ಚಿತ್ರದುರ್ಗ, ಜನವರಿ 28: ದಶಕಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದ ಚಿತ್ರದುರ್ಗ ಪಾಳೇಗಾರರ ಕಾಲದ ವೀರ ವನಿತೆ ಒನಕೆ ಓಬವ್ವನ ಸಮಾಧಿಯನ್ನು ಮರುನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಚಿತ್ರದುರ್ಗ ಕೋಟೆಯೊಳಗೆ ಹೈದರಾಲಿಯ ಸೈನ್ಯವನ್ನು ಸದೆಬಡಿದ ಕರ್ನಾಟಕದ ವೀರ ನಾರಿ ಒನಕೆ ಓಬವ್ವನ ಸಮಾಧಿ ಕನಿಷ್ಟ ಕಳೆದ ಐದು ದಶಕಗಳಿಂದ ಶಿಥಿಲಾವಸ್ಥೆಯಲ್ಲಿ ಇತ್ತು.
ಇದನ್ನು ನವೀಕರಿಸಲು ಸ್ಥಳಿಯರಿಂದಲೂ ಅನೇಕ ಪ್ರಯತ್ನಗಳಾದವು. ಆದರೆ ಅದು ಫಲಕಾರಿಯಾಗಲಿಲ್ಲ. ಕಳೆದ ಮೂರು ವರ್ಷಗಳಿಂದ ನಿಲುಮೆ ಬಳಗ ಈ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡುತಲಿತ್ತು. ಈಗ ಅದು ಅಂತಿಮ ಹಂತಕ್ಕೆ ಬಂದಿದೆ.
ನಿಲುಮೆ ಬಳಗದ ಈ ಪ್ರಯತ್ನಕ್ಕೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಮುನಿರಾಜು ಗೌಡರಿಂದ ಬಲ ಮತ್ತು ವೇಗ ಸಿಕ್ಕಿತು. ಮುನಿರಾಜು ಗೌಡರು ಬೆಂಗಳೂರಿನ ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ, ಇದಕ್ಕೆ ಸಂಬಂಧಪಟ್ಟ ಅಷ್ಟೂ ಇಲಾಖೆಗಳ ಕಚೇರಿಗಳನ್ನು ನಿರಂತರವಾಗಿ ಸಂಪರ್ಕದಲ್ಲಿದ್ದು, ಸಮಾಧಿ ಮರುನಿರ್ಮಾಣ ಕೆಲಸಕ್ಕೆ ವೇಗ ಕೊಟ್ಟರು. ಕಳೆದ ಆಗಸ್ಟ್ 7ಕ್ಕೆ ಈ ಕಾರ್ಯ ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಾರಂಭ ಮಾಡಲಾಗಿತ್ತು.
ಸಮಾಧಿ ನಿರ್ಮಾಣ ಆರಂಭವಾದ ಆರು ತಿಂಗಳಿಗೆ ಅಂದರೆ, ಜನವರಿ 26ರಂದು ಚಿತ್ರದುರ್ಗದ ಏಳು ಸುತ್ತಿನ ಕೋಟೆಯೊಳಗೆ ಮತ್ತೆ ಒನಕೆ ಓಬವ್ವಳ ಸಮಾಧಿ ತಲೆ ಎತ್ತಿ ನಿಂತಿದೆ.ಎಂಎಲ್ಸಿ ತುಳಸಿ ಮುನಿರಾಜು ಗೌಡರ ಭಗೀರಥ ಪ್ರಯತ್ನ, ನಿಲುಮೆ ಸಂಕಲ್ಪ ಮತ್ತು ಕೋಟ್ಯಂತರ ಕನ್ನಡಿಗರ ಆಶಯ ಫಲಿಸಿದ್ದು, ಶಿಥಿಲಗೊಂಡಿದ್ದ ಓಬವ್ವನ ಸಮಾಧಿ ಮತ್ತೆ ಸಮಾಜಕ್ಕೆ ದುರ್ಗದ ದುರ್ಗಿಯ ವೀರಗಾತೆಯನ್ನು ಹೇಳಲು ತಲೆಯೆತ್ತಿ ನಿಂತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada