ಬೆಂಗಳೂರು ಜು.4: ಸಾಂವಿಧಾನಿಕ ಹಕ್ಕುಗಳನ್ನು ಒದಗಿಸುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರಾಜ್ಯದ ಬೇಡ ಜಂಗಮರಿಗೆ ರಾಜ್ಯ ಸರ್ಕಾರ ನಾಲ್ಕು ವರ್ಷದ ಹಿಂದೆ ನೀಡಿದ್ದ ಆದೇಶವನ್ನೇ ಪುನಃ ನೀಡಿರುವುದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಐದು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದ ಬೇಡ ಜಂಗಮರು ರಾಜ್ಯ ಸರ್ಕಾರ ನೀಡಿದ ಭರವಸೆಯಂತೆ ನಡೆದು ಕೊಳ್ಳುತ್ತದೆ ಎಂದು ನಂಬಿದ್ದರು. ಭರವಸೆ ಹುಸಿಯಾದ ಹಿನ್ನೆಲೆ ಹೋರಾಟದ ಮುಂದಿನ ನಡೆ ಕುರಿತು ತೀರ್ಮಾನಿಸಲು ಸಭೆ ಕರೆದಿದ್ದಾರೆ.
ಸಾಂವಿಧಾನಿಕ ಜಾತಿ ಪ್ರಮಾಣ ಪತ್ರ ವಿತರಣೆ, ಜಾತಿ ಪ್ರಮಾಣ ಪತ್ರ ವಿತರಣೆ ವ್ಯವಸ್ಥೆ ಸರಳೀಕರಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿಗೆ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆ ಸೋಮವಾರವು ಮುಂದುವರಿದಿದೆ.
ಸಚಿವರ ನಿರ್ಲಕ್ಷ್ಯ
ಪ್ರತಿಭಟನೆಯ ಮೊದಲ ದಿನ (ಜೂನ್ 30ರಂದು) ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಸ್ಥಳಕ್ಕೆ ಆಗಮಿಸಿ ಮಾತನಾಡಿ, ಚೆಕ್ ಪೋಸ್ಟ್ ಗಳಲ್ಲಿ ಬೇಡ ಜಂಗಮರನ್ನು ತಡೆದಿದ್ದಕ್ಕೆ ಕ್ಷಮೆಯಾಚಿಸಿದ್ದರು. ಅಲ್ಲದೇ ಭರವಸೆ ಈಡೇರಿಸುವುದಾಗಿ ಹೇಳಿ ಸುಮ್ಮನಾಗಿದ್ದರು. ಸಚಿವರು ಈ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸದೇ ನಿರ್ಲಕ್ಷ್ಯ ವಹಿಸಿದ್ದರು.
ಎಚ್ಚರಿಕೆ ನಂತರವು ಎಡವಿದ ಸರ್ಕಾರ
ಹೀಗಾಗಿ ಬೇಡ ಜನಾಂಗದ ಮುಖಂಡರೆಲ್ಲರು ಉಗ್ರ ಹೋರಾಟದ ಮಾಡುವುದಾಗಿ ಎಚ್ಚರಿಸಿದರು. ಇದನ್ನು ತಡೆಗಟ್ಟುವ ಪ್ರಯತ್ನವೆಂಬಂತೆ ಭಾನುವಾರ ರಾಜ್ಯ ಸಮಾಜ ಕಲ್ಯಾಣ ಇಲಾಖೆ 2018ರಲ್ಲಿ ಹೊರಡಿಸಿದ್ದ ಸುತ್ತೋಲೆಯನ್ನು ಪುನಃ ಹೊರಡಿಸಿ ತಿಪ್ಪೆ ಸಾರಿಸುವ ಕೆಲಸ ಮಾಡಿದೆ.
2018ರ ಸುತ್ತೋಲೆಗೆ ಹಾಲಿ ಕಾರ್ಯದರ್ಶಿಗಳ ಹೆಸರು ಹಾಗೂ ದಿನಾಂಕ ಮಾತ್ರವೇ ಬದಲಿಸಿ ಹಳೆಯ ಆದೇಶವನ್ನೇ ಹೊರಡಿಸಲಾಗಿದೆ. ಇದರಲ್ಲಿ ಜುಲೈ 2ಎಂದು ತಿಂಗಳು, ದಿನಾಂಕ ನಮೂದಿಸಿದ್ದು, ಬಿಟ್ಟರೆ ಈ ವರ್ಷದ ಇಸವಿಯನ್ನು ಸಹ ಹಾಕದೇ ಸುತ್ತೋಲೆ ನೀಡಲಾಗಿದೆ. ಈ ಮೂಲಕ ಪ್ರತಿಭಟನಾಕಾರರಿಗೆ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡಲಾಗಿದೆ ಎಂದು ಸಮುದಾಯದ ಮುಖಂಡರು ದೂರಿದರು.
ಇಂದು ಸಂಜೆ 4ಕ್ಕೆ ಸಭೆ?
ಹಳೆಯ ಸುತ್ತೋಲೆ ಕೈಗೆ ಸಿಗುತ್ತಿದ್ದಂತೆ ಆಕ್ರೋಶ ಗೊಂಡ ಬೇಡ ಜಂಗಮ ಮಠಾಧೀಶರು, ಸುಮುದಾಯದ ಮುಖಂಡರು ಇಂದು ಸಂಜೆ 4 ಗಂಟೆಗೆ ಸಭೆ ಆಯೋಜಿಸಿದ್ದಾರೆ. ಸ್ಪಂದಿಸದ ಸರ್ಕಾರದ ವಿರುದ್ಧ ಉಗ್ರ ಹೋರಾಟ, ಅಮರಣಾಂತ ಉಪವಾಸ ಸತ್ಯಾಗ್ರಹ ಇಲ್ಲವೇ ವಿಧಾನಸೌಧ ಮುತ್ತಿಗೆ ಹಾಕುವ ಬಗ್ಗೆ ತೀರ್ಮಾನಿಸಲಿದ್ದೇವೆ. ಸರ್ಕಾರದ ಈ ಕಣ್ಣೊರೆಸುವ ನಡೆಗೆ ಸೂಕ್ತ ಉತ್ತರ ನೀಡಲಿದ್ದೇವೆ ಎಂದು ಒಕ್ಕೂಟ ಅಧ್ಯಕ್ಷ ಬಿ. ಡಿ. ಹಿರೇಮಠ ತಿಳಿಸಿದ್ದಾರೆ.
ಆರಂಭದಿಂದಲೂ ಅನ್ಯಾಯ
ಒಕ್ಕೂಟದ ನೇತೃತ್ವದಲ್ಲಿ ಜೂ.30ರಂದು ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಬರುತ್ತಿದ್ದ ರಾಜ್ಯ ಮೂಲೆ ಮೂಲೆಗಳ ಬೇಡ ಜನಾಂಗದವರನ್ನು ಸರ್ಕಾರ ಮೌಖಿಕ ಆದೇಶದ ಮೇರೆಗೆ ಪೊಲೀಸರು ರೆಸ್ತೆಯಲ್ಲೇ ಅಡ್ಡಗಟ್ಟಿದ್ದರು. ಆಗಲೇ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ನಿಗದಿತ ವೇಳೆಗೆ ಸಚಿವರು ನೀಡಿದ್ದ ಭರವಸೆ ಈಡೇರಿಕೆ ನಿರೀಕ್ಷೆ ಹುಸಿಯಾಯಿತು. ಇದೀಗ ಹಳೆಯ ಆದೇಶ ಹೊರಡಿಸಿ ಸಮುದಾಯ ಜನರಿಗೆ ಸರ್ಕಾರ ಅನ್ಯಾಯಸಗುತ್ತಿದೆ. ಇದಕ್ಕೆ ಸರ್ಕಾರ ಉತ್ತರ ತೆರಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ವಾಗ್ದಾಳಿ ನಡೆಸಿದ್ದಾರೆ.
ಸಂಜೆ ವೇಳೆಗೆ ಮುಖ್ಯಮಂತ್ರಿಗಳು ಇಲ್ಲವೇ ಸರ್ಕಾರದ ಪ್ರತಿನಿಧಿಗಳು ಸ್ವಾತಂತ್ರ್ಯ ಉದ್ಯಾನಕ್ಕೆ ಬರುವ ಸಾಧ್ಯತೆ ಇದೆ. ಬಾರದಿದ್ದರೆ ಉದ್ದೇಶದಂತೆ ಪ್ರತಿಭಟನೆ ತೀವ್ರಗೊಳಿಸಲು ಚಿಂತನೆ ನಡೆಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada