ನವದೆಹಲಿ: ಪ್ರತಿಪಕ್ಷಗಳ ನಾಯಕರನ್ನು ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಪೀಡಿಸಲಾಗುತ್ತಿದೆ ಎಂಬ ಆರೋಪ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಾಮಾನ್ಯವಾಗಿದೆ.
ಸಿಬಿಐ, ಜಾರಿ ನಿರ್ದೇಶನಾಲಯಗಳನ್ನು ಬಳಸಿಕೊಂಡು ನಾಯಕರನ್ನು ಹಣಿಯಲಾಗುತ್ತದೆ. ಆದರೆ, ಈ ಆರೋಪವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಳ್ಳಿ ಹಾಕಿದ್ದಾರೆ. ಅಲ್ಲದೇ, “ಪ್ರತಿಪಕ್ಷಗಳಿಗೆ ಗದ್ದಲ ಮಾಡುವುದಷ್ಟೇ ಗೊತ್ತಿದೆ. ನ್ಯಾಯಾಲಯಗಳೇನೂ ನಮ್ಮ ಅಧೀನದಲ್ಲಂತೂ ಇಲ್ಲ” ಎಂದು ಹೇಳಿದ್ದಾರೆ. ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಎನ್ಐ ಸುದ್ದಿಗೆ ಸಂಸ್ಥೆಗೆ ನೀಡಿದ ಸಂದರ್ಶದಲ್ಲಿ ನಾನಾ ವಿಷಯಗಳ ಕುರಿತು ಅವರು ಮಾತನಾಡಿದ್ದಾರೆ .
ಕಾಂಗ್ರೆಸ್ , ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಆಮ್ ಆದ್ಮಿ ಪಾರ್ಟಿ, ಶಿವ ಸೇನಾ ಮತ್ತು ಎನ್ಸಿಪಿ ಸೇರಿದಂತೆ ಪ್ರತಿಪಕ್ಷಗಳು ಮೇಲಿಂದ ಮೇಲೆ, ಈ ವಿಷಯದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಬಿಜೆಪಿಯ ಸಿಬಿಐ ಮತ್ತು ಇಡಿ ಸೇರಿದಂತೆ ಇತರ ಏಜೆನ್ಸಿಗಳನ್ನು ಬಳಸಿಕೊಂಡು ತಮ್ಮ ಪಕ್ಷಗಳ ನಾಯಕರನ್ನು ಟಾರ್ಗೆಟ್ ಮಾಡುತ್ತಿವೆ ಎಂದು ಆರೋಪಿಸಿವೆ.
ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣವನ್ನು ಶಿವಸೇನೆ ಉಗ್ರವಾಗಿ ಟೀಕಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು, ಪ್ರತಿಪಕ್ಷಗಳ ವಿರುದ್ಧ ನಾನು ಒಬ್ಬನೇ ಹೋರಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ, ಇದು ಸತ್ಯವಲ್ಲ. ಪ್ರಧಾನಿಗಳು ರಾಜಕೀಯ ವಿರೋಧಿಗಳನ್ನು ಟಾರ್ಗೆಟ್ ಮಾಡಲು ಹಾವು, ಚೇಳು ಮತ್ತು ಮೊಸಳೆಗಳನ್ನು ಕೇಂದ್ರ ತನಿಖಾ ಸಂಸ್ಥೆಗಳ ರೂಪದಲ್ಲಿ ಸಾಕಿಕೊಂಡಿದ್ದಾರೆಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಟೀಕಿಸಲಾಗಿತ್ತು.
ಈ ಎಲ್ಲ ಆರೋಪಗಳಿಗೆ ಉತ್ತರ ನೀಡುವ ರೀತಿಯಲ್ಲಿ ಮಾತನಾಡಿರುವ ಅಮಿತ್ ಶಾ ಅವರು, ಪ್ರತಿಪಕ್ಷಗಳು ಹೇಳುತ್ತಿರುವುದರಲ್ಲಿ ಅರ್ಥವಿಲ್ಲ. ನ್ಯಾಯಾಲಯಗಳು ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತವೆಯೇ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada