ಹಾವೇರಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಾರ್ವತ್ರಿಕ ಚುನಾವಣೆ-2017ರಲ್ಲಿ 3-ನೆಗಳೂರ (ಸಾಮಾನ್ಯ) ಚುನಾವಣಾ ಕ್ಷೇತ್ರದಿಂದ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಶಿವಕುಮಾರ ಮಾಹೂರ ಅವರು ನಾಲ್ಕೂವರೆ ವರ್ಷಗಳ ಸುದೀರ್ಘ ಕಾನೂನು ಹೋರಾಟದಿಂದ ‘ವಿಜೇತ ಅಭ್ಯರ್ಥಿ’ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.2017ರ ಜನವರಿ 14ರಂದು ನಡೆದಿದ್ದ ಎಪಿಎಂಸಿ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವಕುಮಾರ್ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೃಷ್ಣರೆಡ್ಡಿ ಮೈದೂರ ಈ ಇಬ್ಬರೂ 1149 ಮತಗಳನ್ನು ಪಡೆದು ಸಮಬಲ ಸ್ಥಾನ ಗಳಿಸಿದ್ದರು. ನಂತರ ಲಾಟರಿ ಮೂಲಕ ಕೃಷ್ಣರೆಡ್ಡಿ ಮೈದೂರ ಅವರು ಆಯ್ಕೆಯಾಗಿದ್ದರು.ನಂತರ ನಡೆದ ಬೆಳವಣಿಗೆಯಲ್ಲಿ ಒಂದು ಮತ ತಹಶೀಲ್ದಾರ್ ಕಚೇರಿಯ ಕಸದ ಬುಟ್ಟಿಯಲ್ಲಿ ಸಿಕ್ಕಿತ್ತು. ನಂತರ ಶಿವಕುಮಾರ್ ಅವರು ಮತ ಎಣಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಶಿವಕುಮಾರ ಪರ ಆದೇಶ ನೀಡಿದೆ.’ಅಂದಿನ ತಹಶೀಲ್ದಾರ್ 3 ಮತಗಳನ್ನು ಕದಿಯುವ ಮೂಲಕ ಅಕ್ರಮ ಎಸಗಿ, ಶಿವಕುಮಾರ್ ಅವರು ಸೋತಿದ್ದಾರೆ ಎಂದು ಘೋಷಣೆ ಮಾಡಿದ್ದರು. ಮತ ಎಣಿಕೆಯಲ್ಲಿ ಅಕ್ರಮವೆಸಗಿದ್ದ ಅಂದಿನ ತಹಶೀಲ್ದಾರ್ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಒತ್ತಾಯಿಸಿದ್ದಾರೆ.’ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರ ಅವಧಿಯಲ್ಲಿ ನಮ್ಮ ಅಭ್ಯರ್ಥಿಯನ್ನು ಸೋಲಿಸಲು ಕೆಳಮಟ್ಟದ ರಾಜಕಾರಣ ಮಾಡಿತ್ತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೃಷ್ಣರೆಡ್ಡಿ ಮೈದೂರ ಸೋತಿದ್ದರೂ, 4 ವರ್ಷ 10 ತಿಂಗಳು ಅಧಿಕಾರವನ್ನು ಅನುಭವಿಸಿ ನೆಗಳೂರು ಕ್ಷೇತ್ರದ ಜನರ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕಾಂಗ್ರೆಸ್ಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದ್ದಾರೆ.ಎಪಿಎಂಸಿ ಸದಸ್ಯ ಶಿವಕುಮಾರ ಮಾಹೂರ ಅವರ ಅಧಿಕಾರವಧಿ ಫೆ.21ಕ್ಕೆ ಅಂತ್ಯಗೊಳ್ಳಲಿದೆ. ಶಿವಕುಮಾರ ಪರ ವಕೀಲ ಎಸ್.ಆರ್.ಹೆಗಡೆ ವಕಾಲತ್ತು ವಹಿಸಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada