ಡೆಹ್ರಾಡೂನ್, ಜನವರಿ 28: ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಉತ್ತರಾಖಂಡದ ಮಾಜಿ ಶಾಸಕ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿಯು ವಿಧಾನಸಭೆ ಸ್ಥಾನಗಳನ್ನು ಭಾರಿ ಬೆಲೆ ಮಾರಾಟ ಮಾಡುತ್ತಿದೆ ಎಂದು ಉತ್ತರಾಖಂಡ ಮಾಜಿ ಶಾಸಕರಾದ ಧನ್ ಸಿಂಗ್ ನೇಗಿ ಮತ್ತು ರಾಜ್ಕುಮಾರ್ ತುಕ್ರಾಲ್ ಆರೋಪಿಸಿದ್ದಾರೆ.
ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಂತೆ ಈ ಹೇಳಿಕೆ ನೀಡಿದ್ದಾರೆ.
ಉತ್ತರಾಖಂಡ: 59 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೋಷಿಸಿದ ಬಿಜೆಪಿ,10ಹಾಲಿ ಶಾಸಕರಿಗೆ ಶಾಕ್
ಕೋಟ್ಯಂತರ ರೂಪಾಯಿ ಕೊಟ್ಟು ಪಕ್ಷದಿಂದ ಟಿಕೆಟ್ ತೆಗೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ನನ್ನಲ್ಲಿದೆ ಎಂದಿರುವ ಮಾಜಿ ಶಾಸಕರು, ಇನ್ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವವನ್ನು ಗಟ್ಟಿಗೊಳಿಸುವುದೇ ತಮ್ಮ ಕೆಲಸ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಜ್ಕುಮಾರ್ ತುಕ್ರಾಲ್ ಅವರು ಪಕ್ಷ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದು, ಉತ್ತರಾಖಂಡದಲ್ಲಿ ಆಡಳಿತ ಪಕ್ಷದ ಮತ್ತೊಬ್ಬ ಹಾಲಿ ಶಾಸಕ ಪಕ್ಷಾಂತರ ಮಾಡಿದಂತಾಗಿದೆ. ಇದಕ್ಕೂ ಮುನ್ನ ಬಿಜೆಪಿಯ ಮಾಜಿ ನಾಯಕ ಕಿಶೋರ್ ಉಪಾಧ್ಯಾಯ ಕೂಡ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು.
ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ಫೆಬ್ರವರಿ 14ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು 70 ಸ್ಥಾನಗಳ ಫಲಿತಾಂಶ ಹೊರಬೀಳಲಿದೆ.
ಕಾಂಗ್ರೆಸ್ಗೆ ಸೇರಿದ ಕೆಲವೇ ಗಂಟೆಗಳಲ್ಲಿ ನೇಗಿ ಅವರು ತಮ್ಮ ಹಿಂದಿನ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಹಣಕ್ಕಾಗಿ ಅಭ್ಯರ್ಥಿಗಳನ್ನು ಮಾರಾಟ ಮಾಡುತ್ತಿದೆ ಎಂದು ಹೇಳಿದ್ದಾರೆ.
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರಿದ ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ನೇಗಿ, ತೆಹ್ರಿ ವಿಧಾನಸಭಾ ಕ್ಷೇತ್ರದ ಟಿಕೆಟ್ನ್ನು ಬಿಜೆಪಿ 10 ಕೋಟಿ ರೂ.ಗೆ ಮಾರಾಟ ಮಾಡಿದೆ. ಬಿಜೆಪಿಯು ‘ಟಿಕೆಟ್ ಮಾರಾಟ ಪಕ್ಷ’ ಎಂದು ಜರಿದಿದ್ದಾರೆ.
ಉತ್ತರಾಖಂಡ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದ್ದು, ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಚುನಾವಣೆ ಎದುರಿಸಲು ಸನ್ನದ್ಧವಾಗುತ್ತಿವೆ. ಅದರಲ್ಲೂ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಗಂಭೀರವಾಗಿ ತೆಗೆದುಕೊಂಡಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಉತ್ತರಾಖಂಡದ 70 ಕ್ಷೇತ್ರಗಳ ಪೈಕಿ 59 ಸ್ಥಾನಗಳಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಗುರುವಾರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಖತಿಮಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪುಷ್ಕರ್ ಸಿಂಗ್ ಧಾಮಿ ಖತಿಮಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಪಕ್ಷ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಆರು ಮಹಿಳಾ ಅಭ್ಯರ್ಥಿಗಳಿದ್ದಾರೆ. 14 ಬ್ರಾಹ್ಮಣ ಅಭ್ಯರ್ಥಿಗಳು, 22 ರಜಪೂತ ಅಭ್ಯರ್ಥಿಗಳು, 13 ಎಸ್ಸಿ ಅಭ್ಯರ್ಥಿಗಳು ಮತ್ತು ಒಬ್ಬ ಅಭ್ಯರ್ಥಿ ಎಸ್ಟಿ ಸಮುದಾಯದವರಾಗಿದ್ದಾರೆ.
ಮೊದಲ ಪಟ್ಟಿಯ 59 ಅಭ್ಯರ್ಥಿಗಳ ಪೈಕಿ 18 ಮಂದಿ ಸ್ನಾತಕೋತ್ತರ ಪದವಿ ಪಡೆದಿದ್ದರೆ, 31 ಮಂದಿ ಪದವೀಧರರಾಗಿದ್ದಾರೆ. ಬಿಜೆಪಿ ಒಬ್ಬ ಮಾಜಿ ಸೈನಿಕ, ಒಬ್ಬ ವೈದ್ಯ ಮತ್ತು ಏಳು ರೈತರಿಗೆ ಟಿಕೆಟ್ ನೀಡಿದೆ. ನಾಲ್ವರು ಆಧ್ಯಾತ್ಮಿಕ ನಾಯಕರಿಗೂ ಬಿಜೆಪಿ ಟಿಕೆಟ್ ನೀಡಲಾಗಿದೆ. ಇಂದು ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ 40 ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದ್ದು, 10 ಹಾಲಿ ಶಾಸಕರನ್ನು ಪಕ್ಷ ಕೈ ಬಿಟ್ಟಿತ್ತು.
ಗಂಗೊಳ್ಳಿಹತ್ ಶಾಸಕ ಮೀನಾ ಗಂಗೋಳ, ಕಾಪ್ಕೋಟ್ ಶಾಸಕ ಬಲ್ವಂತ್ ಸಿಂಗ್ ಭೋರಿಯಾಲ್, ದ್ವಾರಹತ್ ಶಾಸಕ ಮಹೇಶ್ ಸಿಂಗ್ ನೇಗಿ, ಅಲ್ಮೋರಾ ಶಾಸಕ ರಘುನಾಥ್ ಸಿಂಗ್ ಚೌಹಾಣ್ ಮತ್ತು ಕಾಶಿಪುರ ಶಾಸಕ ಹರ್ಭಜನ್ ಸಿಂಗ್ ಚೀಮಾ ಅವರಿಗೆ ಟಿಕೆಟ್ ನೀಡಲಾಗಿಲ್ಲ.
ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಮದನ್ ಕೌಶಿಕ್ ಅವರು ಹರ್ದ್ವಾರದಿಂದ ಸ್ಪರ್ಧಿಸಲಿದ್ದಾರೆ. ಸುರೇಶ್ ಚೌಹಾಣ್ ಗಂಗೋತ್ರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನರೇಂದ್ರನಗರದಿಂದ ಪಕ್ಷದ ನಾಯಕ ಸುಬೋಧ್ ಉನಿಯಾಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಸವಿತಾ ಕಪೂರ್ ಡೆಹ್ರಾಡೂನ್ ಕ್ಯಾಂಟ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada