ಸುಮಾರು ಐದು ವರ್ಷಗಳ ಹಿಂದೆ ರಾತ್ರಿ ಎಂಟು ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ್ದರು, ಅದು ಯಾವ ಕಾರಣಕ್ಕಾಗಿ ಎನ್ನುವುದು ಗೊತ್ತಿರುವ ವಿಚಾರ. ಅಲ್ಲಿಂದ, ಮುಂದೆ ರಾಷ್ಟ್ರವನ್ನು ಅವರು ಮಾತನಾಡುತ್ತಾರೆಂದರೆ, ಸಾರ್ವಜನಿಕರ ಗಮನ ವಿಶೇಷವಾಗಿ ಅದರ ಮೇಲೆ ನೆಟ್ಟುತ್ತಿತ್ತು.
ಮಾರ್ಚ್ 24, 2021ಕ್ಕೆ ಪ್ರಧಾನಿ ಮತ್ತೆ ಭಾಷಣವನ್ನು ಮಾಡಿ ಲಾಕ್ಡೌನ್ ಘೋಷಣೆ ಮಾಡಿದ್ದರು. ಇದಾದ ನಂತರ, ಅವರ ಪ್ರತೀ ಭಾಷಣಕ್ಕೆ ಜನರಿಂದ ಸಕಾರಾತ್ಮಕ/ನಕಾರಾತ್ಮಕವಾಗಿಯೋ ಉತ್ತಮ ಸ್ಪಂದನೆಯಂತೂ ಸಿಗುತ್ತಿತ್ತು.
ಆದರೆ, ಶನಿವಾರ (ಡಿ 25) ಮಾಡಿದ ಭಾಷಣದ ಬಗ್ಗೆ ಪೂರ್ವ ಮಾಹಿತಿ ಭಾರತೀಯರಿಗೆ ಇರಲಿಲ್ಲ. ಸಾಮಾನ್ಯವಾಗಿ, ಎರಡ್ಮೂರು ಗಂಟೆಯ ಮುನ್ನ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂದರೆ ಅದರ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುತ್ತಿತ್ತು.
ಶನಿವಾರದ ಅವರ ಭಾಷಣದಲ್ಲಿ ಕೊರೊನಾ ವೈರಸಿನ ಹೊಸ ರೂಪಾಂತರದಿಂದಾಗಿ ಮುಂದಿನ ದಿನಗಳು ಹೇಗೆ ಇರಲಿವೆ ಎನ್ನುವುದರ ಒಂದು ಪೂರ್ವಭಾವಿ ಝಲಕ್ ಕೊಟ್ಟಂತಿತ್ತು. ಅವರ ಭಾಷಣದ ಮರುದಿನವೇ ಕರ್ನಾಟಕ ಸರಕಾರದ ನಿರ್ಧಾರದಿಂದಾಗಿ ಅದಕ್ಕೆ ಇನ್ನಷ್ಟು ಸ್ಪಷ್ಟನೆ ಸಿಕ್ಕಿತು.
ಓಮಿಕ್ರಾನ್ ರೂಪಾಂತರ: ಪ್ರಪಂಚದ ಅನೇಕ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚು
ಮೋದಿ ಮಾಡಿದ ಭಾಷಣದಲ್ಲಿ ಅವರು ಉಲ್ಲೇಖಿಸಿದ್ದು, “ಓಮಿಕ್ರಾನ್ ರೂಪಾಂತರದಿಂದಾಗಿ ಪ್ರಪಂಚದ ಅನೇಕ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ, ಯಾರೂ ಭಯ ಪಡಬೇಡಿ, ಆದರೆ ಜಾಗರೂಕರಾಗಿರಿ ಮತ್ತು ನಿಯಮಿತವಾಗಿ ಮಾಸ್ಕ್ ಅನ್ನು ಬಳಸಿ ಮತ್ತು ಕೈಗಳನ್ನು ಸ್ವಚ್ಛಗೊಳಿಸಿ. 18 ಲಕ್ಷ ಪ್ರತ್ಯೇಕ ಹಾಸಿಗೆಗಳು, 5 ಲಕ್ಷ ಆಮ್ಲಜನಕ ಬೆಂಬಲಿತ ಹಾಸಿಗೆಗಳು, 1.40 ಲಕ್ಷ ಐಸಿಯು ಹಾಸಿಗೆಗಳು, 90,000 ಮಕ್ಕಳ ಐಸಿಯು ಮತ್ತು ಐಸಿಯು ಅಲ್ಲದ ಹಾಸಿಗೆಗಳನ್ನು ಹೊಂದಿದೆ. ನಮ್ಮಲ್ಲಿ 3,000ಕ್ಕೂ ಹೆಚ್ಚು ಪಿಎಸ್ಎ ಆಮ್ಲಜನಕ ಘಟಕಗಳಿವೆ, ರಾಷ್ಟ್ರದಾದ್ಯಂತ 4 ಲಕ್ಷ ಆಮ್ಲಜನಕ ಸಿಲಿಂಡರ್ಗಳನ್ನು ವಿತರಿಸಲಾಗಿದೆ”ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದರು.
ಕೇಂದ್ರ ಆರೋಗ್ಯ ಇಲಾಖೆ ನೀಡಬಹುದಾಗಿದ್ದ ಅಂಕಿಅಂಶ
ಯಾಕೆ, ಈ ಮಾಹಿತಿಯನ್ನು ಪ್ರಧಾನಿಯವರು ನೀಡುತ್ತಿದ್ದಾರೆ ಅದೂ ಕೇಂದ್ರ ಆರೋಗ್ಯ ಇಲಾಖೆ ನೀಡಬಹುದಾಗಿದ್ದ ಅಂಕಿಅಂಶವನ್ನು ಪ್ರಧಾನಿಯವರು ದೇಶವನ್ನು ಉದ್ದೇಶಿಸಿ ಯಾತಕ್ಕಾಗಿ ಹೇಳುತ್ತಿದ್ದಾರೆ ಎನ್ನುವ ಗೊಂದಲ ಕಾಡುತ್ತಿರುವಾಗಲೇ, ಕರ್ನಾಟಕ ಸರಕಾರದಿಂದ ನೈಟ್ ಕರ್ಫ್ಯೂ ಆದೇಶ ಹೊರಬಿದ್ದಿದೆ. ಡಿಸೆಂಬರ್ 28ರಿಂದ ಅನ್ವಯವಾಗುವಂತೆ ಹತ್ತು ದಿನಗಳ ಕಾಲ ರಾತ್ರಿ ಹತ್ತರಿಂದ, ಬೆಳಗ್ಗೆ ಐದರವರೆಗೆ ಕರ್ಫ್ಯೂ ಜಾರಿಯಾಗಿದೆ. ಅಲ್ಲಿಗೆ, ಹೊಸ ವರ್ಷಾಚರಣೆಯ ಮೋಜುಮಸ್ತಿಗೆ ಸರಕಾರ ಬ್ರೇಕ್ ಹಾಕಿದಂತಾಗಿದೆ.
ನೈಟ್ ಕರ್ಫ್ಯೂ ವಿಧಿಸಿದ ಕರ್ನಾಟಕ ಸರಕಾರ
ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಕರ್ನಾಟಕ ಸರಕಾರ ನೈಟ್ ಕರ್ಫ್ಯೂ ವಿಧಿಸಿದ್ದು ಇದು ಮುಂದಿನ ದಿನಗಳಲ್ಲಿ ಓಮ್ರಿಕಾನ್ ಕಾಟ ಹೆಚ್ಚಾಗಲಿದೆ ಎನ್ನುವ ಮುನ್ಸೂಚನೆ ಎಂದು ಹೇಳಲಾಗುತ್ತಿದೆ. ಫೆಬ್ರವರಿಯಲ್ಲಿ ಕೊರೊನಾ ಮೂರನೇ ಅಲೆಯ ಪ್ರಭಾವ ತೀವ್ರಗೊಳ್ಳಲಿದೆ ಎನ್ನುವ ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯ ನಡುವೆ, ಸಾರ್ವಜನಿಕರಿಗೆ ಮತ್ತೆ ಲಾಕ್ ಡೌನ್ ಗುಮ್ಮ ಆವರಿಸಿದೆ. ಫೆಬ್ರವರಿ – ಮಾರ್ಚ್ ನಲ್ಲಿ ಮೂರನೇ ಲಾಕ್ ಡೌನ್ ಹೇರಲಾಗುತ್ತದೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ.
ಮತ್ತೊಂದು ರಾಷ್ಟ್ರವ್ಯಾಪಿ ಲಾಕ್ ಡೌನ್ ಹೇರುವ ಕುರಿತ ಮುನ್ಸೂಚನೆ
ಪ್ರಧಾನಿ ಮೋದಿಯವರ ಭಾಷಣ ಮತ್ತೊಂದು ರಾಷ್ಟ್ರವ್ಯಾಪಿ ಲಾಕ್ ಡೌನ್ ಹೇರುವ ಕುರಿತು ಕೊಟ್ಟ ಪೂರ್ವವ್ಯಾಪಿ ಮುನ್ಸೂಚನೆಯ ಭಾಗ. ಕೊರೊನಾ ಭೀತಿ ಬೇಡ, ಆದರೆ ಜಾಗರೂಕತೆ ಅಗತ್ಯ ಎನ್ನುವ ಸಂದೇಶವನ್ನು ಮೋದಿಯವರು ತಮ್ಮ ಭಾಷಣದಲ್ಲಿ ಸಾರಿದ್ದರು. ಆಕ್ಸಿಜನ್, ಬೆಡ್ ಸಮಸ್ಯೆ ಮುಂತಾದವು ಎದುರಾಗುವುದಿಲ್ಲ ಎಂದು ಮೋದಿ ಹೇಳುವ ಮೂಲಕ, ಮೂರನೇ ಅಲೆಯ ತೀವ್ರತೆಯ ಬಗ್ಗೆ ಈಗಲೇ ಸಂದೇಶ ರವಾನಿಸಿದ್ದಾರೆ. ಒಟ್ಟಿನಲ್ಲಿ, ಮೋದಿಯವರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣ, ಮತ್ತೊಂದು ಲಾಕ್ ಡೌನ್ ಮುನ್ಸೂಚನೆಯಂತಿತ್ತು.