ರಾಜ್ಯಪಾಲರ ಭಾಷಣಕ್ಕೆ ವಂದನಾರ್ಪಣೆ ಪ್ರಸ್ತಾವದ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸದಸ್ಯ ಡಿ.ಎಸ್.ಅರುಣ್, ‘ದೇಶದಲ್ಲಿ ತುರ್ತು ಪರಿಸ್ಥಿತಿ ಇದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಅವರು ಡಿ.ಜೆ.ಹಳ್ಳಿ- ಕೆ.ಜೆ.ಹಳ್ಳಿಯ ಗಲಭೆ ಸಂದರ್ಭದಲ್ಲಿ ತಲವಾರು ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು ಅಥವಾ ಕರಾವಳಿಯಲ್ಲಿ ನಡೆದ ಗಲಭೆಯನ್ನು ಉದ್ದೇಶಿಸಿ ಹಾಗೆ ಹೇಳುತ್ತಿದ್ದಾರೋ ತಿಳಿಯುತ್ತಿಲ್ಲ’ ಎಂದು ವ್ಯಂಗ್ಯವಾಗಿ ಹೇಳಿದರು.
‘ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲಿಗೆ ಹೋದ ಅನೇಕರು ಈ ಸದನದಲ್ಲಿದ್ದಾರೆ. ನಮ್ಮ ಕುಟುಂಬದ 15 ಮಂದಿ ಜೈಲಿಗೆ ಹೋಗಿದ್ದರು. ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದವರನ್ನೆಲ್ಲಾ ಆಗ ಜೈಲಿಗೆ ಅಟ್ಟಲಾಗಿತ್ತು. ಈಗ ಅಂತಹ ಸ್ಥಿತಿ ಇಲ್ಲ. ಕರಾವಳಿ ಹಾಗೂ ರಾಜ್ಯದ ಕೆಲವು ಕಡೆ ಬಿಗುವಿನ ಸ್ಥಿತಿ ನಿರ್ಮಾಣವಾದರೂ ಸರ್ಕಾರ ಅದನ್ನು ನಿಯಂತ್ರಿಸಿದೆ. ಆದರೂ, ಕೆಲವರು ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ’ ಎಂದು ದೂರಿದರು.
‘ಸಿಆರ್ಪಿಸಿ ಸೆಕ್ಷನ್ 144ರ ನಿಷೇಧಾಜ್ಞೆ ಜಾರಿ ಇದ್ದಾಗಲೂ ಶಿವಮೊಗ್ಗದ ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಿಸಲಾಯಿತು’ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ನ ಸಲೀಂ ಅಹಮದ್, ‘ರಾಷ್ಟ್ರಧ್ವಜ ಹಾರಿಸಿದರೆ ಅದು ಹೇಗೆ ತಪ್ಪಾಗುತ್ತದೆ. ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಸಚಿವರೊಬ್ಬರು ಹೇಳಿದ್ದಾರೆ. ಅದು ಸರಿಯೇ’ ಎಂದು ಪ್ರಶ್ನಿಸಿದರು.
‘ರಾಷ್ಟ್ರಧ್ವಜ ಹಾರಿಸಿದ್ದು ತಪ್ಪಲ್ಲ. ಆದರೆ ಆ. 15ರಂದು ಹಾಗೂ ಜ.26ರಂದು ಮಾತ್ರ ಅದನ್ನು ಹಾರಿಸಲಾಗುತ್ತದೆ’ ಎಂದು ಬಿಜೆಪಿ ಸದಸ್ಯರು ಸಮರ್ಥಿಸಿಕೊಂಡರು.
ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ‘ಸಿಆರ್ಪಿಸಿ ಸೆಕ್ಷನ್ 144 ಜಾರಿಯಲ್ಲಿರುವಾಗ ರಾಷ್ಟ್ರಧ್ವಜ ಹಾರಿಸುವುದು ತಪ್ಪು ಎನ್ನುವುದಕ್ಕಿಂತ ದೊಡ್ಡ ದೇಶದ್ರೋಹ ಬೇರೆ ಇಲ್ಲ. ಯಾವ ದಿನ ಬೇಕಾದರೂ ರಾಷ್ಟ್ರಧ್ವಜ ಹಾರಿಸಬಹುದು ಎಂದು ನವೀನ್ ಜಿಂದಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಸದನಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಬೇಡಿ’ ಎಂದರು.
ಬಳಿಕ ಸಭಾಪತಿ ಬಸವರಾಜ ಹೊರಟ್ಟಿಯವರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: