ಇಸ್ಲಮಾಬಾದ್, ಏ.10- ಸುದೀರ್ಘ ಸಂಸತ್ ಕಲಾಪ, ಹಲವು ನಾಟಕೀಯ ಬೆಳವಣಿಗೆಗಳ ನಡುವೆ ಅವಿಶ್ವಾಸ ಗೊತ್ತುವಳಿಯಲ್ಲಿ ಇಮ್ರಾನ್ ಖಾನ್ ಸೋಲು ಕಂಡು ಪಾಕಿಸ್ತಾನದ ಪ್ರಧಾನಿ ಪಟ್ಟದಿಂದ ವಜಾಗೊಂಡಿದ್ದಾರೆ.
ಮುಂದಿನ ಪ್ರಧಾನಿ ಆಯ್ಕೆಗೆ ಕಸರತುಗಳು ಶುರುವಾಗಿವೆ. ಕೊನೆಯ ಎಸೆತದವರೆಗೂ ಹೋರಾಡುತ್ತೇನೆ ಎಂದು ಘೋಷಿಸಿ ರಾಜೀನಾಮೆ ನೀಡಲು ನಿರಾಕರಿಸಿದ್ದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನಿನ್ನೆ ಅವಿಶ್ವಾಸ ವಿರುದ್ಧ 174 ಮಂದಿ ಮತಚಲಾಯಿಸಿದ್ದರು. ಅವಿಶ್ವಾಸ ಮಂಡನೆ ವೇಳೆ ಕಲಾಪದಲ್ಲಿ ಇಮ್ರಾನ್ ಖಾನ್ ಹಾಜರಿಲ್ಲದೆ ಪಲಾಯನಗೈದಿದ್ದರು. ಅವಿಶ್ವಾಸ ನಿಲುವಳಿ ಗೆಲುವ ಕಂಡ ಬಳಿಕ ಪಾಕ್ನ ಸಂಸತ್ ಇಮ್ರಾನ್ ಖಾನ್ರನ್ನು ಪದಚ್ಯುತಗೊಳಿಸಿದೆ.
ಬೆಲೆ ಏರಿಕೆ, ಆರ್ಥಿಕ ಹಿಂಜರಿತ, ಕೋವಿಡ್ ನಿರ್ವಹಣೆಯಲ್ಲಿನ ಲೋಪಗಳು ಸೇರಿದಂತೆ ಹಲವು ಕಾರಣಗಳಿಂದ ಇಮ್ರಾನ್ ಖಾನ್ ವಿರುದ್ಧ ಆಕ್ರೋಶಗಳು ಕೇಳಿ ಬಂದಿದ್ದವು. ಕಳೆದ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುವ ವೇಳೆಯಲ್ಲಿ ಇಮ್ರಾನ್ ಖಾನ್ ರಷ್ಯಾ ಪ್ರವಾಸ ಕೈಗೊಂಡು ಉಕ್ರೇನ್ ಪರ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಇದಕ್ಕಾಗಿ ವಿದೇಶದಿಂದ ತಮ್ಮನ್ನು ಪದಚ್ಯುತಗೊಳಿಸಲು ಪಾಕಿಸ್ತಾನದ ಪ್ರಮುಖರಿಗೆ ಪತ್ರ ಬಂದಿದೆ ಎಂದು ಇಮ್ರಾನ್ ಖಾನ್ ಬಹಿರಂಗ ವೇದಿಕೆಯಲ್ಲಿ ಆರೋಪ ಮಾಡಿ, ಮುಚ್ಚಿದ ಪತ್ರವನ್ನು ಪ್ರದರ್ಶಿಸಿದರು. ವಿದೇಶಿ ಶಕ್ತಿಗಳು ಪಾಕಿಸ್ತಾನದ ಆಗುಹೋಗುಗಳಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡುವುದಿಲ್ಲ ಎಂದು ಆರೋಪ ಮಾಡುವ ಮೂಲಕ ಅಧಿಕಾರ ಉಳಿಸಿಕೊಳ್ಳಲು ಹೊಸ ವರಸೆ ಆರಂಭಿಸಿದರು.
ಮಾರ್ಚ್ 28ರಂದು ಇಮ್ರಾನ್ ಖಾನ್ ವಿರುದ್ಧ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಷ್ ಅಧ್ಯಕ್ಷತೆಯಲ್ಲಿ ಅವಿಶ್ವಾಸ ಗೋತ್ತುವಳಿ ಮಂಡನೆ ಮಾಡಲಾಗಿತ್ತು. ಏಪ್ರಿಲ್ 3ರಂದು ನಡೆದ್ದ ಅಧಿವೇಶನದಲ್ಲಿ ಅವಿಶ್ವಾಸ ನಿಲುವಳಿ ಚರ್ಚೆಗೆ ಅವಕಾಶವೇ ಕೊಡದೆ ಲೋಕಸಭೆಯ ಉಪಾಧ್ಯಕ್ಷ ಖಾಸಿಂ ಸೂರಿ ಗೋತ್ತುವಳಿಯನ್ನು ವಜಾಗೊಳಿಸಿದರು. ಅದರ ಬೆನ್ನಲ್ಲೆ ಇಮ್ರಾನ್ ಖಾನ್ ಶಿಫಾರಸ್ಸು ಮೇರೆಗೆ ರಾಷ್ಟ್ರಾಧ್ಯಕ್ಷರು ಸಂಸತ್ ಅನ್ನು ಅನೂರ್ಜಿತಗೊಳಿಸಿದರು.
ಹೊಸದಾಗಿ ಚುನಾವಣೆಗೆ ತಯಾರಿಗಳು ಆರಂಭವಾಗಿದ್ದವು. ಆದರೆ ಮೂರು ತಿಂಗಳ ಒಳಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಆಯೋಗ ಚುನಾವಣಾ ಒತ್ತಡವನ್ನು ತಿರಸ್ಕಾರ ಮಾಡಿತ್ತು. ಈ ನಡುವೆ ಪ್ರತಿಪಕ್ಷಗಳ ನಾಯಕರು ಪರ್ಯಾಯ ಸಂಸತ್ ನಡೆಸಿ ಇಮ್ರಾನ್ ಖಾನ್ರ ವಿರುದ್ಧ ಅವಿಶ್ವಾಸ ನಿಲುವಳಿ 177 ಮತಗಳ ಅಂತರದಿಂದ ಗೆಲುವು ಸಾಧಿಸಿದೆ ಎಂಬ ನಿರ್ಣಯ ಅಂಗೀಕರಿಸಿದ್ದರು.ಜೊತೆಗೆ ಸಂಸತ್ ಮೆಟ್ಟಿಲೇರಿದ್ದವು.
ಪ್ರತಿಪಕ್ಷಗಳ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಐವರ ವಿಸ್ತೃತ ಪೀಠ, ಉಪಾಧ್ಯಕ್ಷರ ತೀರ್ಮಾನ ಅಸಂವಿಧಾನಿಕ ಎಂದು ತೀರ್ಪು ನೀಡಿದ್ದಲ್ಲದೆ, ಸಂಸತ್ನಲ್ಲಿ ಏ.9ರಂದು ಬಹುಮತ ಸಾಬೀತು ಪಡಿಸುವಂತೆ ಸೂಚಿಸಿತ್ತು.
ಅದರ ಪ್ರಕಾರ ನಿನ್ನೆ ಮಧ್ಯ ರಾತ್ರಿ 12 ಗಂಟೆಯವರೆಗೂ ಅವೇಶನ ನಡೆದಿತ್ತು. ಪ್ರತಿಪಕ್ಷಗಳು ಚರ್ಚೆಯಲ್ಲಿ ಹೆಚ್ಚು ಆಸಕ್ತಿ ತೋರಿಸದೆ ಮತದಾನಕ್ಕೆ ಸೀಮಿತವಾಗಿದ್ದವು, ಮಾತನಾಡಿದ ಒಂದಿಬ್ಬರು ಕೂಡ ಇಮ್ರಾನ್ ಖಾನ್ ಅವರ ಭಾರತ ಪ್ರೀತಿಗೆ ಆಕ್ಷೇಪ ವ್ಯಕ್ತ ಪಡಿಸಿ ದೇಶ ಬಿಟ್ಟು ಭಾರತಕ್ಕೆ ಹೋಗುವಂತೆ ಲೇವಡಿ ಮಾಡಿದರು.
