ನಮ್ಮ ‘ವಿಶಿ’ಯನ್ನು ನೆನೆದರೆ ಹೆಮ್ಮೆಯಾಗುತ್ತದೆ. ಫೆಬ್ರುವರಿ 12 ನಮ್ಮ ಹೆಮ್ಮೆಯ ವಿಶಿ, ಗುಂಡಪ್ಪ ವಿಶ್ವನಾಥರ ಹುಟ್ಟುಹಬ್ಬ.ವಿಶಿ ಸಾರ್, “ನೀವು ಕ್ರಿಕೆಟ್ ಎಂದರೆ ನಮ್ಮಲ್ಲಿ ಪ್ರೀತಿಯ ಜೊತೆಗೆ ಗೌರವ ಕೂಡಾ ಹುಟ್ಟುವಂತೆ ಮಾಡಿದ ಮೊದಲಿಗರು”. ನಾವು ಏನು ಆಟ ಆಡ್ತೀವಿ ಅಂದ್ರೂ ನೀವು ಆಡಿ ಆಡಿ ಹಾಳಾಗಿ ಹೋಗ್ತೀರೋ ಅಂತ ಬುಸುಗುಡುತ್ತಿದ್ದ ಅಪ್ಪ ಅಮ್ಮಂದಿರು ನಾವು ಕ್ರಿಕೆಟ್ ಅಂದರೆ ಅಷ್ಟೊಂದು ಕೋಪಗೊಳ್ಳದೆ ಇದ್ದುದಕ್ಕೆ ಕಾರಣ ಅವರಿಗೂ ಕ್ರಿಕೆಟ್ ಮೇಲೆ ಇದ್ದ ಪ್ರೀತಿಯೋ, ಅಪ್ಪಿ ತಪ್ಪಿ ಲಾಟರಿ ಹೊಡೆದ ಹಾಗೆ ತಮ್ಮ ಮಕ್ಕಳೂ ಕ್ರಿಕೆಟ್ಟಿಗರಾದರೆ ಎಂಬ ಆಸೆಯಿಂದಲೋ ಅಥವಾ ವಿಶಿ, ದ್ರಾವಿಡ್ ಅಂತಹ ಸಜ್ಜನರು ಕ್ರಿಕೆಟ್ಟಿನಲ್ಲಿ ಇದ್ದಾರೆ ಎಂಬುದರಿಂದಲೋ ಎಂದು ಆಗಾಗ ನನ್ನಲ್ಲಿ ಪ್ರಶ್ನೆ ಬಂದು ಹೋಗಿದೆ.ಗುಂಡಪ್ಪ ರಂಗನಾಥ ವಿಶ್ವನಾಥರು ಹುಟ್ಟಿದ್ದು ಫೆಬ್ರವರಿ 12, 1949ರಂದು ಭದ್ರಾವತಿಯಲ್ಲಿ. ಒಬ್ಬ ಬಡ ಮೇಷ್ಟರ ಮಗನಾಗಿ ಹುಟ್ಟಿದ ಈ ಹುಡುಗ ಕ್ರಿಕೆಟ್ಟಿನಂತಹ ಪೈಪೋಟಿಯ ಆಟದಲ್ಲಿ ಮುಂದೆ ಬಂದ ಎಂದರೆ, ಅಂದಿನ ದಿನಗಳಲ್ಲಿ ಕ್ರಿಕೆಟ್ ಆಟದಲ್ಲೂ ಇದ್ದ ಒಂದಷ್ಟು ನೈತಿಕತೆಯ ಬಗ್ಗೆ ಉಂಟಾಗುವ ಮೆಚ್ಚುಗೆಯ ಜೊತೆಗೆ ಈತನ ಆಟದಲ್ಲಿದ್ದ ಮೋಡಿ ಸಹಾ ಅದೆಷ್ಟು ಪ್ರಬಲವಾಗಿದ್ದಿರಬಹುದೆಂಬುದರ ಅಚ್ಚರಿ ಸಹಾ ಜೊತೆ ಜೊತೆಗೇ ಮೂಡುತ್ತದೆ.1969ರಲ್ಲಿ ನಾನು ಪುಟ್ಟವನಿದ್ದಾಗ ಇಡೀ ನನ್ನ ಸುತ್ತಲಿನ ಲೋಕವೇ ಆಸ್ಟ್ರೇಲಿಯಾದಂತಹ ಪ್ರಬಲ ತಂಡದ ಮುಂದೆ ನಮ್ಮ ಪುಟ್ಟ ಪೋರ ವಿಶ್ವನಾಥ ಕಾನ್ಪುರದಲ್ಲಿ ತನ್ನ ಮೊದಲನೇ ಟೆಸ್ಟಿನಲ್ಲೇ ಸೆಂಚುರಿ ಬಾರಿಸಿ, ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಗೆಲ್ಲುವುದನ್ನು ತಪ್ಪಿಸಿದ ಎಂದು ಕುಣಿದಾಡಿ ಹಬ್ಬ ಆಚರಿಸಿದ್ದು ಕಣ್ಣಿಗೆ ಕಟ್ಟಿದಂತಿದೆ. ಮುಂದೆ 1974-75ರಲ್ಲಿ ವೆಸ್ಟ್ ಇಂಡೀಜ್ ಭಾರತಕ್ಕೆ ಬಂದಾಗ ವಿಶ್ವನಾಥ್ ಆ ಸರಣಿಯ ಪೂರ್ತಿಯಾಗಿ ಏಕೈಕಿ ಎಂಬಂತೆ ಬ್ಯಾಟುಗಾರನಾಗಿ ನಿಂತು ಆಡಿದ ಆಟ ನಮ್ಮ ಜೀವಮಾನದಲ್ಲೇ ಚಿರಸ್ಮರಣೀಯ. ವಿಶಿ ಅವರು ಮದರಾಸಿನಲ್ಲಿ ಗಳಿಸಿದ ಅಜೇಯ 97ರನ್ನುಗಳು ಭಾರತದ ಒಟ್ಟು ಇನ್ನಿಂಗ್ಸ್ ಮೊತ್ತವಾದ 190ರನ್ನುಗಳಲ್ಲಿ ಸಿಂಹಪಾಲಾಗಿದ್ದು ಅದು ಭಾರತದ ವಿಜಯದ ಕಥೆ ಕೂಡಾ ಆಯಿತು. ವಿಸ್ಡೆನ್ ದಾಖಲಿಸಿರುವ ನೂರು ಪ್ರಮುಖ ಬ್ಯಾಟಿಂಗ್ ಪ್ರದರ್ಶನಗಳಲ್ಲಿ ಇದು 38ನೆಯ ಸ್ಥಾನ ಪಡೆದಿದ್ದು, ಸೆಂಚುರಿಯಲ್ಲದ ಬ್ಯಾಟಿಂಗ್ ಪ್ರದರ್ಶನದ ದೃಷ್ಟಿಯಲ್ಲಿ ಎರಡನೇ ಶ್ರೇಷ್ಠ ಆಟವೆನಿಸಿದೆ. ಅದೇ ಸರಣಿಯ ಅದರ ಹಿಂದಿನ ಟೆಸ್ಟಿನಲ್ಲಿ ಕೂಡಾ ಕಲ್ಕತ್ತೆಯಲ್ಲಿ ಶತಕ ಬಾರಿಸಿ ಭಾರತಕ್ಕೆ ವಿಜಯ ತಂದುಕೊಟ್ಟಿದ್ದರು ನಮ್ಮ ವಿಶಿ. ಕೊನೆಯ ಟೆಸ್ಟಿನಲ್ಲಿ ವಿಶಿ 95 ರನ್ನು ಗಳಿಸಿದರೂ ವೆಸ್ಟ್ ಇಂಡೀಜ್ 3-2ರಲ್ಲಿ ಭಾರತವನ್ನು ಸೋಲಿಸಿತು. ಹಾಗಿದ್ದಾಗ್ಯೂ ವಿಶಿ ಅವರ ಬ್ಯಾಟಿಂಗ್, ಚಂದ್ರು, ಪ್ರಸನ್ನರ ಶ್ರೇಷ್ಠ ಬೌಲಿಂಗ್, ಏಕನಾಥ ಸೋಲ್ಕರ್ ಅವರ ಕ್ಯಾಚಿಂಗ್, ಪಟೌಡಿ ಅವರ ಶ್ರೇಷ್ಠ ನಾಯಕತ್ವ ಮತ್ತು ವೆಸ್ಟ್ ಇಂಡೀಜ್ ತಂಡದಲ್ಲಿ ಅಂದಿದ್ದ ಶ್ರೇಷ್ಠ ಆಟಗಾರರಾದ ಲಾಯ್ಡ್, ಯಾಂಡಿ ರಾಬರ್ಟ್ಸ್, ವಿವಿಯನ್ ರಿಚರ್ಡ್ಸ್ ಮುಂತಾದ ಅತಿರಥ ಮಹಾರಥರ ತಂಡದ ದೃಷ್ಟಿಯಿಂದ ಅದೊಂದು ಮನಮೋಹಕ ಸರಣಿಯಾಗಿ ನಮ್ಮ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ನಿಂತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada