ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುನುಭವಿಸಿದೆ. ಜೋಹಾನ್ಸ್ ಬರ್ಗ್ ಪಂದ್ಯವನ್ನು ಗೆದ್ದ ಡೀನ್ ಎಲ್ಗರ್ ಪಡೆ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಕೇಪ್ ಟೌನ್ ನಲ್ಲಿ ನಡೆಯಲಿರುವ ಮೂರನೇ ಪಂದ್ಯ ನಿರ್ಣಾಯಕವಾಗಲಿದೆ.
ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ವಾಂಡರರ್ಸ್ ಪಂದ್ಯದಲ್ಲಿ ಕೆ.ಎಲ್.ರಾಹುಲ್ ತಂಡವನ್ನು ಮುನ್ನಡೆಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನಾಯಕನಾಗಿ ಮೊದಲ ಪಂದ್ಯದಲ್ಲೇ ರಾಹುಲ್ ನಿರಾಸೆ ಅನುಭವಿಸಿದರು.
ದ.ಆಫ್ರಿಕಾ ನಾಯಕ ಡೀನ್ ಎಲ್ಗರ್ ಅವರು ದ್ವಿತೀಯ ಇನ್ನಿಂಗ್ಸ್ ನಲ್ಲಿ ನಾಯಕನ ಆಟವಾಡಿ ತಂಡಕ್ಕೆ ಐತಿಹಾಸಿಕ ಗೆಲುವು ತಂದಿತ್ತರು. 240 ರನ್ ಗುರಿ ಬೆನ್ನತ್ತಿದ ಆಫ್ರಿಕಾ ತಂಡಕ್ಕೆ ಎಲ್ಗರ್ ಅಜೇಯ 96 ರನ್ ಕೊಡುಗೆ ನೀಡಿದರು.
ಮಾಜಿ ಆಟಗಾರ ಸುನೀಲ್ ಗಾವಸ್ಕರ್ ಈ ಪಂದ್ಯದ ಬಗ್ಗೆ ಮಾತನಾಡಿದ್ದು, ಕೆ.ಎಲ್.ರಾಹುಲ್ ರ ನಿರ್ಧಾರಗಳು ಡೀನ್ ಎಲ್ಗರ್ ಸುಲಭವಾಗಿ ರನ್ ಗಳಿಸಲು ಸಹಾಯವಾಯಿತು ಎಂದಿದ್ದಾರೆ.
“ಡೀನ್ ಎಲ್ಗರ್ ಸಿಂಗಲ್ ತೆಗೆಯಲು ಮತ್ತು ಸ್ಟ್ರೈಕ್ ರೊಟೇಟ್ ಮಾತ್ರ ಮಾಡುತ್ತಿದ್ದರು. ಆ ವೇಳೆ ರಾಹುಲ್ ಡೀಪ್ ನಲ್ಲಿ ಇಬ್ಬರು ಫೀಲ್ಡರ್ ಗಳನ್ನು ನಿಲ್ಲಿಸಿದ್ದರು. ಎಲ್ಗರ್ ಹುಕ್ ಮಾಡಿ ರನ್ ಗಳಿಸುವ ಆಟಗಾರನಲ್ಲ. ಡೀಪ್ ನಲ್ಲಿ ಇಬ್ಬರು
ಫೀಲ್ಡರ್ ಗಳನ್ನು ನಿಲ್ಲಿಸಿದ್ದು ಅರ್ಥವೇ ಆಗಲಿಲ್ಲ. ಇದರಿಂದ ಎಲ್ಗರ್ ಸುಲಭವಾಗಿ ಸಿಂಗಲ್ ಕದಿಯುತ್ತಿದ್ದರು” ಎಂದು ಗಾವಸ್ಕರ್ ವಿಶ್ಲೇಷಣೆ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: