ಮುಂಬೈ: ಭೀಕರ ನಿಸರ್ಗ ಚಂಡಮಾರುತ ಮಹಾರಾಷ್ಟ್ರ ಕರಾವಳಿಗೆ ಅಧಿಕೃತವಾಗಿ ಅಪ್ಪಳಿಸಿದ್ದು, ಮುಂದಿನ ಮೂರು ಗಂಟೆಗಳ ಕಾಲ ಕರಾವಳಿಯಾದ್ಯಂತ ತನ್ನ ಪ್ರಭಾವವನ್ನು ಬೀರಲಿದೆ.ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆ, ಮುಂದಿನ ಮೂರು ಗಂಟೆಗಳು ಅತ್ಯಂತ ಸೂಕ್ಷ್ಮವಾಗಿದ್ದು, ಯಾರೂ ಮನೆಯಿಂದ ಹೊರಬರದಂತೆ ಸೂಚನೆ ನೀಡಿದೆ. ಇತ್ತ NDRF ತಂಡ ಕೂಡ ರಕ್ಷಣಾ ಕಾರ್ಯಾಚರಣೆಗಳಿಗೆ ಸಜ್ಜಾಗಿದೆ. ನಿಸರ್ಗ ಚಂಡಮಾರುತದಿಂದ ಮುಂಬೈಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾರ್ಮೋಡದ ವಾತಾವರಣ ಕೂಡ ಇದೆ. ಈ ಮಧ್ಯೆ ಇಲ್ಲಿನ ಖಾರ್ ದಂಡಾ ಪ್ರದೇಶದಲ್ಲಿರುವ ಗಣೇಶನ ದೇವಸ್ಥಾನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, ಜನ ದೇವಸ್ಥಾನದ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದಾರೆ.ಖಾರ್ ದಂಡಾ ಪ್ರದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ದೇವಸ್ಥಾನ, ಇದೀಗ ಸಮುದ್ರ ನೀರಿನ ಪ್ರವಾಹದಿಂದಾಗಿ ಸಂಪೂರ್ಣವಾಗಿ ಮುಳುಗಿದೆ. ಮಹಾರಾಷ್ಟ್ರಿಗರಿಗೆ ಗಣೇಶನ ಮೇಲೆ ಅಪಾರ ಭಕ್ತಿ. ಗಣೇಶನ ಹಬ್ಬದ ಸಂದರ್ಭದಲ್ಲಿ ರಾಜಧಾನಿ ಮುಂಬೈ ಸೇರಿದಂತೆ ಇಡೀ ಮಹಾರಾಷ್ಟ್ರ ಅತ್ಯಂತ ವಿಜೃಂಭಣೆಯಿಂದ ವಿಘ್ನ ನಿವಾರಕನನ್ನು ಪೂಜಿಸುತ್ತದೆ.