ದಾವಣಗೆರೆ, ಜನವರಿ 24: ಜಿಲ್ಲೆಯ ನಾಲ್ಕು ಗ್ರಾಮಗಳ ಜನರು ಮನೆಯಿಂದ ಹೊರಬರಲು ಹೆದರುತ್ತಾರೆ. ಎಲ್ಲಿ ಬಂದರೆ ಹುಳುಗಳ ಹಿಂಡು ದಾಳಿ ಮಾಡುತ್ತವೆ ಎನ್ನುವ ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
ನೂರಾರು ಹುಳುಗಳು ಒಂದೇ ಬಾರಿಗೆ ದಾಳಿ ಮಾಡಿದರೆ ಪ್ರಾಣ ಉಳಿಸಿಕೊಳ್ಳೋದೇ ಕಷ್ಟವಾಗಿದೆ.
ಯಾಕೆಂದರೆ ಚನ್ನಗಿರಿ ತಾಲೂಕಿನ ಬಸವಪಟ್ಟಣ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂಥದ್ದೊಂದು ಸಮಸ್ಯೆ ತಲೆದೋರಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಬಸವಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಾದ ಹರೋಸಾಗರ, ಎಲೋದಹಳ್ಳಿ, ಕಂಸಾಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಭೀತಿ ತಲೆದೋರಿದೆ. ಯುವಕರು, ಮಕ್ಕಳು, ಹಿರಿಯರು ಸೇರಿದಂತೆ ರೈತರು ತಮ್ಮ ಜಮೀನುಗಳಿಗೆ ಹೋಗಲು ಹೆದರುವಂಥ ಸ್ಥಿತಿ ನಿರ್ಮಾಣವಾಗಿದೆ.
ವಾಸ್ತವವಾಗಿ ಈ ಹುಳುಗಳು ಕಂಡು ಬರುವುದು ಅರಣ್ಯ ಪ್ರದೇಶದಲ್ಲಿ. ಕಾಡಿನಲ್ಲಿನ ಮರಗಳು ಕಣ್ಮರೆಯಾಗುತ್ತಿರುವಂತೆ ನಾಡಿನೊಳಗೆ ಹುಳುಗಳು ಬರಲಾರಂಭಿಸಿದ್ದು, ಇದು ಕೆಲ ಗ್ರಾಮಗಳ ಜನರ ತಲೆಬಿಸಿಗೆ ಕಾರಣವಾಗಿದೆ.
ಈ ಹುಳುವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಕಣಜ ಹುಳು, ಕಾಡು ಜೀರಿಗೆ, ಕಾಡು ಹುಳು ಅಂತಾಲೂ ಹೇಳಲಾಗುತ್ತದೆ. ರಾಜ್ಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ದೊಡ್ಡದಾದ ಗಿಡಗಳಿವೆ. ಈ ಗಿಡಗಳಲ್ಲಿ ಗೂಡು ಕಟ್ಟಿರುವ ಕಣಜ ಹುಳುಗಳು ಸಾವಿರಾರು ಸಂಖ್ಯೆಯಲ್ಲಿವೆ. ಈ ಮಾರ್ಗದಲ್ಲಿ ಶಾಲಾ ಕಾಲೇಜಿಗೆ ಹೋಗುವವರು, ಕೆಲಸಕ್ಕೆ ಹೋಗುವವರು, ರೈತರು ಜಮೀನುಗಳಿಗೆ ಬೈಕ್ನಲ್ಲಿ ತೆರಳುತ್ತಾರೆ. ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳಲ್ಲಿ ಹೋಗುವವರು ಸಹ ಎಲ್ಲಿ ಹುಳುಗಳು ಒಮ್ಮೆಲೆ ದಾಳಿ ಮಾಡುತ್ತವೆ ಎಂದು ಪ್ರಾಣವನ್ನು ಕೈಯಲ್ಲಿಡಿದುಕೊಂಡು ಓಡಾಡುವಂತಾಗಿದೆ.
ಹುಳುಗಳ ಕಾಟದಿಂದ ಮುಕ್ತಿಕೊಡಿಸುವಂತೆ ಗ್ರಾಮಸ್ಥರ ಮನವಿ
ಕಳೆದ ಕೆಲ ದಿನಗಳ ಹಿಂದೆ ಕೆಲವರ ಮೇಲೆ ದಾಳಿ ಮಾಡಿರುವ ಹುಳುಗಳು ಕಚ್ಚಿ ಗಾಯಗೊಳಿಸಿವೆ. ಈ ಹುಳುಗಳು ಕಚ್ಚುವುದರಿಂದ ರಕ್ತ ಹೆಪ್ಪುಗಟ್ಟುತ್ತದೆ. ತುರಿಕೆಯೂ ಉಂಟಾಗುತ್ತದೆ. ಕೆರೆದುಕೊಂಡರೆ ಗಾಯ ಮತ್ತಷ್ಟು ದೊಡ್ಡದಾಗುತ್ತದೆ.
ನಂಜು ಸಹ ತಗುಲುತ್ತದೆ. ಹಾಗಾಗಿ, ಈ ಹುಳುಗಳ ಕಾಟದಿಂದ ಮುಕ್ತಿಕೊಡಿಸುವಂತೆ ಗ್ರಾಮ ಪಂಚಾಯಿತಿಗೆ ಜನರು ಮನವಿ ಮಾಡಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.
ಹುಳುಗಳ ದಾಳಿ ಬಳಿಕ ಜ್ವರದಿಂದ ಬಳಲುವ ಜನ
ಹೆಚ್ಚಾಗಿ ಕಣಜ ಹುಳುಗಳ ವಾಸ ಸ್ಥಾನ ದೊಡ್ಡ ದೊಡ್ಡ ಅಡಿಕೆ ಮರಗಳು. ದೊಡ್ಡದಾದ ಮರಗಳು. ತಲೆ ಮೇಲೆ ಟವಲ್ ಹಾಕಿಕೊಂಡು ಹೋದರೂ ಜನರಲ್ಲಿ ಭೀತಿ ಮಾತ್ರ ದೂರವಾಗಿಲ್ಲ. ಯಾಕೆಂದರೆ ಯಾವಾಗ ಹೇಗೆ ಬೇಕಾದರೂ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಹುಳ ಕಡಿದಾಕ್ಷಣ ಮೈಉರಿ, ಮೈ ಉಬ್ಬುವುದು, ಜ್ವರ ಕೂಡ ಬರುತ್ತದೆ. ಸುಮಾರು 20ಕ್ಕೂ ಹೆಚ್ಚು ಹುಳುಗಳು ಒಮ್ಮೆಲೆ ಕಚ್ಚಿದರೆ ಸಾವನ್ನಪ್ಪುವ ಸಾಧ್ಯತೆಯೂ ಹೆಚ್ಚಿದೆ ಎಂದು ಸ್ಥಳೀಯರು ಹೇಳುತ್ತಾರೆ.
https://play.google.com/store/apps/details?id=com.speed.newskannada