ಇಮ್ರಾನ್ ಖಾನ್ ಪರವಾಗಿ ಮಾತನಾಡಿದ ಬಹಳಷ್ಟು ಮಂದಿ ವಿದೇಶಿ ಶಕ್ತಿಗಳ ಕೈವಾಡವಿದೆ. ಅದಕ್ಕೆ ನಮ್ಮ ದೇಶದ ಜನಪ್ರತಿನಿಗಳು ಬಲಿಯಾಗಬಾರದು ಎಂದು ಮನವೋಲಿಕೆಯ ಯತ್ನ ನಡೆಸಿದರು. ಕಲಾಪ ನಡೆಯುವಾಗ ಇಮ್ರಾನ್ ಖಾನ್ ಆಡಳಿತ ಕೇಂದ್ರಕ್ಕೆ ಆಗಮಿಸಿ ತಮ್ಮ ಕಚೇರಿಯಲ್ಲಿ ಕುಳಿತಿದ್ದರು. ಆದರೆ ಸಂಸತ್ಗೆ ಹಾಜರಾಗಲಿಲ್ಲ.
ಈ ಮೊದಲು ಇಮ್ರಾನ್ ಖಾನ್ರನ್ನು ಬೆಂಬಲಿಸಿದ್ದ ಲೋಕಸಭೆಯ ಅಧ್ಯಕ್ಷ ಅಸಾದ್ ಖೈಸರ್, ಉಪಾಧ್ಯಕ್ಷ ಖಾಸಿಂ ಸೂರಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಇಮ್ರಾನ್ ಖಾನ್ ಕೂಡ ಅವಿಶ್ವಾಸ ಗೋತ್ತುವಳಿಯಲ್ಲಿ ಭಾಷಣ ಮಾಡಿ ತಮ್ಮ ರಾಜೀನಾಮೆ ನೀಡಲಿದ್ದಾರೆ ಎಂಬ ಅಂದಾಜುಗಳಿದ್ದವು. ಆದರೆ ಕೊನೆಯ ಕ್ಷಣದವರೆಗೂ ಅಧಿಕಾರ ಉಳಿಸಿಕೊಳ್ಳಲು ಇಮ್ರಾನ್ ಖಾನ್ ಪ್ರಯತ್ನಿಸಿದರು.
ಅವಿಶ್ವಾಸ ನಿಲುವಳಿ ಚರ್ಚೆಯ ನಡುವೆ ಇಮ್ರಾನ್ ಖಾನ್ ಸುಪ್ರೀಂಕೋರ್ಟ್ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅದು ಮಧ್ಯ ರಾತ್ರಿ ವಿಚಾರಣೆಗೆ ಬಂದಿತ್ತು. ಉಪ ಸ್ಪೀಕರ್ ಅವರ ಆದೇಶವನ್ನು ಅನೂರ್ಜಿತಗೊಳಿಸಿರುವ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಮರು ಪರಿಶೀಲನೆಗೆ ಒಳಪಡಿಸಬೇಕು.
ವಿರೋಧ ಪಕ್ಷದ ಪ್ರಮುಖ ನಾಯಕ ಅಯಾಜ್ ಸಿದ್ಧಿಕಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಸಂಸತ್ ಕಲಾಪ ನಡೆಸಿದ್ದರು. 342 ಸಂಸದರ ಸಂಖ್ಯೆಯ ಸಂಸತ್ನಲ್ಲಿ ಇಮ್ರಾನ್ ಖಾನ್ ವಿರುದ್ಧ 174 ಮಂದಿ ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸಿದರು. ಇಮ್ರಾನ್ ಖಾನ್ ಬೆಂಬಲಿಗರು ಸಭಾತ್ಯಾಗ ಮಾಡಿದರು. ಅವಿಶ್ವಾಸ ಗೋತ್ತುವಳಿ ಸೋಲು ಕಾಣುತ್ತಿದ್ದಂತೆ ಇಮ್ರಾನ್ ಖಾನ್ ಪ್ರಧಾನಿ ಕಚೇರಿ ಮತ್ತು ನಿವಾಸವನ್ನು ತೆರವು ಮಾಡಿದರು. ತಮ್ಮನ್ನು ಬಂಧಿಸುವ ಹುನ್ನಾರ ನಡೆದಿದೆ ಎಂದು ಅವರು ಆರೋಪಿಸಿದರು.
ಆದರೆ ಮುಂದಿನ ಪ್ರಧಾನಿ ಎಂದು ಬಿಂಬಿಸಲಾಗಿರುವ ಪಿಎಂಎಲ್-ಎನ್ ಮುಖ್ಯಸ್ಥ ಶೆಹಬಾಜ್ ಷರೀಫ್, ಹೊಸ ಆಡಳಿತ ವ್ಯವಸ್ಥೆಯಲ್ಲಿ ಸೇಡಿನ ರಾಜಕೀಯ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ನಾನು ಹಿಂದಿನ ಘಟನೆಗಳ ಬಗ್ಗೆ ನೆನಪಿಸಿಕೊಳ್ಳಲು ಬಯಸುವುದಿಲ್ಲ. ನಾವು ಅವರನ್ನು ಕ್ಷಮಿಸುತ್ತೇವೆ ಮತ್ತು ಮುಂದಡಿ ಇಡುತ್ತೇವೆ. ನಾವು ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳಲು ಬಯಸುವುದಿಲ್ಲ ಮತ್ತು ತಾರತಮ್ಯ ಮಾಡುವುದಿಲ್ಲ.
ನಾವು ಜನರನ್ನು ಜೈಲಿಗೆ ಕಳುಹಿಸಲು ಬಯಸುವುದಿಲ್ಲ. ಕಾನೂನು ತನ್ನ ಕ್ರಮವನ್ನು ತಾನು ತೆಗೆದುಕೊಳ್ಳಲಿದೆ ಎಂದಿದ್ದಾರೆ.
ಪಾಕಿಸ್ತಾನ್ ಪಿಪಲ್ಸ್ ಪಾರ್ಟಿ ಅಧ್ಯಕ್ಷರಾದ ಬಿಲ್ವಾಲ ಬುಟ್ಟೊ ಜರ್ದಾರಿ, ಅವಿಶ್ವಾಸ ಗೋತ್ತುವಳಿಯನ್ನು ಗೆದ್ದಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಪಾಕಿಸ್ತಾನದ ಇತಿಹಾಸದಲ್ಲಿ ಈವರೆಗೂ ಯಾರು ಐದು ವರ್ಷ ಆಡಳಿತವನ್ನು ಪೂರ್ಣಗೊಳಿಸಿಲ್ಲ. ಹಾಗೇಯೇ ಅವಿಶ್ವಾಸ ಗೋತ್ತುವಳಿಯ ಮೂಲಕ ಪ್ರಧಾನಿಯನ್ನು ಪದಚ್ಯುತಗೊಳಿಸಿದ್ದು ಕೂಡ ಇದೆ ಮೊದಲಾಗಿದೆ.
ಮುಂದಿನ ಪ್ರಧಾನಿ ಆಯ್ಕೆಗೆ ಏಪ್ರಿಲ್ 11ರಂದು ಬೆಳಗ್ಗೆ ಬದಲು ಮಧ್ಯಾಹ್ನ 2 ಗಂಟೆಗೆ ಸಂಸತ್ ಸಮಾವೇಶಗೊಳ್ಳಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada