ನಾಲ್ಕು ವರ್ಷಗಳ ಬಳಿಕ ನಿರೂಪಕಿ ಅನುಶ್ರೀ ಸ್ಯಾಂಡಲ್ವುಡ್ಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಪ್ರಭಾಕರನ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಅನುಶ್ರೀ ನಟಿಸುತ್ತಿದ್ದಾರೆ.
ಈ ಹಿಂದೆ ತೆರೆಕಂಡಿದ್ದ ‘ಮಮ್ಮಿ ಸೇವ್ ಮೀ’ ಹಾಗೂ ‘ದೇವಕಿ’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಲೋಹಿತ್ ಬಳಿ ಪ್ರಭಾಕರನ್ ಅಸೊಸಿಯೇಟ್ ಆಗಿದ್ದರು.
ಇದೀಗ ಹೊಸ ಚಿತ್ರದ ಮೂಲಕ ಪ್ರಭಾಕರನ್ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಡೈರೆಕ್ಟರ್ ಪ್ರಭಾಕರನ್ ಹಾಗೂ ಅನುಶ್ರೀ ಕಾಂಬಿನೇಶನ್ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ.
ಕೆಲ ದಿನಗಳ ಹಿಂದೆಯಷ್ಟೇ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿತ್ತು. ಶೀಘ್ರದಲ್ಲೇ ಸಿನಿಮಾದ ಶೂಟಿಂಗ್ ಕೂಡ ಆರಂಭವಾಗಲಿದೆ. ಜನವರಿ ಅಂತ್ಯದಲ್ಲಿ ಸಿನಿಮಾದ ಶೀರ್ಷಿಕೆ ಅನಾವರಣವಾಗುವ ಸಾಧ್ಯತೆ ಇದೆ.
ಇದು ಅನುಶ್ರೀಗೆ ವಿಶಿಷ್ಟ ಮತ್ತು ಸವಾಲಿನ ಪ್ರಾಜೆಕ್ಟ್ ಆಗಿದೆ. ಈ ಪ್ರಾಜೆಕ್ಟ್ ಬಗ್ಗೆ ಅವರು ತುಂಬಾ ಎಕ್ಸೈಟ್ ಆಗಿದ್ದಾರೆ. ಹಾರರ್, ಡ್ರಾಮಾ ಮತ್ತು ಥ್ರಿಲ್ಲಿಂಗ್ ಅಂಶಗಳು ಈ ಚಿತ್ರದಲ್ಲಿ ಇರಲಿವೆ. ಭಾರತೀಯ ಚಿತ್ರರಂಗದಲ್ಲೇ ಇದೊಂದು ಹೊಸ ರೀತಿಯ ಪ್ರಯತ್ನ” ಎಂದು ಚಿತ್ರತಂಡ ತಿಳಿಸಿದೆ.
ನಾಲ್ಕು ವರ್ಷಗಳ ನಂತರ ನಾನು ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದೇನೆ, ನಾನು ಚಿತ್ರರಂಗದಿಂದ ದೂರ ಉಳಿದಿರಲಿಲ್ಲ, ಆದರೆ ಆಸಕ್ತಿದಾಯಕ ಕಥೆಗಳು ಬಂದಿರಲಿಲ್ಲ ಎಂದು ಅನುಶ್ರೀ ಹೇಳಿದ್ದಾರೆ. ಲೋಹಿತ್ ಚೊಚ್ಚಲ ನಿರ್ದೇಶನದ ‘ಮಮ್ಮಿ ಸೇವ್ ಮಿ’ ಸಿನಿಮಾ ನೋಡಿದ್ದೇನೆ. ಚಿತ್ರದ ಮೇಕಿಂಗ್ ಮತ್ತು ಭಯಾನಕತೆಯನ್ನು ಅವರು ತೋರಿಸಿದ ರೀತಿ ನನಗೆ ತುಂಬಾ ಹಿಡಿಸಿತು, ಈ ಸಿನಿಮಾ ಕೂಡ ಅವರದ್ದೇ ಬ್ಯಾನರ್ ನಲ್ಲಿ ತಯಾರಾಗುತ್ತಿದ್ದು, ಅಷ್ಟೇ ಆಸಕ್ತಿದಾಯಕವಾಗಿದೆ ಎಂದು ತಿಳಿಸಿದ್ದಾರೆ.
ಸಿನಿಮಾದಲ್ಲಿ ಅನುಶ್ರೀ ವಿವಿಧ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಗೋವಾದ ವಿಂಟೇಜ್ ನಲ್ಲಿ ಸಂಪೂರ್ಣ ಶೂಟಿಂಗ್ ನಡೆಯಲಿದೆ, ಬಹು ದೊಡ್ಡ ಶೆಡ್ಯೂಲ್ ನಲ್ಲಿ ಶೂಟಿಂಗ್ ನಡೆಯಲಿದೆ. ಸುಮಾರು 1000 ಜಾಹೀರಾತುಗಳಲ್ಲಿ ಕೆಲಸ ಮಾಡಿರುವ ನಿರ್ಮಾಪಕ ಕ್ರಿಶ್ ಕೈಮಲ್ DOP ಆಗಿ ಪಾದಾರ್ಪಣೆ ಮಾಡಲಿದ್ದಾರೆ. ಚಿತ್ರ ತಂಡವು ಇನ್ನೂ ಸಂಗೀತ ನಿರ್ದೇಶಕರನ್ನು ಅಂತಿಮಗೊಳಿಸಿಲ್ಲ.
ಆಂಕರ್ ಆಗಿ ಖ್ಯಾತಿ ಪಡೆದ ಅನುಶ್ರೀ ಚಿತ್ರರಂಗಕ್ಕೂ ಕಾಲಿಟ್ಟರು. 2011ರಲ್ಲಿ ತೆರೆಕಂಡ ‘ಭೂಮಿ ತಾಯಿ’, 2012ರ ‘ಬೆಳ್ಳಿ ಕಿರಣ’, 2015ರಲ್ಲಿ ಬಿಡುಗಡೆಯಾದ ‘ಬೆಂಕಿಪಟ್ಣ’, ‘ರಿಂಗ್ ಮಾಸ್ಟರ್’, ‘ಉತ್ತಮ ವಿಲನ್’, ‘ಮಾದ ಮತ್ತು ಮಾನಸಿ’, ‘ಉಪ್ಪು ಹುಳಿ ಖಾರ’ ಸಿನಿಮಾಗಳಲ್ಲಿ ಅನುಶ್ರೀ ಅಭಿನಯಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada