ನವದೆಹಲಿ: ಉಷ್ಣಾಂಶ ಹೆಚ್ಚಳವು ಗೋಧಿ ಬೆಳೆಯ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಅಲ್ಪಾವಧಿಯ ಬೆಳೆಗೆ ಹಾನಿಯಾಗುವುದಿಲ್ಲ ಎಂದು ಭಾರತೀಯ ಆಹಾರ ನಿಗಮದ (ಎಫ್ಸಿಐ) ಅಧ್ಯಕ್ಷ ಅಶೋಕ್ ಕೆ. ಮೀನಾ ಗುರುವಾರ ಹೇಳಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯು ಅಂದಾಜು ಮಾಡಿರು
ವಂತೆ ಉಷ್ಣಾಂಶ ಏರಿಕೆಯಾಗುವುದರಿಂದ ಗೋಧಿ ಬೆಳೆಯ ಮೇಲೆ ಪರಿಣಾಮ ಆಗುವ ಸಾಧ್ಯತೆ ಇದೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಾರಿ, ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಗೋಧಿ ಬಿತ್ತನೆ ಆಗಿದೆ. ಸದ್ಯ, ಗೋಧಿ ಬೆಳೆಯು ಚೆನ್ನಾಗಿದೆ. ಹೀಗಾಗಿ 2023-24ನೇ ಮಾರುಕಟ್ಟೆ ವರ್ಷದಲ್ಲಿ ಗೋಧಿ ಸಂಗ್ರಹವು 300 ಲಕ್ಷ ಟನ್ಗಳಿಂದ 400 ಲಕ್ಷ ಟನ್ನಷ್ಟು ಸಹಜವಾದ ಪ್ರಮಾಣದಲ್ಲಿಯೇ ಇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.
ಕಳೆದ ವರ್ಷ ದೇಶಿ ಉತ್ಪಾದನೆ ಇಳಿಕೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಿದ್ದರಿಂದ ಗೋಧಿ ಸಂಗ್ರಹ ಕಡಿಮೆ ಆಗಿತ್ತು ಎಂದು ಅವರು ತಿಳಿಸಿದ್ದಾರೆ.
2023-24ನೇ ಬೆಳೆ ವರ್ಷದಲ್ಲಿ 11.21 ಕೋಟಿ ಟನ್ಗಳಷ್ಟು ದಾಖಲೆಯ ಉತ್ಪಾದನೆ ಆಗುವ ಅಂದಾಜನ್ನು ಸರ್ಕಾರ ಮಾಡಿದೆ.
ಚಿಲ್ಲರೆ ಮಾರಾಟ ದರ ತಗ್ಗಲಿದೆ: ಮುಕ್ತ ಮಾರುಕಟ್ಟೆಯ ಮೂಲಕ ಗೋಧಿಯನ್ನು ಮಾರಾಟ ಮಾಡುತ್ತಿರುವುದರಿಂದ ಸಗಟು ಮಾರುಕಟ್ಟೆಯಲ್ಲಿ ದರ ಇಳಿಕೆ ಕಂಡಿದೆ. ವಾರದೊಳಗೆ ಚಿಲ್ಲರೆ ಮಾರುಕಟ್ಟೆಯಲ್ಲಿಯೂ ದರ ಕಡಿಮೆ ಆಗುವ ವಿಶ್ವಾಸ ಇದೆ ಎಂದು ಅವರು ಹೇಳಿದ್ದಾರೆ.