವೇ!
‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು’, ‘ನಾವಾಡುವ ನುಡಿಯೇ ಕನ್ನಡ ನುಡಿ’, ‘ಮಾಮರವೆಲ್ಲೋ ಕೋಗಿಲೆಯೆಲ್ಲೋ ಏನೀ ಸ್ನೇಹ ಸಂಬಂಧ’, ‘ನಾವಾಡುವ ನುಡಿಯೇ ಕನ್ನಡ ನುಡಿ’, ‘ಆಕಾಶವೆ ಬೀಳಲಿ ಮೇಲೆ ನಾನೆಂದು ನಿನ್ನವನು’, ‘ಶಾರದೆ ದಯೆ ತೋರಿದೆ’, ‘ಮುತ್ತಿನ ಹನಿಗಳು ಸುತ್ತಲೂ ಮುತ್ತಲೂ’, ‘ನಾದಮಯ ಈ ಲೋಕವೆಲ್ಲಾ’, ‘ಜೊತೆಯಲಿ ಜೊತೆ ಜೊತೆಯಲಿ’, ‘ಓ ಪ್ರಿಯತಮ, ಕರುಣೆಯಾ ತೋರೆಯಾ’, ‘ಸದಾ ಕಣ್ಣಲೇ ಪ್ರಣಯದಾ ಕವಿತೆಯಾ ಹಾಡುವೆ’, ‘ಬಂದೆಯ ಬಾಳಿನ ಬೆಳಕಾಗಿ’, ‘ಎಂದೆಂದೂ ನಿನ್ನನು ಮರೆತು’, ‘ಒಲಿದ ಜೀವ ಜೋತೆಯಲಿರಲು ಬಾಳು ಸುಂದರ’, ‘ಬಾನಲ್ಲು ನೀನೆ ಭುವಿಯಲ್ಲು ನೀನೆ’, ‘ರಘುಪತಿ ರಾಘವ ರಾಜಾರಾಂ ..(ಗಾಂಧೀ ನಗರ ಚಿತ್ರದ್ದು), ‘ಒಮ್ಮೆ ನಿನ್ನನ್ನು ಕಣ್ತುಂಬಾ’, ‘ಎಲ್ಲೆಲ್ಲು ಸಂಗೀತವೆ’, ‘ಆಹಾ ಮೈಸೂರು ಮಲ್ಲಿಗೆ’, ‘ಶಿಲೆಗಳು ಸಂಗೀತವಾ ಹಾಡಿವೆ’, ‘ಬಾನಿನ ಅಂಚಿಂದ ಬಂದೆ’, ‘ರಂಗ ಬಾರೋ ಮುದ್ದು ರಂಗ ಬಾರೋ’, ‘ಜಗದೀಶ ಸರ್ವೇಶ ಗೌರೀಶ ಮಲ್ಲೇಶ’ ಹೀಗೆ ಚಿ. ಉದಯಶಂಕರ್ ಅವರು ರಚಿಸಿದ ಹಾಡುಗಳನ್ನು ಬರೆಯುತ್ತಾ ಹೋಗಬಹುದು. ನನ್ನ ನೆನಪಿಗೆ ಶಕ್ತಿಗೆ ಕೊನೆ ಇದೆಯೇ ವಿನಃ ಉದಯಶಂಕರ್ ಅವರ ಚಿತ್ರಗೀತೆಗಳ ಸಂಖ್ಯೆಗಲ್ಲ.ಚಿ ಉದಯಶಂಕರ್ ಅವರು ತಮ್ಮ ಸರಳ ಸಜ್ಜನಿಕೆ ಹಾಗೂ ಚಿತ್ರರಂಗದವರಲ್ಲಿನ ಆತ್ಮೀಯ ಒಡನಾಟದಿಂದ ಹೆಸರಾದವರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: