ಕಾನ್ಪುರ ಫೆಬ್ರವರಿ 14: ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯ ಗ್ರಾಮವೊಂದರಲ್ಲಿ ಸೋಮವಾರ ನಡೆದ ಅತಿಕ್ರಮಣ ವಿರೋಧಿ ಅಭಿಯಾನದ ವೇಳೆ 45 ವರ್ಷದ ಮಹಿಳೆ ಮತ್ತು ಆಕೆಯ ಮಗಳು (20) ಬೆಂಕಿಗೆ ಆಹುತಿಯಾಗಿದ್ದಾರೆ.
ಮಹಿಳೆಯರು ಒಳಗಿರುವಾಗಲೇ ಅವರ ಗುಡಿಸಲಿಗೆ ಪೊಲೀಸರು ಬೆಂಕಿ ಹಚ್ಚಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಆದರೆ ಇಬ್ಬರು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ನಿನ್ನೆ ಹೇಳಿದ್ದಾರೆ. ರಾಜ್ಯ ಪೊಲೀಸರು ಈಗ 13 ಜನರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಆರೋಪಿಗಳಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ಸ್ಟೇಷನ್ ಹೌಸ್ ಆಫೀಸರ್ ಮತ್ತು ಬುಲ್ಡೋಜರ್ ಆಪರೇಟರ್ ಸೇರಿದ್ದಾರೆ. ಅವರ ಮೇಲೆ ಕೊಲೆ ಯತ್ನ ಮತ್ತು ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿದ ಆರೋಪವನ್ನು ಹೊರಿಸಲಾಗಿದೆ.
ಜಿಲ್ಲೆಯ ರೂರಾ ಪ್ರದೇಶದ ಮದೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್, ಜಿಲ್ಲಾಡಳಿತ ಮತ್ತು ಕಂದಾಯ ಅಧಿಕಾರಿಗಳು “ಗ್ರಾಮ ಸಮಾಜ” ಅಥವಾ ಸರ್ಕಾರಿ ಜಮೀನಿನ ಒತ್ತುವರಿಯನ್ನು ತೆಗೆದುಹಾಕುವ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸ್ ತಿಳಿಸಿದ್ದಾರೆ.
ತಾಯಿ ಮಗಳು ಸಜೀವ ದಹನ
ಆದರೆ ಗ್ರಾಮಸ್ಥರು ಹೇಳುವುದೇ ಬೇರೆ. ಭೂ ಒತ್ತುವರಿ ತೆರವಿಗೆ ಅಧಿಕಾರಿಗಳು ಬೆಳಿಗ್ಗೆ ಬುಲ್ಡೋಜರ್ನೊಂದಿಗೆ ಬಂದರು ಮತ್ತು ಯಾವುದೇ ಪೂರ್ವ ಸೂಚನೆ ನೀಡಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. “ಜನರು ಒಳಗೆ ಇರುವಾಗಲೇ ಅವರು ಬೆಂಕಿ ಹಚ್ಚಿದರು. ನಾವು ಹೇಗೋ ತಪ್ಪಿಸಿಕೊಂಡೆವು. ಅವರು ನಮ್ಮ ದೇವಸ್ಥಾನವನ್ನು ಒಡೆದರು. ಆದರೂ ನಾವು ಯಾರೂ ಏನನ್ನೂ ಮಾಡಲಿಲ್ಲ, ಡಿಎಂ (ಜಿಲ್ಲಾ ಮ್ಯಾಜಿಸ್ಟ್ರೇಟ್) ಸಹ ಈ ವೇಳೆ ಇದ್ದರು. ಎಲ್ಲರೂ ಓಡಿಹೋದರು, ಯಾರೂ ನನ್ನ ತಾಯಿಯನ್ನು ಉಳಿಸಲು ಸಾಧ್ಯವಾಗಲಿಲ್ಲ” ಎಂದು ಶಿವಂ ದೀಕ್ಷಿತ್ ಅಳಲು ತೋಡಿಕೊಂಡಿದ್ದಾರೆ.
ಪ್ರಮೀಳಾ ದೀಕ್ಷಿತ್ ಮತ್ತು ಅವರ ಮಗಳು ನೇಹಾ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ನಿನ್ನೆ ಹೇಳಿದ್ದಾರೆ. ಸ್ಟೇಷನ್ ಹೌಸ್ ಆಫೀಸರ್ ದಿನೇಶ್ ಗೌತಮ್ ಮತ್ತು ಪ್ರಮೀಳಾ ಅವರ ಪತಿ ಗೆಂದನ್ ಲಾಲ್ ಸಂತ್ರಸ್ತರನ್ನು ರಕ್ಷಿಸಲು ಪ್ರಯತ್ನಿಸಿದಾಗ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಡಿಯೋಗಳ ಪರಿಶೀಲನೆ, ತನಿಖೆ
“ನಮಗೆ ತಿಳಿಯುತ್ತಿರುವ ಮಾಹಿತಿಯಿಂದ, ಮಹಿಳೆ ಮತ್ತು ಅವರ ಮಗಳು ಗುಡಿಸಲಿನೊಳಗೆ ಬೀಗ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಇದು ಅವರ ಸಾವಿಗೆ ಕಾರಣವಾಗಿದೆ. ನಾವು ಸ್ಥಳಕ್ಕೆ ತಲುಪಿದ್ದೇವೆ. ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಸಹ ಇಲ್ಲಿದ್ದಾರೆ. ನಾವು ತನಿಖೆ ನಡೆಸುತ್ತೇವೆ ಮತ್ತು ಯಾವುದೇ ತಪ್ಪಾಗಿದ್ದರೆ, ನಾವು ತಪ್ಪಿತಸ್ಥರನ್ನು ಬಿಡುವುದಿಲ್ಲ, “ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಬಿಬಿಜಿಟಿಎಸ್ ಮೂರ್ತಿ ಹೇಳಿದರು.
“ಅತಿಕ್ರಮಣ ವಿರೋಧಿ ಡ್ರೈವ್ ಇದ್ದಾಗ, ವಿಡಿಯೊವನ್ನು ಚಿತ್ರೀಕರಿಸಲಾಗುತ್ತದೆ. ನಾವು ವಿಡಿಯೊವನ್ನು ಕೇಳಿದ್ದೇವೆ ಮತ್ತು ಅದನ್ನು ತನಿಖೆ ಮಾಡುತ್ತೇವೆ” ಎಂದು ಮೂರ್ತಿ ಹೇಳಿದರು.
ಪೊಲೀಸರ ಮೇಲೆ ಇಟ್ಟಿಗೆ ಎಸೆದ ಆರೋಪ
ಸಾವಿನ ನಂತರ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ. ಗ್ರಾಮಸ್ಥರು ಪೊಲೀಸರ ಮೇಲೆ ಇಟ್ಟಿಗೆ ಎಸೆದಿದ್ದು, ಪೊಲೀಸರು ಸ್ಥಳದಿಂದ ತೆರಳಿದ್ದಾರೆ. ಆಪಾದಿತ ಕೊಲೆಗೆ ಸಂಬಂಧಿಸಿದಂತೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಮೈತಾ) ಜ್ಞಾನೇಶ್ವರ್ ಪ್ರಸಾದ್, ಲೇಖ್ಪಾಲ್ ಸಿಂಗ್ ಮತ್ತು ಇತರರ ವಿರುದ್ಧ ಪ್ರಥಮ ಮಾಹಿತಿ ವರದಿ ಅಥವಾ ಎಫ್ಐಆರ್ ಅನ್ನು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ನ್ಯಾಯ ಕೊಡಿಸುವ ಭರವಸೆ
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನ್ಪುರ ವಲಯ) ಅಲೋಕ್ ಸಿಂಗ್, ವಿಭಾಗೀಯ ಆಯುಕ್ತ ರಾಜ್ ಶೇಖರ್ ಅವರೊಂದಿಗೆ ಗ್ರಾಮಸ್ಥರನ್ನು ಸಮಾಧಾನಪಡಿಸಲು ಗ್ರಾಮಕ್ಕೆ ಭೇಟಿ ನೀಡಿದರು. ಯಾರೇ ಕಾರಣರಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆಗೆ ಆದೇಶಿಸಲಾಗಿದೆ ಎಂದು ಶೇಖರ್ ಹೇಳಿದ್ದಾರೆ. “ಇದು ಅತ್ಯಂತ ದುರದೃಷ್ಟಕರ ಘಟನೆ, ನಾವು ಕುಟುಂಬದೊಂದಿಗೆ ಇದ್ದೇವೆ, ನಾವು ಹೊಣೆಗಾರರನ್ನು ಬಿಡುವುದಿಲ್ಲ” ಎಂದು ಅವರು ಹೇಳಿದರು.
ಸಮಾಜವಾದಿ ಪಕ್ಷವು ಈಘಟನೆಯಿಂದ ಆಡಳಿತವನ್ನು ದೂಷಿಸಿದೆ. “ಯೋಗಿ (ಆದಿತ್ಯನಾಥ್) ಸರ್ಕಾರದಲ್ಲಿ, ಬ್ರಾಹ್ಮಣ ಕುಟುಂಬಗಳನ್ನು ಟಾರ್ಗೆಟ್ ಮಾಡಲಾಗಿದೆ ಮತ್ತು ಇಂತಹ ಘಟನೆಗಳು ಆಯ್ದವಾಗಿ ನಡೆಯುತ್ತಿವೆ. ದಲಿತರು ಮತ್ತು ಹಿಂದುಳಿದವರಂತೆ ಬ್ರಾಹ್ಮಣರು ಕೂಡ ಯೋಗಿ ಸರ್ಕಾರದ ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ” ಎಂದು ವಿರೋಧ ಪಕ್ಷ ಹಿಂದಿಯಲ್ಲಿ ಟ್ವೀಟ್ ಮಾಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada