ನವದೆಹಲಿ: ಅದಾನಿ ಗ್ರೂಪ್ನಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷ ಸದಸ್ಯರು ಭಾರಿ ಗದ್ದಲವೆಬ್ಬಿಸಿದ್ದರಿಂದ ಸಂಸತ್ತಿನ ಉಭಯ ಸದನಗಳನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ಬಜೆಟ್ ಅಧಿವೇಶನದ ಸಂಸತ್ ಕಲಾಪ ಪುನರಾರಂಭವಾಗುತ್ತಿದ್ದಂತೆ ಸದನದಲ್ಲಿ ಅದಾನಿ ಹಗರಣದ ವಿಷಯದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾವನೆ ಮಂಡಿಸಿದರು. ಅದಾನಿ ಸಮೂಹಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್ಗಳು ನೀಡಿರುವ ಸಾಲಗಳ ಬಗ್ಗೆ ಪರಿಶೀಲನೆ ನಡೆಯಲಿ ಎಂದು ಪ್ರತಿಪಕ್ಷಗಳ ಸದಸ್ಯರು ಆಗ್ರಹಿಸಿದರು.ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಅನುರಾಗ್ ಠಾಕೂರ್, ನಿರ್ಮಲಾ ಸೀತಾರಾಮನ್, ಪ್ರಲ್ಹಾದ್ ಜೋಶಿ, ಪಿಯೂಷ್ ಗೋಯಲ್, ನಿತಿನ್ ಗಡ್ಕರಿ ಮತ್ತು ಕಿರಣ್ ರಿಜಿಜು ಅವರೊಂದಿಗೆ ಸಭೆ ನಡೆಸಿ 2023 ರ ಬಜೆಟ್ ಅಧಿವೇಶನದ ಸಮಯದಲ್ಲಿ ಸಂಸತ್ತಿನಲ್ಲಿ ಸರ್ಕಾರದ ಕಾರ್ಯತಂತ್ರವನ್ನು ಚರ್ಚಿಸಿದರು. ಬುಧವಾರ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಸಾಂಪ್ರದಾಯಿಕ ರಾಷ್ಟ್ರಪತಿ ಭಾಷಣದ ನಂತರ ಸಚಿವೆ ಸೀತಾರಾಮನ್ ಅವರು ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2023 ನ್ನು ಮಂಡಿಸಿದ್ದರು.
ಅದಾನಿ ಗ್ರೂಪ್ ವಿವಾದ ಮತ್ತು ಗಡಿಯಲ್ಲಿ ಚೀನಾದ ಅಕ್ರಮಗಳ ಬಗ್ಗೆ ಚರ್ಚಿಸಲು ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಮುಂದೂಡಿಕೆ ನೋಟಿಸ್ ನೀಡಿದರು. ಲೋಕಸಭೆಯಲ್ಲಿ ಪಕ್ಷದ ಸಚೇತಕ ಟಾಗೋರ್, ಅದಾನಿ ಗುಂಪಿನ ಷೇರುಗಳ ಬೆಲೆಗಳು ಸತತವಾಗಿ ಕುಸಿಯುತ್ತಿರುವ ಕಾರಣದಿಂದ ಇದರ ಬಗ್ಗೆ ತುರ್ತಾಗಿ ಚರ್ಚಿಸುವ ಅಗತ್ಯವಿದೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada